ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ
ಬೆಂಗಳೂರು, ಮೇ 22:ರಾಷ್ಟ್ರೀಯ ಬೆಳೆ ವಿಮಾ ಕಾರ್ಯಕ್ರಮದಡಿಯಲ್ಲಿ 2014 ರ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಳಪಡಿಸಿ ಆಯ್ದ 464 ಸಂಬಂಧಿಸಿದ ಕ್ಷೇತ್ರ ಘಟಕಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.
ಈ ಯೋಜನೆಯಡಿಯಲ್ಲಿ 11 ಬೆಳೆಗಳಾದ ಹತ್ತಿ (ನೀರಾವರಿ) ಹತ್ತಿ (ಮಳೆಆಶ್ರಿತ) ಈರುಳ್ಳಿ (ನೀರಾವರಿ), ಈರುಳ್ಳಿ (ಮಳೆ ಆಶ್ರಿತ) ಆಲೂಗೆಡ್ಡೆ (ನೀರಾವರಿ) ಆಲೂಗೆಡ್ಡೆ (ಮಳೆಆಶ್ರಿತ), ಮೆಣಸಿನಕಾಯಿ (ನೀರಾವರಿ) ಮೆಣಸಿನಕಾಯಿ (ಮಳೆಆಶ್ರಿತ), ದ್ರಾಕ್ಷಿ, ಬಾಳೆ ಮತ್ತು ದಾಳಿಂಬೆ ಇವುಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಿ, ವಿವಿಧ ವಿಮಾ ಸಂಸ್ಥೆಗಳಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿ ಅಧಿಸೂಚಿಸಲಾಗಿದೆ.
ಅಗ್ರಿಕಲ್ಷರ್ ಇನ್ಶೂರೆನ್ಸ್ ಕಂಪನಿ ಇಂಡಿಯಾ ಲಿ., ಐ.ಸಿ.ಐ.ಸಿ;ಐ. ಲೋಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ, ಲಿ., ಹೆಚ್.ಡಿ.ಎಫ್.ಸಿ. ಆಗ್ರೋ ಜನರಲ್ ಇನ್ಶೂರೆನ್ಸ್ ಕಂಪನಿ. ಲಿ., ಚೋಳಮಂಡಲಮ್ ಎಂ.ಎಸ್. ಜನರಲ್ ಇನ್ಶೂರೆನ್ಸ್ ಕಂಪನಿ ಲಿ., ಮತ್ತು ಇಫ್ಕೋ ಟೋಕಿಯೋ ಜನರಲ್ ಇನ್ಶೂರೆನ್ಸ್ ಕಂಪನಿ ಗಳು ಅನುಷ್ಠಾನಗೊಳಿಸಲಿದೆ.[ಮುಂಗಾರು-2014: 25 ಬೆಳೆಗಳಿಗೆ ಕೃಷಿ ವಿಮೆ ಭಾಗ್ಯ]
ಈ ಯೋಜನೆಯು ಬೆಳೆಸಾಲ ಪಡೆಯುವ ರೈತರಿಗೆ ಕಡ್ಡಾಯವಾಗಿದ್ದು, ಬೆಳೆ ಸಾಲ ಪಡೆಯದಂತಹ ರೈತರಿಗೆ ಐಚ್ಫಿಕವಾಗಿರುತ್ತದೆ. ಬೆಳೆ ಸಾಲ ಪಡೆಯುವ ರೈತರು ಯೋಜನೆಯಲ್ಲಿ ಪಾಲ್ಗೊಳ್ಳಲು ಹತ್ತಿರದ ಬ್ಯಾಂಕುಗಳನ್ನು ಸಂಪರ್ಕಿಸಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲಾತಿಗಳಾದ ಪಹಣಿ/ಖಾತೆ ಪತ್ರ ಕಂದಾಯ ರಶೀದಿ ನೀಡಬೇಕು. ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ವಿಮಾ ಕಂತನ್ನು ಕಟ್ಟಬೇಕು. ಬಿತ್ತನೆ ದೃಢೀಕರಣ ಪತ್ರ ನೀಡುವ ಅಗತ್ಯವಿರುವುದಿಲ್ಲ.[ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಮೆ]
ವಿಮೆ ಮಾಡಿಸಿಕೊಳ್ಳಲು ಜೂನ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸಬಹುದು.