ಬಾ ರೇವಣ್ಣ ನೀನು ನನಗೆ ಒಳ್ಳೆ ಫ್ರೆಂಡು, ಸಿದ್ದರಾಮಯ್ಯ
ಬೆಂಗಳೂರು, ಜು 12: ಯಾಕಪ್ಪಾ ರೇವಣ್ಣ, ನನ್ನ ಕಡೆ ನೋಡೋದೇ ಬಿಟ್ಟು ಬಿಟ್ಟಿದ್ದೀಯಾ? ನೀನು ನನಗೆ ಒಳ್ಳೆ ಫ್ರೆಂಡ್, ಹೀಗೆ ಮುಖ್ಯಮಂತ್ರಿ ಸಿದ್ದರಾಮಾಯ್ಯ ಜೆಡಿಎಸ್ ಧುರೀಣ ಎಚ್ ಡಿ ರೇವಣ್ಣ ಅವರನ್ನು ವಿಧಾನಸಭಾ ಕಲಾಪದ ವೇಳೆ ಕಿಚಾಯಿಸಿದ್ದಾರೆ.
ಶುಕ್ರವಾರ (ಜು 11) ಲೋಕೋಪಯೋಗಿ ಇಲಾಖೆಯ ಚರ್ಚೆಯಲ್ಲಿ ರೇವಣ್ಣ ಭಾಗವಹಿಸಿದ್ದರು. ಹಾಸನ-ದುದ್ದ-ತಿಪಟೂರು-ಚಿಕ್ಕನಾಯಕನಹಳ್ಳಿ ರಸ್ತೆ ಅಭಿವೃದ್ದಿ ಸಂಬಂಧ ಮಾತನಾಡಲು ರೇವಣ್ಣ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಬಳಿ ಅವಕಾಶ ಕೇಳಿದರು.
ಚರ್ಚೆಯ ಕೊನೆಯಲ್ಲಿ ಅವಕಾಶ ನೀಡುತ್ತೇನೆ, ಈಗ ಅವಕಾಶ ನೀಡಲು ಆಗುವುದಿಲ್ಲ ಎಂದು ಸ್ಪೀಕರ್ ಹೇಳಿದಾಗ ಸಿಟ್ಟಿನಲ್ಲಿ ರೇವಣ್ಣ ಸಭೆಯಿಂದ ಹೊರನಡೆಯಲು ಮುಂದಾದರು. (ನಾನು ಕುಡ್ಕೊಂಡೇ ಬಂದೋನು ಅಂದ್ರು ಸಿದ್ದು)
ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು ಎದ್ದು ನಿಂತು 'ಯಾಕಪ್ಪಾ ರೇವಣ್ಣ, ಒಬ್ಬನೇ ಯಾಕೆ ಸಭಾತ್ಯಾಗ ಮಾಡುತ್ತಿದ್ದೀಯಾ? ನನ್ನ ಕಡೆ ನೋಡೋದೇ ಇಲ್ವಲ್ಲಾ ನೀನು. ನಿನಗಿಂತ ಕುಮಾರಸ್ವಾಮಿ ಪರವಾಗಿಲ್ಲ. ಬಾ ಕೂತ್ಕೋ' ಎಂದು ಚಟಾಕಿ ಹಾರಿಸಿದರು.
ನೀನು ಹೇಳಿದ ಕಾಮಗಾರಿ ಶುರು ಮಾಡಿಸುತ್ತೇನೆಂದು ಲೋಕೋಪಯೋಗಿ ಸಚಿವರು ಹೇಳಿದ್ದಾರಲ್ಲಾ ಎಂದು ಸಿಎಂ ಹೇಳಿದಾಗ, ಅವರು ಸುಮ್ಮನೆ ಬಾಯಿ ಉಪಚಾರಕ್ಕೆ ಹೇಳಿದ್ದಾರೆ. ಸರಿಯಾಗಿ ಹೇಳಿಲ್ಲ ಎಂದು ರೇವಣ್ಣ ಪ್ರತ್ಯುತ್ತರ ನೀಡಿದರು.
ಆಗ 'ರೀ, ಆ ಕಾಮಗಾರಿಯನ್ನು ನಾಳೆನೇ ಶುರು ಮಾಡಿಸಿ' ಎಂದು ಸಿದ್ದು ಸಚಿವರಿಗೆ ಸದನದಲ್ಲೇ ಆದೇಶ ನೀಡಿದರು. ರೇವಣ್ಣ ವಾಪಸ್ ತನ್ನ ಸ್ಥಾನದಲ್ಲಿ ಆಸೀನರಾದರು.
ಆಗ ಸದನದಲ್ಲಿದ್ದ ಬಿಜೆಪಿ ಶಾಸಕ ಸಿ ಟಿ ರವಿ, ಮುಖ್ಯಮಂತ್ರಿಗಳಿಗೆ ರೇವಣ್ಣ ಅಂದ್ರೆ ಬಲು ಪ್ರೀತಿ. ರೇವಣ್ಣ ಅವರನ್ನು ಕಾಂಗ್ರೆಸ್ಸಿಗೆ ಸೇರಿಸುವ ಹುನ್ನಾರ ಏನಾದ್ರೂ ಸಿಎಂ ಮಾಡ್ತಾ ಇದ್ದಾರಾ ಎಂದು ತಮಾಷೆಗೆ ಪ್ರಶ್ನಿಸಿದರು.
ರೇವಣ್ಣ ಬಂದ್ರ ಬರ್ಲಿ, ಸೇರಿಸಿಕೊಳ್ಳುತ್ತೇನೆ. ಆದರೆ ನೀನು (ಸಿ ಟಿ ರವಿ) ಬಂದ್ರೆ ಸೇರಿಸಿಕೊಳ್ಳುವುದಿಲ್ಲ ಎಂದು ಚಟಾಕಿ ಹಾರಿಸಿದರು. ಅಯ್ಯೋ ನೀವು ಒಂದು ಕಳೆ ಕರೆದ್ರೂ, ನಾನು ಬರಲ್ಲಾ ಬಿಡಿ ಎಂದು ರವಿ ನಗುನಗುತ್ತಲೇ ಮುಖ್ಯಮಂತ್ರಿಗಳಿಗೆ ಟಾಂಗ್ ನೀಡಿದರು.