ತರಕಾರಿ ವ್ಯಾಪಾರಿಗಳಿಗೆ ನಷ್ಟ ಉಂಟುಮಾಡಿದ ಮಳೆ
ಮಂಗಳೂರು, ಜು. 14 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಜನರಿಗೆ ಸಂತಸ ಉಂಟು ಮಾಡಿದ್ದರೆ, ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ತರಕಾರಿ ವ್ಯಾಪಾರಿಗಳಿಗೆ ಸರಿಯಾದ ಸಮಯಕ್ಕೆ ತರಕಾರಿ ದೊರೆಯದೆ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಳವಾಗಿದೆ. ಬೇಡಿಕೆ ಇದ್ದರೂ ತರಕಾರಿ ಸರಬರಾಜು ಮಾಡಲಾದ ಸ್ಥಿತಿ ವ್ಯಾಪಾರಿಗಳದ್ದಾಗಿದೆ.
ನಗರದ ಕದ್ರಿ ಮಾರುಕಟ್ಟೆಯ ವ್ಯಾಪಾರಿಗಳು ಹೇಳುವ ಪ್ರಕಾರ ತರಕಾರಿ ಮತ್ತು ಹಣ್ಣುಗಳಿಗೆ ಸದ್ಯ ಬೇಡಿಕೆ ಹೆಚ್ಚಾಗಿದೆ. ಆದರೆ, ಮಳೆಯ ಕಾರಣದಿಂದಾಗಿ ಹೊರ ಊರುಗಳಿಂದ ತರಕಾರಿ ಹೊತ್ತು ಬರುವ ಲಾರಿಗಳು ಮಾರುಕಟ್ಟೆಗೆ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ. ಇದರಿಂದಾಗಿ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ. [ಮಂಗಳೂರಿನಲ್ಲಿ ವರುಣನ ಆರ್ಭಟದ ಚಿತ್ರಗಳು]
ಕದ್ರಿ ಮಾರುಕಟ್ಟೆಗೆ ಅಕ್ಕ-ಪಕ್ಕದ ಗ್ರಾಮಗಳಿಂದ ತರಕಾರಿ ಸರಬರಾಜು ಆಗುತ್ತದೆ. ಆದರೆ, ಭಾರೀ ಮಳೆಯ ಕಾರಣ ರೈತರು ತರಕಾರಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ತರಕಾರಿಗಳು ಮಳೆಯ ಹೊಡತಕ್ಕೆ ಸಿಲುಕಿ ನಾಶವಾಗಿವೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆಗಳು ಏರಿಕೆಯಾಗುತ್ತಿವೆ. ವ್ಯಾಪಾರಿಗಳು ತಮ್ಮ ಸಂಕಷ್ಟ ಹಂಚಿಕೊಂಡಿದ್ದು ಹೀಗೆ... [ತರಕಾರಿ ಬೇಕಾದ್ರೆ ಟೆರೆಸ್ ತೋಟಕ್ಕೆ ಬನ್ನಿ!]
ಕದ್ರಿ ಮಾರುಕಟ್ಟೆ ವ್ಯಾಪಾರಿಗಳು ಹೇಳುವುದೇನು?
ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ತರಕಾರಿ ಹೊತ್ತು ಮಾರುಕಟ್ಟೆಗೆ ಲಾರಿಗಳು ಆಗಮಿಸುತ್ತಿಲ್ಲ. ಇದರಿಂದ ನಮಗೆ ನಷ್ಟ ಉಂಟಾಗುತ್ತಿದೆ. ಬೇಡಿಕೆ ಇದ್ದರೂ ತರಕಾರಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ತರಕಾರಿಗಳು ಮಳೆಯ ಹೊಡೆತಕ್ಕೆ ನಾಶವಾಗಿದ್ದು, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ತರಕಾರಿಗೆ ಬೇಡಿಕೆ ಹೆಚ್ಚಿದೆ
ರಂಜಾನ್ ಮಾಸವಾದ್ದರಿಂದ ತರಕಾರಿ ಮತ್ತು ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಅವುಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಯಿಂದಾಗಿ ತರಕಾರಿ ಮಾರುಕಟ್ಟೆಗೆ ಆಗಮಿಸುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತಿದೆ ಎಂದು ವ್ಯಾಪಾರಿಗಳು ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ.
ಪರ ಊರುಗಳಿಂದ ಸರಬರಾಜು
ಕದ್ರಿ ಮಾರುಕಟ್ಟೆಗೆ ಅಕ್ಕ-ಪಕ್ಕದ ಊರುಗಳಿಂದ ತರಕಾರಿ ಸರಬರಾಜು ಆಗುತ್ತದೆ. ಮೊದಲು ಮಂಗಳೂರಿನ ತರಕಾರಿಯೇ ಹೆಚ್ಚು ಸಿಗುತ್ತಿತ್ತು. ಆದರೆ, ರೈತರು ತಮ್ಮ ಜಮೀನನ್ನು ಬಿಲ್ಡರ್ ಗಳಿಗೆ ಮಾರಾಟ ಮಾಡಿರುವುದರಿಂದ ತರಕಾರಿ ಉತ್ಪಾದನೆ ಕುಸಿತವಾಗಿದೆ. ಆದ್ದರಿಂದ ಪರ ಊರುಗಳ ಮೇಲೆ ಅವಲಂಬನೆಯಾಗುವುದು ಅನಿವಾರ್ಯವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಏರುತ್ತಿದೆ ತರಕಾರಿ ಬೆಲೆ
ತರಕಾರಿ ಪೂರೈಕೆ ಕಡಿಮೆಯಾದ ಕಾರಣ ಮಾರುಕಟ್ಟೆಯಲ್ಲಿ ತರಕಾರಿ ಬೆಳೆಗಳು ಹೆಚ್ಚಾಗುತ್ತಿವೆ. ನೇರಳೆ ಹಣ್ಣು ಕೆಜಿಗೆ 300 ರೂ., ಕೊತ್ತಂಬರಿ ಸೊಪ್ಪು ಕೆಜಿ 200 ರೂ., ಶುಂಠಿ 150 ರೂ., ಈರುಳ್ಳಿ 48 ರೂ.ಗಳಿಗೆ ಏರಿಕೆಯಾಗಿದೆ. ರೈತರು ಸಹ ಹೆಚ್ಚಿನ ಬೆಲೆಗೆ ತರಕಾರಿ ಮಾರಾಟ ಮಾಡುತ್ತಿರುವುರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತಿದೆ.
ರೈತರು ಕಂಗಾಲಾಗಿದ್ದಾರೆ
ಮಳೆಯ ಹೊಡೆತಕ್ಕೆ ತರಕಾರಿಗಳು ನಾಶವಾಗಿರುವುರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬರಬೇಕಿದ್ದ ಬೆಳೆ ಮಳೆಯಿಂದಾಗಿ ನಾಶವಾಗಿದೆ. ರೈತರು ಹೊಸದಾಗಿ ನಾಟಿ ಮಾಡಿ ಬೆಳೆಗಳನ್ನು ಬೆಳೆಯುವುದು ಅನಿವಾರ್ಯವಾಗಿದೆ.
ಸರ್ಕಾರ ಸೌಲಭ್ಯ ನಿಡೋಲ್ಲ
ಸರ್ಕಾರ ತರಕಾರಿ ವ್ಯಾಪಾರ ಮಾಡುವ ನಮ್ಮಂತವರಿಗೆ ಯಾವುದೇ ಸಹಾಯ ಮಾಡುವುದಿಲ್ಲ ಎಂಬುದು ವ್ಯಾಪಾರಿಗಳ ಆರೋಪ. ಉದ್ಯಮಗಳಿಗೆ ಸಹಾಯ ಮಾಡುವ ಸರ್ಕಾರ ನಷ್ಟ ಉಂಟಾದ ಸಮಯದಲ್ಲಿ ವ್ಯಾಪಾರಿಗಳಿಗೆ ಸಹಕಾರ ನೀಡುವುದಿಲ್ಲ. ನಮಗೂ ಅಗತ್ಯ ಸೌಲಭ್ಯವನ್ನು ಸರ್ಕಾರ ನೀಡಲಿ ಎಂಬುದು ವ್ಯಾಪಾರಿಗಳ ಮನವಿಯಾಗಿದೆ.