ಬಿಜೆಪಿ ಅಂಗಳಕ್ಕೆ ಶ್ರೀರಾಮುಲು ಖಚಿತ: ಸೋಮ ರೆಡ್ಡಿ
ರಾಮುಲು ಪಕ್ಷಕ್ಕೆ ಮರಳುವ ಸಂಬಂಧ ಬಿಜೆಪಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಅದು ಯಶಸ್ವಿಯಾಗುವ ಲಕ್ಷಣಗಳಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾವು ರಾಮುಲು/ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಸೋಮ ರೆಡ್ಡಿ ಪ್ರಕಟಿಸಿದ್ದಾರೆ.
ಹಲವು ಕಾರಣಗಳಿಂದಾಗಿ ರಾಮುಲು ಮತ್ತು ನಮ್ಮ ಕೆಲ ಸ್ನೇಹಿತರು ಬಿಜೆಪಿ ತೊರೆದು ಬಿಎಸ್ಸಾರ್ ಕಾಂಗ್ರೆಸ್ ಸ್ಥಾಪಿಸಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪಕ್ಷಕ್ಕೆ ಮರಳಿದ ಮೇಲೆ ಬೇರೆಯವರನ್ನೂ ಮರಳಿ ಕರೆತರುವ ಪ್ರಯತ್ನ ನಡೆಯುತ್ತಿದೆ. ರಾಮುಲು ಅವರ ಜತೆಯೂ ಹಲವು ಸುತ್ತಿನ ಚರ್ಚೆ ನಡೆದಿರುವುದು ಗಮನಕ್ಕೆ ಬಂದಿದೆ. ಅವರು ಬಿಜೆಪಿಗೆ ಬಂದರೆ ಸ್ವಾಗತಿಸುವುದಾಗಿ ರೆಡ್ಡಿ ಹೇಳಿದ್ದಾರೆ.
ಹಾಗಾಗಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳಲು ಎಲ್ಲ ಸಾಧ್ಯತೆಗಳನ್ನು ಮುಕ್ತವಾಗಿಟ್ಟಿದ್ದ ಶ್ರೀರಾಮುಲು, ನಿನ್ನೆ ದಿಲ್ಲಿಯಲ್ಲಿ ಮತ್ತೆ ಬಿಜೆಪಿ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ನಾಯಕರೂ ಸಹ ರಾಮುಲು ಅವರನ್ನು ಪಕ್ಷದ ತೆಕ್ಕೆಗೆ ಸೆಳೆದುಕೊಳ್ಳಲು ಉತ್ಸುಕರಾಗಿದ್ದರು ಎಂಬುದು ಗಮನಾರ್ಹ. ಈ ಮಧ್ಯೆ, ರೆಡ್ಡಿ ಬ್ರದರ್ಸ್ ಪಾಲಿನ ಅಮ್ಮ ಸುಷ್ಮಾ ಸ್ವರಾಜ್ ಸಹ ರಾಮುಲು ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.