ಕ್ರೈಂ ರೌಂಡಪ್: ಬಾಬುಲಾಲ್ ಮೇಲೆ ಎಫ್ಐಆರ್
ಬೆಂಗಳೂರು, ಏ.21: ಚುನಾವಣಾ ಸಂದರ್ಭದಲ್ಲಿ ಆಕ್ರಮ ಹಣ ಸಾಗಾಟ, ಶೇಖರಣೆ ಆರೋಪ ಹೊತ್ತಿರುವ ಚೋರ್ ಬಾಬುಲಾಲ್ ಸೇರಿದಂತೆ ನಾಲ್ವರು ಆರೋಪಿಗಳ ಮೇಲೆ ಗಾಂಧಿನಗರ ಠಾಣೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಚುನಾವಣೆ ವೇಳೆ ಬಾಬುಲಾಲ್ ಅವರ ಮನೆ ಹಾಗೂ ಕಚೇರಿಯಲ್ಲಿ ಸಿಕ್ಕ ಕೋಟ್ಯಂತರ ನಗದು, ವಿವಿಧ ಆಸ್ತಿಪತ್ರಗಳು ಸಿಕ್ಕಿತ್ತು. ಉಪ ವಿಭಾಗಾಧಿಕಾರಿ ಅನಿರುದ್ಧ ಶ್ರವಣ್ ಅವರು ನೀಡಿದ ದೂರಿನನ್ವಯ ಗಣೇಶ ಕಾಲೋನಿಯ ಲೇವಾದೇವಿಗಾರ ಬಾಬುಲಾಲ್, ಶ್ರೀಕಾಂತ್, ರಮೇಶ್, ವಿಶಾಲ್ ನಾಲ್ವರು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.
ನಾಲ್ವರ ಮೇಲೆ ಹಣದ ಆಮಿಷವೊಡ್ಡುವುದು, ಸರ್ಕಾರಿ ಆದೇಶ ಉಲ್ಲಂಘನೆ, ಕರ್ನಾಟಕ ಮಿನಿ ಲೆಂಡರ್ಸ್ 1961, ಕರ್ನಾಟಕ ಅಧಿಕ ಬಡ್ಡಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಬುಲಾಲ್ ಮನೆಯಲ್ಲಿ 8.77 ಕೋಟಿ ರು ನಗದು, ಹತ್ತಾರು ಕೋಟಿ ಮೌಲ್ಯದ ಉಳಿತಾಯ ಪತ್ರಗಳು, ಬ್ಯಾಂಕ್ ಗಳ ಪಾಸ್ ಬುಕ್ ಲಭ್ಯವಾಗಿತ್ತು. [ಬಾಬುಲಾಲ್ ಯಾರು ಇಲ್ಲಿ ಓದಿ]. ಉಡುಪಿ, ಕೋಲಾರ, ಬೆಂಗಳೂರು, ಮಂಡ್ಯ, ಹಿರಿಯೂರು ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ಸಂಗ್ರಹ ಮುಂದಿದೆ ಓದಿ...
ಮಲ್ಪೆ: ಜಾತಿ ನಿಂದನೆ ಮಾಡಿದ ಪ್ರಕರಣ
ಮಲ್ಪೆ: ಸಿ. ಜಯಕರ ತಂದೆ ಸಿ. ಗೋಪು ಕಂಬಳ ಕಟ್ಟ ಕೊಡವೂರು ಗ್ರಾಮರವರು ಪರಿಸಿಷ್ಠ ಜಾತಿಯವರಾಗಿದ್ದು ದಿನಾಂಕ 20.04.2014 ರಂದು ಅಪರಾಹ್ನ 2.ರಿಂದ 2.15 ಗಂಟೆ ನಡುವೆ ಕೊಡವೂರು ಗ್ರಾಮದ ಮದ್ವನಗರ ದಿಂದ ಉಡುಪಿಗೆ ಹೋಗಲು ತನ್ನ ಕೆ.ಎ.20ಸಿ.1679 ಆಟೋ ರಿಕ್ಷಾದಲ್ಲಿ ಚಲಾಯಿಸಿಕೊಂಡು ಮಧ್ವನಗರ ಹಂಪ್ ಹತ್ತಿರ ತಲುಪುವಾಗ ಆರೋಪಿತ ಸಂತೋಷ ಎಂಬವನು ತನ್ನ ಕೆ.ಎ 20 ಎಸ್ 7941 ನೇ ಮೋಟಾರು ಸೈಕಲನ್ನು ಹಿಂದಿನಿಂದ ಅತೀವೇಗದಿಂದ ಚಾಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಆಟೋ ರಿಕ್ಷಾಕ್ಕೆ ಅಡ್ಡ ಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಸಿ. ಜಯಕರರವರ ಎಡ ಕೆನ್ನಗೆ ಕೈಯಿಂದ ಹೊಡೆದು ದೂಡಿ, ಕೆಳಗೆ ಹಾಕಿ ಕಾಲಿನಿಂದ ತುಳಿದು ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಹಾಗೂ ಜಾತಿ ನಿಂದನೆ ಮಾಡಿರುವುದಾಗಿದೆ ಎಂಬುದಾಗಿ ಸಿ. ಜಯಕರರವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2014 ಕಲಂ: 279,341,323,504,506 ಐಪಿಸಿ ಮತ್ತು 3(1)(10) ಎಸ್.ಸಿ.ಎಸ್.ಟಿ ಕಾಯಿದೆ 1989 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಿರಿಯೂರು: ಬಸ್ಸಿಗೆ ಲಾರಿ ಡಿಕ್ಕಿ, ಮೂವರ ಸಾವು
ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ಇರುವ ಪೆಟ್ರೋಲ್ ಬಂಕ್ ಸಮೀಪದ ಎನ್.ಹೆಚ್-4 ರಸ್ತೆಯಲ್ಲಿ ನಂ.ಕೆಎ-28/ಎಫ್-1790ನೇ ಕೆಎಸ್ ಆರ್ ಟಿಸಿ ಬಸ್ಸಿನ ಮುಂದಿನ ಬಲಭಾಗದ ಟೈರ್ ಪಂಚರ್ ಆಗಿದ್ದರಿಂದ ಬಸ್ಸನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ರವರು ಟೈರ್ ಬದಲಿಸುತ್ತಿದ್ದರು.
ಬಸ್ಸಿನಿಂದ 8-10 ಜನರು ಕೆಳಗಿಳಿದು ಟೈರ್ ಬದಲಿಸುತ್ತಿರುವ ಸ್ಥಳದಲ್ಲಿ ನಿಂತಿರುವಾಗ ಬೆಂಗಳೂರು ಕಡೆಯಿಂದ ನಂ.ಕೆಎ-41/2826ನೇ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಕೆಎಸ್ ಆರ್ ಟಿಸಿ ಬಸ್ಸಿನ ಬಲಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಬಸ್ಸಿನ ಕಂಡಕ್ಟರ್ ಬಸವರಾಜ್ ಮತ್ತು ಸುರೇಶ್, ವೆಂಕಟೇಶ್ ಎಂಬುವರಿಗೆ ತೀವ್ರ ಸ್ವರೂಪದ ಪೆಟ್ಟುಗಳು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಹಾಗೂ ಇತರೆ ಏಳು ಜನರಿಗೂ ಸಹ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತವೆ.
ಅಪಘಾತ ಪಡಿಸಿದ ಲಾರಿಯ ಚಾಲಕ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿರುತ್ತದೆ. ಈ ಬಗ್ಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಕೌಟುಂಬಿಕ ಕಲಹ, ಹೆತ್ತ ಮಗು ಕೊಂದ ತಾಯಿ
ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೇ ತನ್ನ 11 ವರ್ಷದ ಮಗಳಿಗೆ ವಿಷ ಉಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಮಳವಳ್ಳಿ ತಾಲೂಕಿನ ಹಂಗರಪುರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ನಂಜುಂಡ ಎಂಬವರ ಪತ್ನಿ ರಂಜಿತಾ ಈ ಅಮಾನವೀಯ ಕೃತ್ಯಕ್ಕೆ ಯತ್ನಿಸಿದ್ದು, ವಿಷ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿರುವ ಆಕೆಯ ಪುತ್ರಿ ಅರ್ಪಿತಾ (11) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ತನ್ನವರನ್ನು ಬಿಟ್ಟು ಬೇರೆ ಮನೆ ಮಾಡಲು ನಂಜುಂಡ ನಿರಾಕರಿಸಿದ ಕಾರಣ ರಂಜಿತಾ ರವಿವಾರ ಬೆಳಗ್ಗೆ ಇಡ್ಲಿಯಲ್ಲಿ ಏಫ್ರಾನ್ ವಿಷವನ್ನು ಬೆರೆಸಿ ತನ್ನ ಮಗಳು ಅರ್ಪಿತಾಗೆ ನೀಡಿ, ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದ್ದಳು ಎಂದು ತಿಳಿದು ಬಂದಿದೆ.
ತಕ್ಷಣ ಕುಟುಂಬದವರು ವಿಷಾಹಾರ ಸೇವಿಸಿದ ಅರ್ಪಿತಾಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅರ್ಪಿತಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.
ಬಿಎಂಟಿಸಿ ದ್ವಿಚಕ್ರವಾಹನ ಅಪಘಾತ
ಬೆಂಗಳೂರು: ಶರವೇಗದಲ್ಲಿ ಸಾಗುತ್ತಿದ್ದ ಬಿಎಂಟಿಸಿ ಬಸ್ಸೊಂದು ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹೂವಿನ ವ್ಯಾಪಾರಿಯೊಬ್ಬ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮೃತಪಟ್ಟ ಹೂವಿನ ವ್ಯಾಪಾರಿಯನ್ನು ಇಲ್ಲಿನ ಹೆಗಡೆ ನಗರದ ನಿವಾಸಿ ಮುಬಾರಕ್ (21) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು -ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಹಿಂಬದಿಯ ಸವಾರನನ್ನು ಶಾರೂಖ್ (17) ಎಂದು ಪೊಲೀಸರು ತಿಳಿಸಿದ್ದಾರೆ.
ಕಸದ ವಿಚಾರವಾಗಿ ಜಗಳ, ಕಲ್ಲು ಎಸೆತ
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ವಕ್ಕಲೇರಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.
ವಕ್ಕಲೇರಿ ಗ್ರಾಮದ ವಾಸಿಯಾದ ಶ್ರೀಮತಿ ಯಶೋದಮ್ಮ ರವರು ತಮ್ಮ ಮನೆಯ ಬಳಿ ಇದ್ದಾಗ ಅದೇ ಗ್ರಾಮದ ವಾಸಿಗಳಾದ ಕಾಂತಮ್ಮ, ವರ ಮಗನಾದ ಸೋಮಶೇಖರ್ ಮತ್ತು ಶ್ರೀಧರ್ ರವರು ಯಶೋದಮ್ಮ ರವರ ಮನೆಯ ಬಳಿ ಬಂದು ಏಕೆ ರಸ್ತೆಯಲ್ಲಿ ಕಸದ ವಿಚಾರವಾಗಿ ಬೈಯುವುದು ಎಂತ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಯಶೋದಮ್ಮ ಮತ್ತು ಇವರ ಗಂಡನಾದ ಚಂದ್ರಪ್ಪ ರವರಿಗೆ ಹೊಡೆದು ಗಾಯಪಡಿಸಿರುತ್ತಾರೆ. ಹಾಗೂ ಕಲ್ಲುಗಳಿಂದ ಮನೆಯ ಬಾಗಿಲಿಗೆ ಹೊಡೆದು ಬಾಗಿಲನ್ನು ಜಖಂಗೊಳಿಸಿರುತ್ತಾರೆ. ಇದೇ ವಿಚಾರದಲ್ಲಿ ಮತ್ತೊಂದು ಪ್ರಕರಣ ಸಹ ದಾಖಲಾಗಿರುತ್ತದೆ.