ಯು.ಆರ್.ಅನಂತಮೂರ್ತಿ ಅವರನ್ನು ಕಾಡಿದ ವಿವಾದಗಳು
ಬೆಂಗಳೂರು, ಆ.23 : ಅನಂತಮೂರ್ತಿ ಅವರು ಇದ್ದದ್ದೇ ಹಾಗೆ, ಅನ್ನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಿದ್ದರು. ಅವರ ವಾದವನ್ನು ಒಪ್ಪದ ಅನೇಕರು ಅವರನ್ನು ಕಟುವಾಗಿ ವಿರೋಧಿಸುತ್ತಿದ್ದರು. ಆದರೆ, ತಮ್ಮ ನಿಲುವಿನಲ್ಲಿ ಎಂದಿಗೂ ಬದಲಾವಣೆ ಮಾಡಿಕೊಳ್ಳದ ಯು.ಆರ್.ಅನಂತಮೂರ್ತಿ ಅವರು ಹಲವಾರು ವಿವಾದಗಳಿಗೆ ಗುರಿಯಾಗಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಎಂದೊಡನೆ ನೆನಪಾಗುವುದು ಅವರ ವಿವಾದಗಳು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ದೇಶದ ಪ್ರಧಾನಿಯಾಗಬಾರದು ಎಂದು ಹೇಳಿಕೆ ನೀಡಿದ್ದ ಅನಂತಮೂರ್ತಿ ಅವರು ಭಾರೀ ವಿವಾದ ಎದುರಿಸಬೇಕಾಯಿತು. [ಅನಂತಮೂರ್ತಿ ವ್ಯಕ್ತಿಚಿತ್ರ]
"ದೇವರ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದರೂ ನನಗೆ ಏನು ಆಗಿಲ್ಲ" ಎಂದು ಅನಂತಮೂರ್ತಿ ಬೆತ್ತಲೆ ಪೂಜೆ ಪುಸ್ತಕದಲ್ಲಿ ಬರೆದಿಕೊಂಡಿದ್ದಾರೆ ಎಂದು ಸಂಶೋಧಕ ಎಂ.ಎಂ.ಕಲಬುರ್ಗಿ ಅವರು ಹೇಳಿದ್ದು ವಿವಾದ ಹುಟ್ಟುಹಾಕಿತ್ತು. ಅನಂತಮೂರ್ತಿ ಅವರ ಐದು ಪ್ರಮುಖ ವಿವಾದಗಳತ್ತ ಒಮ್ಮೆ ಗಮನ ಹರಿಸೋಣ [ಯುಆರ್ಎ ಅಂತ್ಯಸಂಸ್ಕಾರದ ಮಾಹಿತಿ ಇಲ್ಲಿದೆ]
ನರೇಂದ್ರ ಮೋದಿ ವಿರೋಧಿಸಿದ್ದರು
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅನಂತಮೂರ್ತಿ ಅವರು "ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ದೇಶದಲ್ಲಿ ನಾನು ಇರಲು ಬಯಸುವುದಿಲ್ಲ" ಎಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ಭಾರೀ ವಿವಾದ ಹುಟ್ಟುಹಾಕಿತ್ತು. ನಮೋ ಬ್ರಿಗೇಡ್ ಸದಸ್ಯರು ಅನಂತಮೂರ್ತಿ ಅವರಿಗೆ ಪಾಕಿಸ್ತಾನದ ಟಿಕೆಟ್ ಕಳುಹಿಸುವ ತನಕ ಈ ವಿವಾದ ಮುಂದುವರೆದಿತ್ತು. ಆದರೂ ಅನಂತಮೂರ್ತಿ ಅವರು ತಮ್ಮ ಇಂದಿನ ಹುಡುಗರೇ ಹೀಗೆ ಎಂದು ಟೀಕೆಗಳನ್ನು ಸ್ವೀಕರಿಸಿದ್ದರು.
ರಾಜ್ಯಪಾಲರ ವಿರುದ್ಧವೇ ಭ್ರಷ್ಟಾಚಾರದ ಆರೋಪ
ಕರ್ನಾಟಕದ ರಾಜ್ಯಪಾಲರಾಗಿದ್ದ ಎಚ್.ಆರ್.ಭರದ್ವಾಜ್ ಅವರ ವಿರುದ್ಧವೇ ಭ್ರಷ್ಟಾಚಾರದ ಆರೋಪವನ್ನು ಅನಂತಮೂರ್ತಿ ಮಾಡಿದ್ದರು. ದಾವಣಗೆರೆ ವಿವಿ ಮತ್ತು ರಾಜಭವನದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ರಾಜ್ಯಪಾಲರು, ಯಾರ್ರೀ ಅನಂತಮೂರ್ತಿ? ಎಂದು ಹೇಳಿದ್ದರು.
ಗೋಮಾಂಸ ವಿವಾದ
"ಬ್ರಾಹ್ಮಣರು ಗೋಮಾಂಸ ಭಕ್ಷಿಸುತ್ತಿದ್ದರು. ಈ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದೆ" ಎಂದು ಅನಂತಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತು ವಿವಾದ ಹುಟ್ಟುಹಾಕಿತ್ತು. ತಮ್ಮ ನಿಲುವನ್ನು ಅನಂತಮೂರ್ತಿ ಅವರು ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಯೇ ಸಮರ್ಥಿಸಿಕೊಂಡಿದ್ದರು.
ಕುಮಾರಸ್ವಾಮಿ ವಿವಾದ
ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಯು.ಆರ್.ಅನಂತಮೂರ್ತಿ ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯಲ್ಲಿ ಸೋತ ನಂತರ ಸಿಎಂ ಕುಮಾರಸ್ವಾಮಿ ನನಗೆ ಬೆಂಬಲ ನೀಡಲಿಲ್ಲ ಎಂದು ಟೀಕಿಸಿದ್ದರು. ಇದರಿಂದ ಕೋಪಗೊಂಡ ಕುಮಾರಸ್ವಾಮಿ ಅನಂತಮೂರ್ತಿ ಯಾರು ಎಂದು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಯುಆರ್ಎ ಅನಂತಮೂರ್ತಿ ಯಾರು ಎಂದು ದೇವೇಗೌಡರನ್ನು ಕೇಳಲಿ ಎಂದು ಕುಮಾರಸ್ವಾಮಿಗೆ ಸಲಹೆ ನೀಡಿದ್ದರು.
ಚಂಪಾ ಚೇಳು, ಯುಆರ್ಎ ಘಟಸರ್ಪ
ಸಾಹಿತಿ ಚಂದ್ರಶೇಶರ ಪಾಟೀಲ್ ಮತ್ತು ಅನಂತಮೂರ್ತಿ ಅವರ ನಡುವಿನ ವಾಗ್ಯುದ್ಧ ಭಾರೀ ಸುದ್ದಿ ಮಾಡಿತ್ತು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನದ ಕುರಿತು ಹೇಳಿಕೆ ನೀಡಿದ್ದ ಯುಆರ್ಎ ಕನ್ನಡಕ್ಕೆ ಶಾಸ್ತ್ರೀಯ ಭಾಷೆಗಿಂತ ಹಿರಿದಾದದ ಸ್ಥಾನವಿದೆ ಎಂದು ಹೇಳಿದ್ದರು. ಇದನ್ನು ಖಂಡಿಸಿದ್ದ ಚಂಪಾ ಅವರು ಅನಂತಮೂರ್ತಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದದ್ದಲ್ಲ ಹೊಡೆದುಕೊಂಡಿದ್ದು ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಯುಆರ್ಎ ಚಂಪಾ ಚೇಳಿನಂತೆ ಎಂದು ಟೀಕಿಸಿದ್ದರು. ಆಗ ಚಂಪಾ ಅನಂತಮೂರ್ತಿ ಘಟಸರ್ಪ ಎಂದಿದ್ದರು.
ಆವರಣ ಕಾದಂಬರಿ ಬಗೆಗಿನ ವಿವಾದ
ಎಸ್.ಎಲ್.ಭೈರಪ್ಪ ಅವರ ಆವರಣ ಕಾದಂಬರಿ ಬಿಡುಗಡೆ ಆದಾಗ ಸಾಹಿತ್ಯ ಚರ್ಚೆಗೆ ಯೋಗ್ಯವಾದ ಒಳ್ಳೆಯ ಪುಸ್ತಕ ಇದು ಅಲ್ಲ ಎಂದು ಅನಂತಮೂರ್ತಿ ಹೇಳಿದ್ದು ವಿವಾದದ ಕಿಡಿ ಹೊತ್ತಿಸಿತ್ತು. ಈ ಬಗೆಗಿನ ವಿವಾದ ತಾರಕಕ್ಕೆ ಹೋದಾಗ ಅನಂತಮೂರ್ತಿ ಅವರು ನಾನಿನ್ನು ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿದಿಲ್ಲ ಎಂದು ಹೇಳಿಕೆ ನೀಡಿದ್ದರು.