ಗುರುವಾರದ ಮತದಾನಕ್ಕೆ ಆಯೋಗ ಸಿದ್ಧ
ಬೆಂಗಳೂರು, ಏ. 16 : ಕರ್ನಾಟಕದ ಚುನಾವಣೆ ಇತಿಹಾಸದಲ್ಲೇ ಮೊದಲ ಬಾರಿಗೆ ಏ.17ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತದಾರರ ಎಡಗೈ ಹೆಬ್ಬೆರಳಿಗೆ ಇಂಕ್ ಹಾಕಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅನಿಲ್ ಕುಮಾರ್ ಝಾ, ಮತದಾನದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಇತ್ತೀಚೆಗೆ ರಾಜ್ಯದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಎಡಗೈನ ನಾಲ್ಕು ಬೆರಳುಗಳಲ್ಲಿ ಯಾವುದಾದರೊಂದು ಬೆರಳಿಗೆ ಇಂಕ್ ಹಾಕಲಾಗಿದೆ.
ಆದ್ದರಿಂದ ಖಾಲಿ ಉಳಿದಿರುವ ಹೆಬ್ಬೆರಳಿಗೆ ಇಂಕ್ ಹಾಕಲು ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ ಅನಿಲ್ ಕುಮಾರ್ ಝಾ ತಿಳಿಸಿದರು. ಆದ್ದರಿಂದ ಗುರುವಾರ ನೀವು ಮತದಾನ ಮಾಡಿದಾಗ ನಿಮ್ಮ ಎಡಗೈ ಹೆಬ್ಬೆರಳಿಗೆ ಶಾಯಿ ಹಾಕಲಾಗುತ್ತದೆ. [ಮತಗಟ್ಟೆ ಮಾಹಿತಿ ಬೇಕಾ ಎಸ್ಎಂಎಸ್ ಮಾಡಿ]
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರಿಗೆ ಎಡಗೈನ ಯಾವ ಬೆರಳಿಗೆ ಶಾಯಿ ಹಾಕಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ಸಲಹೆ ಕೇಳಲಾಗಿತ್ತು. ಚುನಾವಣಾ ಆಯೋಗ ಎಡಗೈ ಹೆಬ್ಬೆರಳಿಗೆ ಶಾಯಿ ಹಾಕಲು ಸೂಚನೆ ನೀಡಿದ್ದು, ಈ ಬಗ್ಗೆ ಮತಗಟ್ಟೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯ ವಿವರಗಳು
ಏ.17 ರಂದ ಸರ್ಕಾರಿ ರಜೆ
ಮತದಾನದ ದಿನವಾದ ಏ.17ರಂದು ಸರ್ಕಾರಿ ರಜೆ ಘೋಷಿಸಲಾಗಿದೆ. ಎಲ್ಲ ಬಗೆಯ ಖಾಸಗಿ ಸಂಸ್ಥೆಗಳು ಸಿಬ್ಬಂದಿಗೆ ವೇತನಸಹಿತ ರಜೆ ನೀಡುವ ಮೂಲಕ ಮತ ಚಲಾಯಿಸಲು ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿರುವುದಾಗಿ ಅನಿಲ್ ಕುಮಾರ್ ಝಾ ಹೇಳಿದರು.
ಪ್ರಚಾರ ಅಂತ್ಯಗೊಂಡಿದೆ
ಬಹಿರಂಗ ಪ್ರಚಾರ ಅಂತ್ಯವಾಗಿರುವುದರಿಂದ ಕಣದಲ್ಲಿರುವ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮತ ನೀಡುವಂತೆ ಮನವಿ ಮಾಡಲು ಅವಕಾಶ ಇಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚರ್ಚೆಗಳಿಗೂ ಅವಕಾಶ ಇಲ್ಲ ಎಂದು ಅನಿಲ್ ಕುಮಾರ್ ಝಾ ಸ್ಪಷ್ಟಪಡಿಸಿದರು.
ಮನೆ-ಮನೆ ಪ್ರಚಾರ ನಡೆಸಬಹುದು
ಬುಧವಾರ ಮನೆ ಮನೆಗೆ ತೆರಳಿ ಅಭ್ಯರ್ಥಿಗಳು ಪ್ರಚಾರ ನಡೆಸಲು ಅವಕಾಶ ಇದೆ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ 3-4 ಜನರು ಮಾತ್ರ ಪ್ರಚಾರದಲ್ಲಿ ಭಾಗವಹಿಸಬಹುದು.
ನೋಟಾ ಆಯ್ಕೆ ಇದೆ
ನಿಮ್ಮ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗೂ ಮತ ನೀಡಲು ಇಷ್ಟವಿಲ್ಲದಿದ್ದರೆ,'ನೋಟಾ' ಎಂಬ ಆಯ್ಕೆ ಇದೆ. ಇದನ್ನು ಒತ್ತಿ ಬನ್ನಿ.[ನೋಟಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ]
ಮೊದಲ ನೀತಿ ಸಂಹಿತೆ ಪ್ರಕರಣ
ಅಚ್ಚರಿಯಾದರೂ ಇದು ಸತ್ಯ ಚುನಾವಣಾ ಪ್ರಕ್ರಿಯೆ ಆರಂಭವಾದ ದಿನ ಒಂದೇ ಒಂದು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವೂ ದಾಖಲಾಗದಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಅನುಮತಿ ಪಡೆಯದೆ ಸಮಾರಂಭ ಏರ್ಪಡಿಸಿದ್ದಕ್ಕೆ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಅಭ್ಯರ್ಥಿಯ ಭಾವಚಿತ್ರವಿರುವ ವೋಟರ್ ಸ್ಲಿಪ್ ಹಂಚಿದ್ದಕ್ಕಾಗಿ, ಆಮ್ ಆದ್ಮಿ ಪಕ್ಷದ ಗುರುದೇವ್ ಅವರಿಗೆ ಮುದ್ರಣ ಸಾಮಗ್ರಿಯಲ್ಲಿ ಹೆಸರು ಹಾಕದೆ ಇರುವುದರ ಕುರಿತು ನೋಟಿಸ್ ನೀಡಲಾಗಿದೆ.