ಕ್ರೈಂ ರೌಂಡಪ್ : ಪತ್ನಿ ತಿರಸ್ಕಾರಕ್ಕೆ ಬೇಸತ್ತು ಪತಿ ಆತ್ಮಹತ್ಯೆ
ಬೆಂಗಳೂರು, ಏ.30: ಆತ ತನ್ನ ಮದುವೆಯ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಕನಸಿನಲ್ಲಿ ತೇಲುತ್ತಿದ್ದ. ಪತ್ನಿಗಾಗಿ ನಿರೀಕ್ಷಿಸುತ್ತಿದ್ದ. ಆದರೆ, ತವರಿಗೆ ಹೋಗಿದ್ದ ಪತ್ನಿ ವಿವಾಹ ವಾರ್ಷಿಕೋತ್ಸವಕ್ಕೆ ವಾಪಸ್ ಬರಲಿಲ್ಲ. ಇದರಿಂದ ಬೇಸರಗೊಂಡ ಪತಿನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರಗನಹಳ್ಳಿಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕು ಲಂಕೆ ಗ್ರಾಮದ ಶಿವಣ್ಣ (32) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ದುರ್ದೈವಿ. ಜೆ.ಪಿ.ನಗರ 6ನೇ ಹಂತ ಕೊತ್ತನೂರು ದಿಣ್ಣೆ ನಿವಾಸಿಯಾಗಿದ್ದ ಈತ ಜೆ.ಪಿ .ನಗರ 6ನೇ ಹಂತ ಹೊರವರ್ತುಲ ರಸ್ತೆ ಅಡಿಗಾಸ್ ಹೊಟೇಲ್ ನಲ್ಲಿ ದೋಸೆ ಸ್ಪೆಷಲಿಸ್ಟ್ ಆಗಿದ್ದ.
ಶಿವಣ್ಣ ಸುಮಾರು ಹತ್ತು ವರ್ಷಗಳಿಂದ ಅಡುಗೆ ಕೆಲಸ ಮಾಡುತ್ತಿದ್ದರು. 6 ವರ್ಷಗಳ ಹಿಂದೆ ಮದುವೆಯಾಗಿದ್ದ ಶಿವಣ್ಣ ಅವರಿಗೆ ಒಂದು ಗಂಡು ಮಗುವಿದೆ. 15 ದಿನಗಳ ಹಿಂದೆ ಪತ್ನಿ ಭಾಗ್ಯ ಅವರು ನಂಜನಗೂಡಿನಲ್ಲಿರುವ ತವರು ಮನೆಗೆ ಹೋಗಿದ್ದು ವಾಪಸಾಗಿರಲಿಲ್ಲ. ಮೂರು ದಿನ ಹಿಂದೆ ಶಿವಣ್ಣ ವಿವಾಹ ವಾರ್ಷಿಕೋತ್ಸವ ಇತ್ತು. ಹೀಗಾಗಿ ಶಿವಣ್ಣ ಮನೆಗೆ ಬರುವಂತೆ ಪತ್ನಿಯನ್ನು ಕರೆದಿದ್ದ.ಆದರೆ, ಪತ್ನಿ ಬಾರದ ಹಿನ್ನೆಲೆಯಲ್ಲಿ ಒಬ್ಬನೇ ಅಕ್ಕ ಪಕ್ಕದ ನಿವಾಸಿಗಳಿಗೆ ಸಿಹಿ ಹಂಚಿ ಸ್ನೇಹಿತರಿಗೆ ಪಾರ್ಟಿ ನೀಡಿದ್ದ. ಭಾನುವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿವಣ್ಣ ಇರುವ ಮನೆಯ ಪಕ್ಕದಲ್ಲೇ ಸ್ನೇಹಿತನು ವಾಸವಿದ್ದು ನಿತ್ಯ ಇಬ್ಬರು ಒಂದೇ ಬೈಕ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೋಗಲು ಸ್ನೇಹಿತ ಶಿವಣ್ಣನನ್ನು ಕರೆಯಲು ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು: ಅಸ್ವಾಭಾವಿಕ ಮರಣ ಪ್ರಕರಣ
ಕಾಪು: ಪಿರ್ಯಾದುದಾರರಾದ ಶೇಖರ್ ಶೆಟ್ಟಿ (83) ತಂದೆ: ದ. ಅಂತಯ್ಯ ಶೆಟ್ಟಿ ವಾಸ: ಹೆರ್ಗ ಮೂಡಮನೆ ಪರ್ಕಳ ಹೆರ್ಗ ಗ್ರಾಮ ಉಡುಪಿ ತಾಲೂಕು ಎಂಬವರ ಅಳಿಯ ಸಂತೋಷ ಶೆಟ್ಟಿ (65) ಎಂಬವರು ವಿಪರಿತ ಶರಾಬು ಸೇವಿಸುವ ಚಟ ಹೊಂದಿದ್ದು, 2 ವರ್ಷಗಳ ಹಿಂದೆ ಅದರ ವಾಯು ಆಪರೇಷನ್ ಗೆ ಕೂಡ ಒಳಗಾಗಿದ್ದು ಅವರು ದಿನಾಂಕ 29.04.2014 ರಂದು ಸಂಜೆ 4:30 ಗಂಟೆಗೆ ಯೇಣಗುಟ್ಟೆ ಗ್ರಾಮದ ಕಟಪಾಡಿಯ ಹಳೆ ಪಂಚಾಯತ್ ಆಫೀಸ್ ಎದುರುಗಡೆ ವಿಪರೀತ ಶರಾಬು ಸೇವನೆ ಮಾಡಿ ಸ್ಥಳದಲ್ಲಿ ಬಿದ್ದು ಮೃತಪಟ್ಟಿರುವುದಾಗಿದೆ ಎಂಬುದಾಗಿ ಶೇಖರ್ ಶೆಟ್ಟಿ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 11/2014 ಕಲಂ 174 ಸಿ.ಆರ್ ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ತುಂಗಾನಗರ ಠಾಣೆ ಅಪಘಾತದಿಂದ ಸಾವು ಪ್ರಕರಣ
ಪಿರ್ಯಾದಿದಾರರ ತಂದೆಯಾದ ತಿ ಮ್ಮೇಗೌಡ ಕೆಎ 14 ವಿ 4816 ರ ಬೈಕ್ ಚಾಲಕ ರವರ ಬಾಬ್ತು ಬೈಕ್ ನಂ ಕೆಎ 14 ವಿ 4816 ರಲ್ಲಿ ಮಗಳ ಮನೆಗೆ ಹೋಗುತ್ತೇನೆ ಎಂದು ಮನೆಗೆ ಹೇಳಿ ಹೋದವರು ಅತೀಯಾದ ಮದ್ಯ ಪಾನ ಮಾಡಿದ್ದರಿಂದ ತೀರ್ಥಹಳ್ಳಿ ರಸ್ತೆಯನ್ನ ಭದ್ರಾವತಿ ರಸ್ತೆಯೆಂದು ತಿಳಿದು ಕೊಂಡು ಹೊಸಹಳ್ಳಿ ಹತ್ತಿರ ಬೈಕ್ ಸ್ಕಿಡ್ ಆಗಿ ಬಿದ್ದು ಪಿರ್ಯಾಧಿದಾರರ ತಂದೆಗೆ ತೀವ್ರತರವಾದ ಪೆಟ್ಟಾಗಿದ್ದು ಮೆಗ್ಗಾನ್ ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ
ಟಿಸಿಎಸ್ ಉದ್ಯೋಗಿ ಮನೆಯಲ್ಲಿ ಕಳುವು
ಬೆಂಗಳೂರು: ಸಾಫ್ಟ್ ವೇರ್ ಉದ್ಯೋಗಿಯೊಬ್ಬರ ಮನೆ ಬಾಗಿಲು ಬೀಗ ಒಡೆದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಟಿಸಿಎಸ್ ಕಂಪನಿ ಉದ್ಯೋಗಿ ಶೇಖ್ ಅಲ್ಲಾಭಕ್ಷ ಬಾಷಾ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.
80 ಗ್ರಾಂ ಚಿನ್ನಾಭರಣ, 221 ಯುಎಸ್ ಡಾಲರ್, 2 ಸಾವಿರ ನಗದು, ಐ ಪ್ಯಾಡ್ ಹಾಗೂ ಮೊಬೈಲ್ ಫೋನ್ ಹೊತ್ತೊಯ್ದಿದ್ದಾರೆ. ಪತ್ನಿ ಹಾಗೂ ಮಕ್ಕಳು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಅಜ್ಜಿ ತಾತನ ಮನೆಗೆ ತೆರಳಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ಬಾಷಾ ಕೆಲಸಕ್ಕೆ ಹೋಗಿದ್ದರು. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಮನೆಗೆ ಬಂದಾಗ ಕಳ್ಳರು ಮನೆ ಬಾಗಿಲು ಬೀಗ ಒಡೆದು ಒಳಗೆ ನುಗ್ಗಿ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಮರಳಿನ ದಡದ ಮಣ್ಣು ಕುಸಿದು ಒಬ್ಬರ ಸಾವು
ಚಳ್ಳಕೆರೆ ತಾಲ್ಲೂಕಿನ ರಾಣೇಕೆರೆ(ಗರಣಿಹಳ್ಳ) ಬಳಿ ಎಪಿ-04-ಕೆ-1842 ನೇ ಟ್ರ್ಯಾಕ್ಟರಿನಲ್ಲಿ ಮರಳು ತುಂಬಲು ಹೋದಾಗ ರಾಣೇಕೆರೆ(ಗರಣಿಹಳ್ಳ) ಬಳಿ ತೋಡಿರುವ ದೊಡ್ಡದಾದ ತಗ್ಗಿನಲ್ಲಿ ತೂರಿ ಮರಳನ್ನು ಎಳೆದುಕೊಳ್ಳುತ್ತಿರುವಾಗ ಏಕಾಏಕಿ ಮರಳಿನ ಮೇಲಿದ್ದ ಮರಳಿನ ಮಣ್ಣು ಕುಸಿದು ಗೋವಿಂದರಾಜು (22) ದೊಡ್ಡೇರಿ ಗೊಲ್ಲರಹಟ್ಟಿ ಗ್ರಾಮ ಚಳ್ಳಕೆರೆ ತಾಲ್ಲೂಕು ಇವರು ಮೃತ ಪಟ್ಟಿರುವ ಘಟನೆ ನಡೆದಿರುತ್ತದೆ.
ಸದರಿ ಘಟನೆಗೆ ಎಪಿ-04-ಕೆ-1842 ನೇ ಟ್ರ್ಯಾಕ್ಟರಿನ ಮಾಲಿಕರಾದ ತಿಪ್ಪಣ್ಣ ಇವರು ಮರಳನ್ನು ಟ್ರ್ಯಾಕ್ಟರಿಗೆ ತುಂಬಿಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ನಿರ್ಲಕ್ಷ್ಯತನ ತೋರಿರುವುದರಿಂದ ನಡೆದಿರುತ್ತದೆ ಎಂದು ಇದ್ದ ದೂರಿನ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.