ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಗುತ್ತಿಗೆ ಸೇವೆ
ಮಂಗಳೂರು, ನ. 25: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ತಜ್ಞ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 65ಕ್ಕಿಂತ ಕಡಿಮೆ ವಯಸ್ಸಿನ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ 3 ವರ್ಷ ಅಥವಾ ಮುಂದಿನ ಆದೇಶ ನೀಡುವವರಿಗೆ ನೇಮಿಸಿಕೊಳ್ಳಲಾಗುವುದು. ಆಸಕ್ತ ಖಾಸಗಿ ವೈದ್ಯರಿಗೆ ಮಾಸಿಕ ಹಾಗೂ ದಿನದ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಕೂಡ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. [ಸರ್ಕಾರಿ ಆಸ್ಪತ್ರೆಗೆ ತಜ್ಞ ವೈದ್ಯರು ಬರುತ್ತಿಲ್ಲ]
ಅರವಳಿಕೆ ತಜ್ಞರು ಪ್ರತಿ ಶಸ್ತ್ರಚಿಕಿತ್ಸೆ ಲೆಕ್ಕದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಯುವಕರನ್ನು ನೇಮಿಸಿಕೊಂಡು ಸ್ಕ್ಯಾನ್ನಂತಹ ಸೇವೆಗಳಿಗೆ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ ವಿಕಿರಣ ಶಾಸ್ತ್ರಜ್ಞರ ಕೊರತೆ ಇರುವ ಹಿನ್ನೆಲೆಯಲ್ಲಿ ಅಂತರ್ಜಾಲದ ಮೂಲಕ ಅವರ ಸೇವೆ ಪಡೆಯಲಾಗುವುದೆಂದು ತಿಳಿಸಿದರು. [ವೈದ್ಯರ ಸಂಬಳ ಡಬಲ್]
ಪ್ರಸೂತಿ, ಅರವಳಿಕೆ, ಮಕ್ಕಳ ತಜ್ಞರಿಗೆ ಮಾಸಿಕ 50 ಸಾವಿರ ರೂ. ವೇತನ ಹಾಗೂ ಹೊರರೋಗಿ ವಿಭಾಗದಲ್ಲಿ ಕಾರ್ಯನಿರ್ವಹಿಸುವವರಿಗೆ ದಿನಕ್ಕೆ ಒಂದು ಸಾವಿರ ರೂ. ಗೌರವ ಧನ ನೀಡಲಾಗುವುದು ಎಂದು ತಿಳಿಸಿದ್ದಾರೆ. [ಇಂದು ವೈದ್ಯರ ಸಾಮೂಹಿಕ ರಾಜೀನಾಮೆ]
ಶಾಸಕರೂ ಸಿದ್ಧ: ವೈದ್ಯಕೀಯ ವೃತ್ತಿ ಕಲಿತು ಶಾಸಕರಾದ ಹಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ. ರಾಜ್ಯದಲ್ಲಿ 9 ವೈದ್ಯಕೀಯ ಕಲಿತ ಶಾಸಕರಿದ್ದಾರೆ. ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಆರೋಗ್ಯ ಕೇಂದ್ರ, ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಒಪ್ಪಿಗೆ ನೀಡಲಾಗಿದೆ ಎಂದು ಖಾದರ್ ತಿಳಿಸಿದ್ದಾರೆ. [ವೈದ್ಯರಿಗೆ ಖಡಕ್ ಎಚ್ಚರಿಕೆ]