ಯಡಿಯೂರಪ್ಪ ಮತ್ತು ಬಿಜೆಪಿ ನನ್ನೆರಡು ಕಣ್ಣು: ಶೋಭಾ
ಚಿಕ್ಕಮಗಳೂರು, ಏ.3- ನನ್ನ ರಾಜಕೀಯ ಗುರು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಭಾರತೀಯ ಜನತಾ ಪಕ್ಷವು ನನಗೆ ಎರಡು ಕಣ್ಣುಗಳಿದ್ದಂತೆ ಎಂದು ಮಾಜಿ ಸಚಿವೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
ಚಿಕ್ಕಮಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶೋಭಾ, ಬಿಜೆಪಿ ಹಾಗೂ ಯಡಿಯೂರಪ್ಪ ನನ್ನೆರಡು ಕಣ್ಣುಗಳಿದ್ದಂತೆ ಎಂದು ಬಣ್ಣಿಸಿದರು.
ನಾನು ಸಂಸದೆಯಾಗಿ ಆಯ್ಕೆಯಾದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನುಕಾಡುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಯತ್ನ ಮಾಡುತ್ತೇನೆ. ಒತ್ತುವರಿ ಸಮಸ್ಯೆ, ಅಡಿಕೆಗೆ ಹಳದಿ ರೋಗ ಉಡುಪಿ ಜಿಲ್ಲೆಯಲ್ಲೂ ಇದೆ. ಚಿಕ್ಕಮಗಳೂರಲ್ಲಿರುವ ಕಾಫಿ ಬೆಳೆಗಾರರ ಸಮಸ್ಯೆ ಮಾತ್ರ ನನಗೆ ಹೊಸದು. ಇದನ್ನು ಹೊರತು ಪಡಿಸಿದರೆ ಎರಡೂ ಜಿಲ್ಲೆಗಳ ಸಮಸ್ಯೆ ಒಂದೇ ಆಗಿವೆ ಎಂದು ಶೋಭಾ ಹೇಳಿದರು.
ಕಾಂಗ್ರೆಸ್ಸಿನವರು ನನ್ನನ್ನು ಬೇರೆ ಕ್ಷೇತ್ರದಿಂದ ಬಂದಿವರೆಂದು ಹೇಳುತ್ತಿದ್ದಾರೆ. ಅದು ಅವರ ತಪ್ಪು ಅಭಿಪ್ರಾಯ. ನಾನು ಉಡುಪಿ ಜಿಲ್ಲೆಯಲ್ಲೇ ರಾಜಕೀಯ ಜೀವನ ಪ್ರಾರಂಭ ಮಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲೂ ನಾನು ಹೊಸದಾಗಿ ಸ್ಪರ್ಧಿಸಿದ್ದೆ. ಅಲ್ಲಿನ ಮತದಾರರು ನನ್ನ ಕೈ ಬಿಡಲಿಲ್ಲ. ಅದಕ್ಕೆ ತಕ್ಕಂತೆ ಅಲ್ಲಿ ನಾನು 700 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದು ಶೋಭಾ ಕರಂದ್ಲಾಜೆ ತೃಪ್ತಿ ವ್ಯಕ್ತಪಡಿಸಿದರು.
'ಚಿಕ್ಕಮಗಳೂರು ಜನ ಮಹಿಳೆಯರಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದ್ದಾರೆ. ನಾನು ಸಚಿವೆಯಾಗಿದ್ದಾಗ ಮಾಡಿದ ಕಾರ್ಯಗಳನ್ನು ಸ್ಮರಿಸಿ ನನ್ನನ್ನು ಆಶೀರ್ವದಿಸುತ್ತಾರೆ ಎಂಬ ವಿಶ್ವಾಸ ನನಗಿದೆ' ಎಂದು ಅವರು ತಿಳಿಸಿದರು. (ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಿರುಪರಿಚಯ)
'ವ್ಯಕ್ತಿ, ಪಕ್ಷದ ಸಿದ್ಧಾಂತ ಮತ್ತು ಅಭಿವೃದ್ಧಿ ಆಧಾರದ ಮೇಲೆ ಮತ ಯಾಚಿಸುತ್ತೇವೆ. ಕರ್ನಾಟಕದಲ್ಲಿ ಯಾವುದೇ ಸರ್ಕಾರ ಬಂದರೂ ಮಹಿಳೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಪರ್ಮನೆಂಟ್. ಆದರೆ, ಬಿಜೆಪಿ ಸರ್ಕಾರ ಮಾತ್ರ ಪ್ರಮುಖ ಇಂಧನ ಖಾತೆ ನೀಡಿ ನಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಿತು' ಎಂದು ಹೆಮ್ಮೆಪಟ್ಟರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್ ಅಭ್ಯರ್ಥಿಯೂ ಪ್ರಬಲವಾಗಿದ್ದಾರೆ. ಧನಂಜಯ್ ಕುಮಾರ್ 4 ಬಾರಿ ಸಂಸದರಾಗಿದ್ದು, ಅವರ ಪ್ರಭಾವವೂ ಇದೆ. ಆದರೂ ನಾನು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]