ಮಂಗಳೂರು: ಚುನಾವಣಾ ಅಕ್ರಮ, ಜೆಡಿಎಸ್ ವಾಹನ ಜಪ್ತಿ
ಶಂಕರನಾರಾಯಣ : ಹೊಸಂಗಡಿ, ಕೆರೆಕಟ್ಟೆ ಚೆಕ್ ಪೋಸ್ಟ್ ನಲ್ಲಿ ಬೈಂದೂರು ವಿಧಾನಸಭಾ ವ್ಯಾಪ್ತಿಯ ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಂ 01 ರ ಮುಖ್ಯಸ್ಥ ರಘುರಾಮ ಶೆಟ್ಟಿ ಮತ್ತು ತಂಡದವರು, ಪ್ಲೈಯಿಂಗ್ ಸ್ಕ್ವಾಡ್ ನ ಚಂದ್ರ ಶೇಖರ ಮೂರ್ತಿ, ರುಕ್ಕನ ಗೌಡ, ಅಮಾಸೆಬೈಲು ಪೊಲೀಸ್ ಠಾಣಾ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿರುವಾಗ, ಸಿದ್ಧಾಪುರ ಕಡೆಯಿಂದ ಹೊಸಂಗಡಿ ಕಡೆಗೆ ಹೋಗುತಿದ್ದ ಜನತಾದಳದ ಚನಾವಣಾ ಪ್ರಚಾರದ ವಾಹನಗಳಾದ ಕೆಎ 20 ಜಡ್ 4666 ವೋಕ್ಸ್ ವ್ಯಾಗನ್ ಕಾರು ಹಾಗೂ ಕೆಎ 51 ಎನ್ 5688 ಸ್ಕಾರ್ಪಿಯೋ ವಾಹನಗಳನ್ನು ತಪಾಸಣೆಗೊಳಿಸಿದಾಗ ಜೆ.ಡಿ.ಎಸ್ ಪಕ್ಷದ ಚುನಾವಣಾ ಪ್ರಚಾರದ ಪರವಾನಿಗೆ ಪಡೆದ ವಾಹನ ಸಂಖ್ಯೆ ಕೆಎ 20 ಜಡ್ 4666ರ ಚಾಲಕನಾದ ಎಂ.ಮನ್ಸೂರ್ ಇಬ್ರಾಹಿಂ ಇವರ ಬಳಿ ರೂಪಾಯಿ 75000/-(ರೂ 1000 ಮುಖ ಬೆಲೆಯ 75 ನೋಟುಗಳು) ನಗದು ಯಾವುದೇ ದಾಖಲೆಗಳಿಲ್ಲದೆ ಪತ್ತೆಯಾಗಿರುತ್ತದೆ.
ಅದೇ ರೀತಿ ಅದೇ ವಾಹನದ ಜೊತೆಗೆ ಬಂದ ಯಾವುದೇ ಚುನಾವಣಾ ಪರವಾನಿಗೆಯನ್ನು ಹೊಂದಿರದ ವಾಹನ ಸಂಖ್ಯೆ ಕೆಎ 51 ಎನ್ 5688 ಸ್ಕಾರ್ಪಿಯೋ ವಾಹನವನ್ನು ತಪಾಸಣೆ ಮಾಡಿದಾಗ ಅದರಲ್ಲಿ ಜನತಾದಳ (ಜಾತ್ಯಾತೀತ) ಶಿವಮೊಗ್ಗ ಲೋಕಸಭಾ ಚುನಾವಣೆ 2014ಕ್ಕೆ ಸಂಬಂಧಿಸಿದ 220 ಕನ್ನಡ ಕರಪತ್ರಗಳು, ಹಾಗೂ ಲೋಕಸಭಾ ಚುನಾವಣೆ 2014 SDPI 1000 ಕನ್ನಡ ಕರ ಪತ್ರಗಳು ಹಾಗೂ ಉರ್ದು ಅಕ್ಷರದಲ್ಲಿ SDPI 300 ಕರ ಪತ್ರ, ಒಟ್ಟು 1520 ಕರಪತ್ರಗಳು ಪತ್ತೆಯಾಗಿವೆ.
ವಾಹನಗಳನ್ನು ತಪಾಸಣೆ ಮಾಡಿ, ಮಹಜರು ನಡೆಸುತ್ತಿರುವ ಸಂದರ್ಭದಲ್ಲಿ 2 ವಾಹನಗಳ ಚಾಲಕರಾದ ಎಂ. ಮನ್ಸೂರ್ ಇಬ್ರಾಹಿಂ ಹಾಗೂ ಇಸ್ಮಾಯಿಲ್ ತಂದೆ:ಮುನಿ ಬ್ಯಾರಿ ಎಂಬವರುಗಳು ವಾಹನಗಳನ್ನು ಬಿಟ್ಟು ಓಡಿ ಹೋಗಿರುತ್ತಾರೆ. ಈ ಬಗ್ಗೆ ಚಂದ್ರಶೇಖರ್ ಕೆ.ಎಸ್, ಮುಖ್ಯಸ್ಥರು ವಿಚಕ್ಷಣಾ ದಳ-03 ಬೈಂದೂರು ವಿಧಾನಸಭಾ ಕ್ಷೇತ್ರ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 19/2014 ಕಲಂ. 171 (ಎಚ್) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳಿಗೆ ಭರ್ಜರಿ ಬೇಟೆ ಸಿಕ್ಕಿದೆ. 23 ವರ್ಷದ ಯುವಕನೊಬ್ಬ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಸಾಗಿಸುವುದನ್ನು ತಡೆಗಟ್ಟಿ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಬಂಧಿತನನ್ನು ಕಾಸರಗೋಡು ಮೂಲದ 23 ವರ್ಷ ವಯಸ್ಸಿನ ಮಹಮ್ಮದ್ ಜಬೀರ್ ಬೈಕ್ಕಾರ ಎಂದು ಗುರುತಿಸಲಾಗಿದೆ. ಬಂಧಿತ ಮಹಮ್ಮದ್ ನಿಂದ 272.90 ಗ್ರಾಂ ಮೌಲ್ಯದ ಆಭರಣ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 8 ಲಕ್ಷ ರು ಎನ್ನಲಾಗಿದೆ.
ಬ್ಯಾಗೇಜ್ ತಪಾಸಣೆ ಸಂದರ್ಭದಲ್ಲಿ ಬಾಕ್ಸೊಂದರಲ್ಲಿ ಫಾಯಿಲ್ ಸ್ಟ್ರಿಪ್ ಗಳ ಜತೆ ಚಿನ್ನವನ್ನು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿತ್ತು. ಸದ್ಯಕ್ಕೆ ಇದರ ಮೌಲ್ಯ 8,02,326 ರು ಎಂದು ತಿಳಿದು ಬಂದಿದೆ.
ದುಬೈನಿಂದ ಜೆಟ್ ಏರ್ ವೇಸ್ 9W531 ಮೂಲಕ ಬಂದಿಳಿದ ಮಹಮ್ಮದ್ ಚಲನವಲನ ವೇಳೆ ಅನುಮಾನ ಬಂದಿದೆ. ಬ್ಯಾಗೇಜ್ ತಪಾಸಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಹೆಚ್ಚುವರಿ ಅಧಿಕಾರಿ ಹೆಮೆನ್ ಗೊಗಾಯಿ ಅವರು ಹೇಳಿದ್ದಾರೆ.