ಮಂಗಳೂರು ದಸರೆಗೆ ವೀರೇಂದ್ರ ಹೆಗ್ಗಡೆರಿಂದ ಚಾಲನೆ
ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿಯ ನವರಾತ್ರಿ ಉತ್ಸವ ಅಕ್ಟೋಬರ್ 5 ರಿಂದ ಆರಂಭಗೊಳ್ಳಲಿದೆ. ನವದುರ್ಗೆಯರ ಹಾಗೂ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಶುಭಕಾರ್ಯಕ್ಕೆ ನಾಂದಿ ಹಾಡಲಾಗುತ್ತದೆ.ಅ.14ರಂದು ಶಾರದಾ ಮಾತೆಯ ವಿಗ್ರಹದೊಂದಿಗೆ ವೈಭವದ ದಸರಾ ಮೆರವಣಿಗೆ ನಗರದಲ್ಲಿ ನಡೆಯಲಿದೆ ಎಂದು ಎಚ್ ಎಸ್ ಸಾಯಿರಾಂ ಹೇಳಿದರು.
ಕಳೆದ ಬಾರಿ ಶತಮಾನೋತ್ಸವ ಆಚರಿಸಿದ ಕ್ಷೇತ್ರದಲ್ಲಿ ಕಳೆದ 23 ವರ್ಷಗಳಿಂದ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ. ಉತ್ಸವದ ಅಂಗವಾಗಿ ಕ್ಷೇತ್ರದ ಸಂತೋಷಿ ಕಲಾ ಮಂಟಪದಲ್ಲಿ ಅ.5 ರಿಂದ ಪ್ರತಿದಿನ ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅ.15 ರವರೆಗೆ ನಡೆಯಲಿದೆ ಎಂದು ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.
ಈ ಬಾರಿಯೂ ಮಂಗಳೂರು ದಸರಾ ಮೆರವಣಿಗೆ ಕರಾವಳಿಯ ಸಾಂಸ್ಕೃತಿಕ ವೈವಿಧ್ಯತೆಗಳೊಂದಿಗೆ ರಾಜ್ಯದ ವಿವಿಧ ತಂಡಗಳು ಹಾಗೂ ರಾಷ್ಟ್ರ ಮಟ್ಟದ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಲಿವೆ.
ಶಂಕರ್ ಶ್ಯಾನಭೋಗ್, ಪುತ್ತೂರು ನರಸಿಂಹ ನಾಯಕ್, ಪಲ್ಲವಿ ಪ್ರಭು ಮೊದಲಾದ ಕಲಾವಿದರು ಭಾಗವಹಿಸುವ ಬಗ್ಗೆ ಸೂಚನೆ ನೀಡಿದ್ದಾರೆ. ಇನ್ನು ಕೆಲವು ಕಲಾವಿದರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಸದಸ್ಯರಾದ ಬಿ.ಕೆ.ತಾರನಾಥ್, ಮಹೇಶ್ಚಂದ್ರ,ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರಾದ ದೇವೇಂದ್ರ ಪೂಜಾರಿ, ದೇವದಾಸ್ ಕಟ್ಟೆಮಾರ್, ಡಾ.ಅನಸೂಯ ಸಾಲ್ಯಾನ್, ದೇವದಾಸ್ ಸುವರ್ಣ, ಎನ್.ಹರಿಶ್ಚಂದ್ರ, ಬಿ.ಟಿ.ಸಾಲ್ಯಾನ್. ಡಾ.ಬಿ.ಜೆ.ಸುವರ್ಣ ಹಾಗೂ ಬಿ.ಪಿ.ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.