ಯಾರಿಗೆ ಮತ ಹಾಕಿದ್ದೀರಿ ಏಳು ಸೆಕೆಂಡ್ ಗಳಲ್ಲಿ ನೋಡಿ!
ಬೆಂಗಳೂರು, ಏ.4 : ಕರ್ನಾಟಕದಲ್ಲಿ ಮೊದಲ ಬಾರಿಗೆ 'ವೋಟರ್ ವೆರಿಫೈಯೇಬಲ್ ಪೇಪರ್ ಟ್ರಯಲ್' ವ್ಯವಸ್ಥೆ ಜಾರಿಗೆ ತಂದಿದೆ. ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.
ಗುರುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ವೋಟರ್ ವೆರಿಫೈಯೇಬಲ್ ಪೇಪರ್ ಟ್ರಯಲ್ (ವಿವಿಪ್ಯಾಟ್) ಯಂತ್ರದ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಭಾರತ್ ಎಲೆಕ್ಟ್ರಾನಿಕ್ಸ್ ಲಿ. ಸಿದ್ಧಪಡಿಸಿರುವ ಈ ಪ್ರಿಂಟಿಂಗ್ ಉಪಕರಣವನ್ನು ಮತಗಟ್ಟೆಗಳಲ್ಲಿ ಬ್ಯಾಲೆಟ್ ಯೂನಿಟ್ ಜತೆಗೆ ಇರಿಸಲಾಗುವುದು ಎಂದರು.
ಮತಯಂತ್ರದಲ್ಲಿ ತಾನು ಚಲಾಯಿಸಿದ ಮತ ಇನ್ಯಾರಿಗೋ ಹೋಗಬಹುದು ಎಂಬ ಸಂಶಯ ನಿವಾರಣೆಗಾಗಿ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಜಾರಿಗೆ ತಂದಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಲೋಕಸಭೆ ಚುನಾವಣೆಯಲ್ಲಿ ಬಳಕೆಯಾಗಲಿದೆ ಎಂದರು. ವಿವಿಪ್ಯಾಟ್ ಕುರಿತ ಮತ್ತಷ್ಟು ಮಾಹಿತಿ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಯಾವುದೇ ಗೊಂದಲ ಬೇಡ
ವಿವಿಪ್ಯಾಟ್ ಯಂತ್ರ ಬಳಸುತ್ತಿದ್ದರೂ ಮತದಾರರಿಗೆ ಯಾವುದೇ ಗೊಂದಲ ಬೇಡ ಎಂದು ಅನಿಲ್ ಕುಮಾರ್ ಝಾ ಸ್ಪಷ್ಟಪಡಿಸಿದ್ದಾರೆ. ಹಿಂದಿನಂತೆಯೇ ಮತಯಂತ್ರದಲ್ಲಿ ಗುಂಡಿ ಒತ್ತಿದರೆ ಸಾಕು. ಆದರೆ, ನೀವು ಚಲಾಯಿಸಿದ ಮತ ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಯಂತ್ರದ ಮೂಲಕ ವೀಕ್ಷಿಸಬಹುದು ಅಷ್ಟೇ. ಮತ ಎಣಿಕೆಯಲ್ಲಿ ಕೂಡ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಿಂಟಿಂಗ್ ಡಿವೈಸ್ನಲ್ಲಿ ಹೆಚ್ಚಿನ ಗುಣಮಟ್ಟದ ಥರ್ಮಲ್ ಪೇಪರ್ ಬಳಸುವುದರಿಂದ 5 ವರ್ಷ ಮುದ್ರಿತ ಚೀಟಿ ಸುರಕ್ಷಿತವಾಗಿರಲಿದೆ. ಜತೆಗೆ ವಿವಿಪ್ಯಾಟ್ ಪ್ರಿಂಟಿಂಗ್ ಡಿವೈಸ್ಗಳನ್ನೂ ಸ್ಟ್ರಾಂಗ್ ರೂಂನಲ್ಲೇ ಇರಿಸಲಾಗುವುದು ಎಂದರು.
7 ಸೆಕೆಂಡ್ ದೃಶ್ಯ
ಮತಯಂತ್ರದಲ್ಲಿ ಅಭ್ಯರ್ಥಿಯ ಹೆಸರಿನ ಮುಂದಿನ ಗುಂಡಿಯನ್ನು ಮತದಾರ ಒತ್ತಿದಾಗ ಬೀಪ್ ಶಬ್ದದ ಜತೆಗೆ ಪಕ್ಕದ ವಿವಿಪ್ಯಾಟ್ನಲ್ಲಿ ಯಾರಿಗೆ ಮತ ಚಲಾಯಿಸಲಾಗಿದೆ ಎಂಬ ದೃಶ್ಯ ಮತ್ತು ಮುದ್ರಿತ ಚೀಟಿ ಕಾಣಿಸಿಕೊಳ್ಳುತ್ತದೆ. ಕೇವಲ 7 ಸೆಕೆಂಡ್ ಈ ದೃಶ್ಯ ವೀಕ್ಷಿಸಬಹುದಾಗಿದ್ದು, ಮುದ್ರಿತ ಚೀಟಿ ಯಂತ್ರದಲ್ಲೇ ಸಂಗ್ರಹವಾಗುತ್ತದೆ. ಅದನ್ನು ಮತದಾರರಿಗೆ ನೀಡಿವುದಿಲ್ಲ ಎಂದು ಅನಿಲ್ ಕುಮಾರ್ ಝಾ ವಿವರಿಸಿದರು.
ಪ್ರಾಯೋಗಿಕ ಪರೀಕ್ಷೆ
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈ ಯಂತ್ರಗಳನ್ನು ಬಳಸಲಾಗಿತ್ತು. ಸದ್ಯ ಕೇಂದ್ರ ಚುನಾವಣೆ ಆಯೋಗ ಲೋಕಸಭೆ ಚುನಾವಣೆಯಲ್ಲೂ ಪ್ರಾಯೋಗಿಕವಾಗಿ ಕರ್ನಾಟಕದ ಬೆಂಗಳೂರು ದಕ್ಷಿಣ ಸೇರಿದಂತೆ ಬಿಹಾರದ ಪಟನಾಸಾಹಿಬ್, ಛತ್ತೀಸ್ಗಢದ ರಾಯ್ಪುರ, ಗುಜರಾತ್ನ ಗಾಂಧಿನಗರ, ತಮಿಳುನಾಡಿನ ಚೆನ್ನೈ ಸೆಂಟ್ರಲ್, ಉತ್ತರಪ್ರದೇಶದ ಲಕ್ನೋ, ಪಶ್ಚಿಮ ಬಂಗಾಳದ ಜಾಧವಪುರ್ ಕ್ಷೇತ್ರಗಳಲ್ಲಿ ವಿವಿಪ್ಯಾಟ್ ಬಳಸುತ್ತಿದೆ.
ವಿವಿಪ್ಯಾಟ್ ಗಳ ಸಂಖ್ಯೆ ಕಡಿಮೆ ಇದೆ
ವಿವಿಪ್ಯಾಟ್ ಯಂತ್ರಗಳ ಸಂಖ್ಯೆ ಕಡಿಮೆ ಇರುವುದರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಇದನ್ನು ಅಳವಡಿಸಲಾಗುತ್ತದೆ. ಕ್ಷೇತ್ರದಲ್ಲಿ ಕೇವಲ 1925 ಮತಗಟ್ಟೆಗಳಿರುವುದರಿಂದ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅನಿಲ್ ಕುಮಾರ್ ಝಾ ಹೇಳಿದರು. ಬಿಇಎಲ್ 2455 ವಿವಿಪ್ಯಾಟ್ ಯಂತ್ರವನ್ನು ಪೂರೈಸಿದೆ. ಯಂತ್ರದ ಬಳಕೆ ಬಗ್ಗೆ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.
ಸಂಶಯ ಬಂದರೆ ದೂರು ನೀಡಿ
ಮತದಾರರಿಗೆ ಯಂತ್ರದ ಬಗ್ಗೆ ಸಂಶಯ ಬಂದರೆ ಚುನಾವಣಾಧಿಕಾರಿಗೆ ಲಿಖಿತ ದೂರು ನೀಡಿದರೆ, ಅವರ ಆದೇಶದಂತೆ ಎಲ್ಲರೆದುರು ಪರಿಶೀಲಿಸಲಾಗುತ್ತದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಹೇಳಿದ್ದಾರೆ. ಅಗತ್ಯವಿದ್ದರೆ ಬೇರೆ ಯಂತ್ರ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಒಂದು ವೇಳೆ ವಿವಿಪ್ಯಾಟ್ ಕಾರ್ಯದ ಬಗ್ಗೆ ಸುಳ್ಳು ದೂರು ನೀಡಿದರೆ ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮೂರು ತಿಂಗಳ ಸಜೆ
ವಿವಿಪ್ಯಾಟ್ನ ದೃಶ್ಯವನ್ನು ಮೊಬೈಲ್ಗಳಲ್ಲಿ ಸೆರೆಹಿಡಿದುಕೊಂಡು ಚುನಾವಣಾ ಅಕ್ರಮಗಳಿಗೆ ಬಳಸಿಕೊಳ್ಳಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮತಗಟ್ಟೆಗಳಲ್ಲಿ ಮೊಬೈಲ್ ಬಳಕೆಯನ್ನು ನಿರ್ಬಂಧಿಸಲಾಗಿದೆ. ಮತದಾರ ವಿವಿಪ್ಯಾಟ್ನಲ್ಲಿ ಮತ ದಾಖಲಾದ ದೃಶ್ಯ ಸೆರೆಹಿಡಿಯಲು ಮುಂದಾದರೆ ಗೌಪ್ಯ ಮತದಾನ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಸ್ಥಳದಲ್ಲೇ ಪೊಲೀಸರು ಅಂಥವರನ್ನು ವಶಕ್ಕೆ ಪಡೆಯಲಿದ್ದು, ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.