ಕೊಪ್ಪಳ : ಸ್ವಾಮೀಜಿ ಜೊತೆ ಬೆಂಕಿ ಹಚ್ಚಿಕೊಂಡ ಮಹಿಳೆ
ಕೊಪ್ಪಳ, ಜ. 19 : ಕೊಪ್ಪಳದ ಶಿವಾನಂದ ಮಠದ ಸ್ವಾಮೀಜಿಗಳು ಅಗ್ನಿ ಆಕಸ್ಮಿಕದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಸ್ವಾಮೀಜಿ ಅವರ ಮೇಲೆ ಬಿದ್ದಿದ್ದರಿಂದ ಸ್ವಾಮೀಜಿ ಗಾಯಗೊಂಡಿದ್ದಾರೆ. ಮಹಿಳೆ ಮಠದಲ್ಲಿಯೇ ಸಾವನ್ನಪ್ಪಿದ್ದಾಳೆ.
ಕೊಪ್ಪಳ ಜಿಲ್ಲೆಯ ಯುಲಬುರ್ಗ ತಾಲೂಕಿನ ಮರಕಟ್ಟೆ ಗ್ರಾಮದಲ್ಲಿರುವ ಶಿವಾನಂದ ಮಠದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಶಿವಾನಂದ ಶ್ರೀ ಸ್ವಾಮೀಜಿ ಅವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಬೆಂಕಿ ಹಚ್ಚಿಕೊಂಡ ಪ್ರಭಾವತಿ ಎನ್ನುವ ಮಹಿಳೆ ಸಾವನ್ನಪ್ಪಿದ್ದಾರೆ. [ಬೀದರ್ ಚೌಳಿ ಮಠದ ಮತ್ತೊಬ್ಬ ಸ್ವಾಮೀಜಿ ಸಾವು]
ಮೂಲತಃ ವಿಜಯಪುರದವರಾದ ಪ್ರಭಾವತಿ ಅವರು ಕಳೆದ 10 ವರ್ಷಗಳಿಂದ ಮಠದಲ್ಲಿ ಕೆಲಸ ಮಾಡುತ್ತಿದ್ದರು. ಸ್ವಾಮೀಜಿ ಮತ್ತು ಪ್ರಭಾವತಿ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಆರೋಪವೂ ಇದೆ. ಕಳೆದ ಕೆಲವು ದಿನಗಳ ಹಿಂದೆ ಪ್ರಭಾವತಿ ಅವರು ಮಠದ ಆಸ್ತಿಯಲ್ಲಿ ಪಾಲು ನೀಡುವಂತೆ ಶಿವಾನಂದ ಶ್ರೀಗಳ ಬಳಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಶ್ರೀಗಳು ನಿರಾಕರಿಸಿದ್ದರು. [ಕೊಪ್ಪಳದಲ್ಲಿ ಸಿಕ್ಕಿಬಿದ್ದ ನಕಲಿ ಸ್ವಾಮಿ]
ಸೋಮವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಶಿವಾನಂದ ಶ್ರೀ ಪೂಜೆ ಮಾಡುತ್ತಿದ್ದಾಗ ಸ್ವಾಮೀಜಿ ಅವರ ಕೋಣೆಗೆ ಹೋದ ಪ್ರಭಾವತಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸ್ವಾಮೀಜಿ ಅವರ ಮೇಲೆ ಬಿದ್ದಿದ್ದಾರೆ. ಪ್ರಭಾವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಗಂಭೀರವಾಗಿ ಗಾಯಗೊಂಡ ಶಿವಾನಂದ ಶ್ರೀಗಳನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರತಿದಿನ ಬೆಳಗ್ಗೆ 9ರಿಂದ 10 ಗಂಟೆಯ ತನಕ ಶಿವಾನಂದ ಶ್ರೀಗಳು ಪೂಜೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಭಕ್ತರಾರು ಸ್ವಾಮೀಜಿಗಳ ಕೋಣೆಗೆ ಪ್ರವೇಶಿಸುವುದಿಲ್ಲ. ಆದ್ದರಿಂದ ಬೆಂಕಿ ಹಚ್ಚಿಕೊಂಡ ಘಟನೆಯನ್ನು ಭಕ್ತರು ತಡವಾಗಿ ಗಮನಿಸಿದ್ದಾರೆ. ಪ್ರಭಾವತಿ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಅವರ ಶವವನ್ನು ಮಠದಲ್ಲಿಯೇ ಇಡಲಾಗಿದೆ. ಅವರ ಸಂಬಂಧಿಕರು ಮಠಕ್ಕೆ ಆಗಮಿಸುತ್ತಿದ್ದಾರೆ.