ಕರ್ನಾಟಕದ ನೂತನ ಕೇಂದ್ರ ಸಚಿವರು ಹೇಳಿದ್ದೇನು?
ಬೆಂಗಳೂರು, ಮೇ 27 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕರ್ನಾಟಕಕ್ಕೆ ಉತ್ತಮ ಪ್ರಾತಿನಿಧ್ಯ ದೊರಕಿದೆ. ಎರಡು ಸಂಪುಟ ದರ್ಜೆ ಹಾಗೂ ಒಂದು ರಾಜ್ಯ ದರ್ಜೆ ಸಚಿವ ಸ್ಥಾನಗಳು ರಾಜ್ಯಕ್ಕೆ ಲಭಿಸಿವೆ. ಮೂವರು ಸಚಿವರು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರರೊಂದಿಗೆ ಸೋಮವಾರ ಸಂಜೆ ಡಿ.ವಿ.ಸದಾನಂದಗೌಡ, ಅನಂತ್ ಕುಮಾರ್ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ರಾಜ್ಯ ದರ್ಜೆ ಸಚಿವ ಸ್ಥಾನ ದೊರಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟ ಚಿಕ್ಕ ಹಾಗೂ ಚೊಕ್ಕದಾಗಿರಬೇಕು ಎಂಬ ಉದ್ದೇಶದಿಂದ 45 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ಅವರು ಸಂಪುಟ ವಿಸ್ತರಣೆ ಮಾಡಿದಾಗ ಕರ್ನಾಟಕಕ್ಕೆ ಮತ್ತಷ್ಟು ಸ್ಥಾನ ದೊರೆಯುವ ಸಾಧ್ಯತೆ ಇದೆ.
ಸೋಮವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂವರು ಸಚಿವರು ರಾಜ್ಯದ ಒಳಿತಿಗಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಬೆಂಗಳೂರು ಉತ್ತರದ ಸಂಸದ ಡಿ.ವಿ.ಸದಾನಂದ ಗೌಡ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ಅನಂತ್ ಕುಮಾರ್ ಅವರಿಂದ ಬೆಂಗಳೂರು ನಗರದ ಅಭಿವೃದ್ಧಿಯನ್ನು ನಿರೀಕ್ಷಿಸಲಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪ್ರತಿಕ್ರಿಯೆ ಇಲ್ಲಿದೆ. [ಯಾವ ಸಚಿವರಿಗೆ ಯಾವ ಖಾತೆ?]
ಕರ್ನಾಟಕದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ
ಕರ್ನಾಟಕದ ಎಲ್ಲಾ ನಾಯಕರ ಸಹಕಾರದಿಂದ ನನಗೆ ಮೋದಿ ಅವರ ಸಂಪುಟದಲ್ಲಿ ಸ್ಥಾನ ದೊರಕಿದೆ ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ನರೇಂದ್ರ ಮೋದಿ ಅವರಿಗೆ ಕಳಂಕ ಬರದಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿರುವ ಸದಾನಂದ ಗೌಡರು, ಕರ್ನಾಟಕದ ಎಲ್ಲಾ ಭಾಗಗಳ ಅಭಿವೃದ್ಧಿಗೆ ರಾಜ್ಯದ ಸಂಸದರೊಂದಿಗೆ ಸೇರಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನಮ್ಮ ಜವಾಬ್ದಾರಿ ಹೆಚ್ಚಿದೆ
ಬಿಜೆಪಿ ಪಕ್ಷ ಮತ್ತು ನರೇಂದ್ರ ಮೋದಿ ಅವರ ಮೇಲೆ ನಂಬಿಕೆಯಿಟ್ಟು ಜನರು ಇಷ್ಟೊಂದು ಬಹುಮತದಿಂದ ನಮ್ಮನ್ನು ಗೆಲ್ಲಿಸಿದ್ದಾರೆ. ದೇಶವನ್ನು ಆರ್ಥಿಕ, ರಕ್ಷಣಾತ್ಮಕ ಹಾಗೂ ಆಡಳಿತ ಸಂಕಟದಿಂದ ಪಾರುಮಾಡುವಂಥ ಜವಾಬ್ದಾರಿಯನ್ನು ಜನರು ನಮಗೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ. ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಅನಂತ್ ಕುಮಾರ್ ಭರವಸೆ ನೀಡಿದ್ದಾರೆ.
ಪಕ್ಷಕ್ಕೆ ದುಡಿದಕ್ಕೆ ಸಿಕ್ಕಫಲವಿದು
ನನ್ನ ಮೇಲೆ ನಂಬಿಕೆ ಇಟ್ಟು ಸಚಿವ ಸ್ಥಾನ ನೀಡಿದ್ದಾರೆ ಎಂದು ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್ ಸಂತಸ ಹಂಚಿಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ನಾನು ಪಕ್ಷದಲ್ಲಿ ದುಡಿದಿದ್ದಕ್ಕೆ ದೊರೆತ ಪ್ರತಿಫಲವಿದು. ನನಗೆ ಸಚಿವ ಸ್ಥಾನ ದೊರೆಯಲು ಕಾರಣರಾದ ಯಡಿಯೂರಪ್ಪ, ಅನಂತ್ ಕುಮಾರ್ ಸೇರಿದಂತೆ ರಾಜ್ಯದ ಎಲ್ಲಾ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿದ್ದೇಶ್ವರ್ ಹೇಳಿದ್ದಾರೆ.
ನನಗೆ ಡಬಲ್ ಖುಷಿಯಾಗಿದೆ
ಪ್ರಮಾಣ ವಚನ ಸಮಾರಂಭಕ್ಕೆಂದು ನಾನು ದೆಹಲಿಗೆ ಆಗಮಿಸಿದ್ದೆ. ಅಷ್ಟರಲ್ಲಿ ನನ್ನ ಪತಿ ಕೇಂದ್ರ ಮಂತಿಯಾಗಲಿದ್ದಾರೆ ಎಂಬ ಸುದ್ದಿ ಸಿಕ್ಕಿತು. ಇದರಿಂದ ನನಗೆ ಡಬಲ್ ಖುಷಿಯಾಗಿದೆ. ಗಂಡನಿಗೆ ಯಾವುದೇ ಸಲಹೆಯನ್ನು ನಾನು ನೀಡಲಾರೆ, ಏನು ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಪತ್ನಿ ಡಾಟಿ ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ.