ಸಿದ್ದು ಅನ್ನಭಾಗ್ಯ ಭ್ರಷ್ಟಾಚಾರದ ಕೂಪ: ಲೋಕಾಯುಕ್ತ
ಮಂಗಳೂರು, ಮಾರ್ಚ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯದ ವಿರುದ್ಧ ಅಪಸ್ವರಗಳು ಮುಂದುವರಿದಿವೆ. ಈ ಬಾರಿ ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ ರಾವ್ ಅವರು ಚಾಟಿ ಬೀಸಿದ್ದಾರೆ.
'ಅದೊಂದು ಭ್ರಷ್ಟಾಚಾರದ ಕೂಪ' ಎಂದಿರುವ ಲೋಕಾಯುಕ್ತರು 'ಅನ್ನಭಾಗ್ಯ ಯೋಜನೆ ಜಾರಿಯಾದ ಒಂದು ತಿಂಗಳಲ್ಲಿಯೇ 125 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ' ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ ಈ ಬ್ರಹ್ಮಾಂಡ ಭ್ರಷ್ಟಾಚಾರವು ಅಧಿಕಾರಿಗಳ ಮಟ್ಟದಲ್ಲಿ ನಡೆದಿದೆ ಎಂದು ನ್ಯಾ. ಭಾಸ್ಕರ ರಾವ್ ಹೇಳಿದ್ದಾರೆ.
ಆದರೆ ಖುದ್ದು ಲೋಕಾಯುಕ್ತರೇ ಇಷ್ಟೊಂದು ನಿಖರ ಧ್ವನಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳುತ್ತಿರುವಾಗ ಅದರ ಸ್ವತಃ ಅವರು ಕೈಕಟ್ಟಿ ಕುಳಿತಿರುವುದೇಕೆ? ಯಾವುದೋ ಒಂದು ರೂಪದಲ್ಲಿ ಕ್ರಮ ಕೈಗೊಳ್ಳಬಹುದಲ್ಲಾ? ಎಂದು ಜನ ಕೇಳುವಂತಾಗಿದೆ. ಇಷ್ಟಕ್ಕೂ, ಲೋಕಾಯುಕ್ತರ ಈ ಗಂಭೀರ ಆರೋಪದ ಬಗ್ಗೆ ಸಿಎಂ ಸಿದ್ದು ಏನನ್ನುತ್ತಾರೆ?
ಹಿರಿಯ ಸಹಕಾರಿ ದಿವಂಗತ ಪಿ ಶ್ರೀನಿವಾಸ ಸ್ಮಾರಕ ಉಪನ್ಯಾಸ ಕಾರ್ಯಕ್ರಮವನ್ನು ಸುರತ್ಕಲ್ ಗೋವಿಂದಾಸ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾಗಿತ್ತು. ಅದರಲ್ಲಿ 'ಪ್ರಜಾಪ್ರಭುತ್ವ- ಆಡಳಿತ- ಭ್ರಷ್ಟಾಚಾರ' ವಿಷಯ ಕುರಿತು ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮವಿತ್ತು.
ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ನ್ಯಾಯಮೂರ್ತಿ ವೈ ಭಾಸ್ಕರ ರಾವ್ ಅವರು ಭ್ರಷ್ಟಾಚಾರ ನಿವಾರಣೆಯ ಬಗ್ಗೆ ಸಮಾರೋಪಾದಿಯಲ್ಲಿ ಕಾರ್ಯಾಚರಣೆ ನಡೆಯಬೇಕಾಗಿದೆ. ಆಧುನಿಕ ಶೈಲಿಯಲ್ಲಿ ನೈತಿಕ ಮೌಲ್ಯಗಳು ಮತ್ತು ಸ್ವರಾಜ್ಯ ಪ್ರೇಮ ಭಾವನೆ ಮೂಡಿಸುವ ಅಗತ್ಯವಿದೆ. ಇಲ್ಲವಾದಲ್ಲಿ ಭಾರತದ ಅಭಿವೃದ್ಧಿ ಶೂನ್ಯ ಹಂತವನ್ನು ತಲುಪಬಹುದು ಎಂದು ಆತಂಪಕಟ್ಟರು.
ಮುಂದುವರಿದು ಮಾತನಾಡಿದ ಅವರು 'ದೇಶದಲ್ಲಿ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದಂತೆ 3,000ಕ್ಕೂ ಅಧಿಕ ಕಾನೂನುಗಳಿವೆ. ಆದರೆ, ಮಾಹಿತಿ ಲಭ್ಯತೆಯ ಕೊರತೆಯಿಂದ ಭ್ರಷ್ಟಾಚಾರ ಮತ್ತಷ್ಟು ಗಟ್ಟಿಗೊಂಡಿದೆ. ನೈತಿಕ, ಧರ್ಮ ಶುದ್ಧ ಆಡಳಿತ ಅಗತ್ಯವಾಗಿದ್ದು, ಉನ್ನತ ವ್ಯಕ್ತಿತ್ವ, ನೈತಿಕತೆ ಅಧಿಕಾರಿಗಳಲ್ಲಿ ಮುಖ್ಯ. ಭ್ರಷ್ಟಾಚಾರದಿಂದ ದೇಶದ ಆರ್ಥಿಕತೆಗೆ ಹಿನ್ನಡೆಯಾಗುತ್ತಿದ್ದು, ಇದರಿಂದ ಮಧ್ಯಮ ಮತ್ತು ದುರ್ಬಲ ವರ್ಗದ ಜನರು ತೀವ್ರ ಬಡತನದತ್ತ ಸಾಗುವ ಸನ್ನಿವೇಶ ನಿರ್ಮಾಣವಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.
ವಕೀಲ ಪಿಪಿ ಹೆಗ್ಡೆ, ಜಿಲ್ಲಾ ಲಯನ್ಸ್ ರಾಜ್ಯಪಾಲ ಕೆಸಿ ಪ್ರಭು, ಜಿಲ್ಲಾ ಲಯನ್ ಸಂಯೋಜಕ ವಿಜಯವಿಷ್ಣು ಮಯ್ಯ, ಮೈತ್ರಿ ಮಲಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಮೋಹನ್ ಮುಂತಾದವರು ಭಾಗವಹಿಸಿದ್ದರು.