ನಿಲ್ಲದ ನಾಯಕರ ಹೇಳಿಕೆ ಸಮರ, ಹದ್ದು ಮೀರಿದೆ ಪ್ರಚಾರ
ಬೆಂಗಳೂರು, ಏ. 4 : ಚುನಾವಣೆ ಪ್ರಚಾರದ ಕಾವು ಹೆಚ್ಚಾಗುತ್ತಿದೆ. ಮತದಾರರ ಓಲೈಕೆ ಭರದಲ್ಲಿ ನಾಯಕರ ನಾಲಗೆ ಹದ್ದು ಮೀರಿದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬಳಿಕ, ಸಿಎಂ ಸಿದ್ದರಾಮಯ್ಯ, ಕೆಎಸ್ ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
ರೈತ ಆತ್ಮಹತ್ಯೆಯ ಬಗ್ಗೆ ಹೇಳಿಕೆ ನೀಡಿ ಸಿಎಂ ಸಿದ್ದರಾಮಯ್ಯ ಗುರುವಾರ ವಿವಾದವೆಬ್ಬಿಸಿದರು, ಕೆಎಸ್ ಈಶ್ವರಪ್ಪ ಸಿಎಂ ಮತ್ತು ಪರಮೇಶ್ವರ್ ಬಗ್ಗೆ ವಿವಾದಾತ್ಮಹ ಹೇಳಿಕೆ ನೀಡಿದ್ದಾರೆ. ರಾಯಚೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್, ಕಾಂಗ್ರೆಸ್ ಅಭ್ಯರ್ಥಿ "ಜೂ.ಉಮೇಶ್ ರೆಡ್ಡಿ" ಎಂದು ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಪ್ರಚಾರದಲ್ಲಿ ಕೇಳಿಬಂದ ಹೇಳಿಕೆಗಳು [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಈಶ್ವರಪ್ಪ ಹೇಳಿದ್ದೇನು?
"ರೈತನ ಆತ್ಮಹತ್ಯೆ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ಬದಲಿಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ರಾಜಕಾರಣಿ ದೇವೇಗೌಡರಿಗೆ ವಿಷ ಕುಡಿಯಲಿ ಎಂದ ಪರಮೇಶ್ವರ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಜಾತಿಗಳನ್ನು ಒಡೆದು ಕಾಂಗ್ರೆಸ್ನವರು ರಾಜಕಾರಣ ಮಾಡುತ್ತಿದೆ" ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಜ್ಯೂ.ಉಮೇಶ್ ರೆಡ್ಡಿ
ರಾಯಚೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ "ಒಬ್ಬ ಜ್ಯೂನಿಯರ್ ಉಮೇಶ್ ರೆಡ್ಡಿ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಅದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ದಾಖಲೆ ಇವೆ" ಎಂದು ಹೇಳಿದ್ದಾರೆ. ಈ ಹೇಳಿಕೆ ಕುರಿತು ಪೊಲೀಸ್ ಠಾಣೆಯಲ್ಲಿ ಶಿವನಗೌಡ ನಾಯಕ್ ವಿರುದ್ಧ ಬಿವಿ ನಾಯಕ ದೂರು ನೀಡಿದ್ದಾರೆ.
ಮೋದಿ ಹುಲಿ, ಸಿಂಹವಲ್ಲ
"ನರೇಂದ್ರ ಮೋದಿ ಹುಲಿಯೂ ಅಲ್ಲ, ಸಿಂಹವೂ ಅಲ್ಲ, ಆ ಸೋಗಿನಲ್ಲಿರುವ ಒಂದು ಕತ್ತೆ" ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿಬಿ ಜಯಚಂದ್ರ ಬಿಜೆಪಿ ಪ್ರಧಾನಿ ಅಭ್ಯರ್ಥಿ ಬಗ್ಗೆ ಗುಡುಗಿದ್ದಾರೆ.
ಸ್ವಯಂ ಘೋಷಿತ ರೈತ ನಾಯಕರು
"ಯಡಿಯೂರಪ್ಪ, ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಸ್ವಯಂ ಘೋಷಿತ ರೈತ ನಾಯಕರು, ಅವರು ರೈತರಿಗೆ ಯಾವ ಕೊಡುಗೆ ನೀಡಿಲ್ಲ" ಎಂದು ಸಿಎಂ ಸಿದ್ದರಾಮುಯ್ಯ ಆರೋಪಿಸಿದ್ದಾರೆ.
ಆಸ್ತಿ 300 ಕೋಟಿ ಆಗಿದ್ದು ಹೇಗೆ?
"2004ರಲ್ಲಿ 3.5 ಕೋಟಿ ಇದ್ದ ಕುಮಾರಸ್ವಾಮಿ ಆಸ್ತಿ 2013ರ ವೇಳೆಗೆ 300 ಕೋಟಿರೂಗೆ ಏರಿದ್ದಾದರೂ ಹೇಗೆ? ಎಂದು" ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಶ್ನಿಸಿದ್ದಾರೆ.
ಉತ್ತರ ಕುಮಾರನ ಪೌರುಷ
"ಬೆಂಗಳೂರು ದಕ್ಷಿಣದಲ್ಲಿ ಅನಂತಕುಮಾರ್ ಕೊಡುಗೆ ಏನೂ ಇಲ್ಲ. ಅವರ ಸಾಧನೆ ಉತ್ತರ ಕುಮಾರನ ಪೌರುಷ. ನಿಲೇಕಣಿ, ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಅಂಥವರು ರಾಜಕೀಯಕ್ಕೆ ಬರಬೇಕಿದೆ" ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅನಂತ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.