ಮೆರ್ಸ್ ವೈರಸ್: ವಿಮಾನ ನಿಲ್ದಾಣದಲ್ಲಿ ತಪಾಸಣೆ
ಬೆಂಗಳೂರು, ಮೇ.24: ಕೊಲ್ಲಿ ರಾಷ್ಟ್ರಗಳಿಂದ ಮಾರಕ ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಎಂಇಆರ್ಎಸ್) ವೈರಸ್ ರಾಜ್ಯದಲ್ಲಿ ಹರಡದಂತೆ ತಡೆಯಲು ವಿಮಾನ ನಿಲ್ದಾಣಗಳಲ್ಲಿ ಶಂಕಿತ ಸೋಕಿತರ ತಪಾಸಣೆ ಕಾರ್ಯ ಮೇ.24 ಶನಿವಾರದಿಂದಲೇ ಆರಂಭವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರಿನ ವಿಮಾನನಿಲ್ದಾಣದಲ್ಲಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಶನಿವಾರದಿಂದ ತಪಾಸಣೆ ನಡೆಸಲಿದ್ದು, ಸೋಂಕು ಹರಡದಂತೆ ತಡೆಗೆ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಕೊಲ್ಲಿ ರಾಷ್ಟ್ರಗಳಿಂದ ಮೆರ್ಸ್ ವೈರಸ್ ವ್ಯಾಪಕವಾಗಿ ಹರಡುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.[ಸೌದಿಯಲ್ಲಿ ಹೆಚ್ಚಾಗುತ್ತಿದೆ ಎಂಇಆರ್ಎಸ್ ಸೋಂಕು]
ಮೆರ್ಸ್ ವೈರಸ್ 656 ಜನರಿಗೆ ತಗಲಿದ್ದು, 199 ಜನ ಮೃತಪಟ್ಟಿದ್ದಾರೆ. ಎಂಇಆರ್ಎಸ್ 2012ರಲ್ಲಿ ಪತ್ತೆಯಾಗಿದ್ದು ಸಾರ್ಸ್ ಸೋಂಕುಗಿಂತ ಅಪಾಯಕಾರಿಯಾಗಿದೆ.ವಿಶ್ವದ ವಿಜ್ಞಾನಿಗಳು ಈ ಸೋಂಕು ಪತ್ತೆಯಾದ ದಿನದಿಂದ ಇಲ್ಲಿಯವರೆಗೆ ಸಂಶೋಧನೆ ನಡೆಸುತ್ತಿದ್ದು, ಇದುವರೆಗೂ ಯಾವ ಪ್ರಾಣಿಯಿಂದ ಈ ಸೋಂಕು ಹರಡುತ್ತದೆ ಎನ್ನುವುದನ್ನು ತಿಳಿಸಿಲ್ಲ.
ಈ ಸೋಂಕಿನಿಂದ ಆರಂಭಿಕ ಹಂತದಲ್ಲಿ ಕೆಮ್ಮು, ಶೀತ ಬರುತ್ತದೆ. ಬಳಿಕ ಉಲ್ಬಣಗೊಂಡು ರಕ್ತಸ್ರಾವ, ಮೂತ್ರ ಪಿಂಡಗಳ ವೈಫಲ್ಯ, ತೀವ್ರ ಉಸಿರಾಟದ ತೊಂದರೆಯಿಂದಾಗಿ ರೋಗಿಯ ಸಾವಿಗೆ ಈ ಸೋಂಕು ಕಾರಣವಾಗುತ್ತದೆ.
ಮೆರ್ಸ್ ಕುರಿತ ಕ್ಷಣ ಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಬಹುದು: http://coronamap.com/