ನಿವೃತ್ತ ಶಿಕ್ಷಕರ ಸಮಾಜ ಸೇವೆಗೆ ಸಲಾಂ!
ಮಂಗಳೂರು, ಸೆ.5 : ಶಿಕ್ಷಕರು ಎಂದೂ ನಿವೃತ್ತರಾಗುವುದಿಲ್ಲ, ಕಲಿಸುವ ತುಡಿತ ಸದಾ ಅವರಲ್ಲಿ ಇರುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದ್ದರು. ಮಂಗಳೂರಿನಲ್ಲಿಯೂ ಒಬ್ಬರು ಶಿಕ್ಷಕರು ನಿವೃತ್ತಿಯ ನಂತರ ಸಾಮಾಜಿಕ ಕಾರ್ಯಕರ್ತರಾಗಿ ಬದಲಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಅವರಿಗೆ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ, ವೇತನ ಕೈ ಸೇರುವಂತೆ ಮಾಡುತ್ತಿದ್ದಾರೆ.
ಹೌದು, ನಾವು ಹೇಳುತ್ತಿರುವ ಬಂಟ್ವಾಳದ ಕೆ.ನಾರಾಯಣ್ ನಾಯಕ್ ಅವರ ಬಗ್ಗೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ನಾರಾಯಣ್ ನಾಯಕ್ ಸುಮ್ಮನೆ ಕುಳಿತಿಲ್ಲ. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನದ ಬಗ್ಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡುತ್ತಾರೆ. ಅರ್ಜಿಯನ್ನು ತುಂಬಿಸಿ ವೇತನ ಸಿಗುವ ತನಕ ವಿದ್ಯಾರ್ಥಿಗಳ ಜೊತೆ ನಿಲ್ಲುತ್ತಾರೆ. [ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ]
72 ವರ್ಷದ ನಾರಾಯಣ್ ನಾಯಕ್ ಬಡ ಕುಟುಂಬದಿಂದ ಬಂದವರು, ಅವರು ವಿದ್ಯಾಭ್ಯಾಸ ಮಾಡುವಾಗ ತುಂಬಾ ಕಷ್ಟಪಟ್ಟಿದ್ದರು. ಸದ್ಯ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದ್ದರಿಂದ ಮಕ್ಕಳಿಗೆ ಅವುಗಳು ಸರಿಯಾಗಿ ತಪುಪಬೇಕೆಂಬ ಕಾರಣಕ್ಕೆ ನಾರಾಯಣ್ ಇಂತಹ ಸೇವೆಯಲ್ಲಿ ತೊಡಿಗಿಸಿಕೊಂಡಿದ್ದಾರೆ. ನಾರಾಯಣ್ ನಾಯಕ್ ಬಗ್ಗೆ ತಿಳಿಯೋಣ ಬನ್ನಿ.. [ಪಾಠ ಹೇಳಿದವರು ನಂತರ ರಾಜಕಾರಣಕ್ಕೆ ಬಂದರು]
ನಿವೃತ್ತ ಶಿಕ್ಷಕರ ಸಮಾಜ ಸೇವೆ
ಕೆ.ನಾರಾಯಣ್ ನಾಯಕ್ (72) ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. 3/10/1963ರಲ್ಲಿ ಸೇವೆಗೆ ಸೇರಿದ ನಾರಾಯಣ್ ನಾಯಕ್ ಅವರು ನಂತರ 20 ವರ್ಷ ಪ್ರಾಥಮಿಕ ಶಾಲೆ ಶಿಕ್ಷಕರಾಗಿ, ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ನಂತರ ಸುಮ್ಮನೆ ಕೂರದ ಅವರು, ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದಾರೆ.
ನಾಯಕ್ ಮೂಲತಃ ಬಂಟ್ವಾಳದವರು
ನಾರಾಯಣ್ ನಾಯಕ್ ಮೂಲತಃ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯವರು. 13ವರ್ಷದ ಹಿಂದೆ ನಿವೃತ್ತಿಯಾದ ಅವರು ನಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಕರಾಗಿದ್ದಾಗ ಕನ್ನಡ, ಇತಿಹಾಸ ಮತ್ತು ಹಿಂದಿಯ ಪಾಠವನ್ನು ಅವರು ಮಾಡುತ್ತಿದ್ದರು. ಅಂದಿನ ಕಾಲದಲ್ಲಿಯೇ ನಾಯಕ್ ಅವರು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಸಾಮಾಜಿಕ ಕಾರ್ಯಕರ್ತರಾದರು
ಬಡ ಕುಟುಂಬದಿಂದ ಬಂದ ನಾರಾಯಣ್ ನಾಯಕ್ ಅವರು, ವಿದ್ಯಾಭ್ಯಾಸ ಮಾಡುವಾಗ ತುಂಬಾ ಕಷ್ಟಪಟ್ಟಿದ್ದರು. ಸದ್ಯ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದ್ದರಿಂದ ಮಕ್ಕಳಿಗೆ ಅವುಗಳು ಸರಿಯಾಗಿ ತಪುಪಬೇಕೆಂಬ ಕಾರಣಕ್ಕೆ ನಾರಾಯಣ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವಿದ್ಯಾರ್ಥಿ ವೇತನ ಕೊಡಿಸುತ್ತಾರೆ
ಮಕ್ಕಳಿಗೆ ಸರ್ಕಾರದಿಂದ ಯಾವ ವಿದ್ಯಾರ್ಥಿ ವೇತನ ಸಿಗುತ್ತದೆ. ಯಾವ ಮಕ್ಕಳಿಗೆ ಯಾವುದು ಅನ್ವಯವಾಗುತ್ತದೆ ಮುಂತಾದ ಪ್ರತಿಯೊಂದು ಮಾಹಿತಿಗಳು ನಾರಾಯಣ್ ನಾಯಕ್ ಅವರಿಗೆ ತಿಳಿದಿದೆ. ಇದನ್ನು ಅವರು ಮಕ್ಕಳು ಮತ್ತು ಪೋಷಕರಿಗೂ ಹೇಳುತ್ತಾರೆ. ಅವರನ್ನು ಓದಲು ಪ್ರೇರೇಪಣೆ ನೀಡುತ್ತಾರೆ. ಅರ್ಜಿಯನ್ನು ತುಂಬಿ ಮಕ್ಕಳಿಗೆ ಸಹಾಯ ಮಾಡುವ ಅವರು, ವೇತನ ಅವರ ಕೈ ಸೇರುವ ತನಕ ವಿದ್ಯಾರ್ಥಿಗಳೊಂದಿಗೆ ನಿಲ್ಲುತ್ತಾರೆ.
ಕಾರ್ಮಿಕರಿಗೆ ನಿರಂತರ ಸಹಕಾರ
ನಾರಾಯಣ್ ನಾಯಕ್ ಕಟ್ಟಡ ಕಾರ್ಮಿಕರು, ಗಾರೆ ಕೆಲಸಗಾರರು ಹೀಗೆ ಕಾರ್ಮಿಕ ವರ್ಗದವರಿಗೆ ಹೆಚ್ಚಿನ ಸಹಾಯ ಮಾಡುತ್ತಾರೆ. ಅವರಿಗೆ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಓದಿಗೆ ಸಹಾಯ ಮಾಡುತ್ತಾರೆ. ಅವರ ಬಡತನ ಓದಿಗೆ ಅಡ್ಡಿಯಾಗಬಾರದೆಂಬ ಉದ್ದೇಶ ಅವರಲ್ಲಿದೆ.
ನಾರಾಯಣ್ ನಾಯಕ್ ಹೇಳುವುದೇನು : "ಇಂದಿನ ಗುರುಗಳು ಲಘುವಾಗಿದ್ದಾರೆ, ಗುರುವಾಗಿಲ್ಲ" ಎಂದು ನಾರಾಯಣ್ ನಾಯಕ್ ಇಂದಿನ ಶೈಕ್ಷಣಿನ ವ್ಯವಸ್ಥೆಯನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಿದ್ದಾರೆ. ಮಕ್ಕಳನ್ನು ದೇವರಂತೆ ಕಾಣಬೇಕು ಅನ್ನುವುದನ್ನು ನಾವು ಇಂದಿನ ಶಿಕ್ಷಕರು ಮರೆತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.