ಸರ್ಕಾರಿ ಕಚೇರಿಯಲ್ಲಿ ಧೂಮಪಾನ ಮಾಡುವಂತಿಲ್ಲ
ಬೆಂಗಳೂರು, ಮೇ 30 : ಸರ್ಕಾರಿ ಕಚೇರಿಗಳ ಆವರಣದಲ್ಲಿ ಇನ್ನು ಮುಂದೆ ಧೂಮಪಾನ ಮಾಡಿದರೆ ಕಠಿಣ ಶಿಕ್ಷೆ ಕಾದಿದೆ. ವಿಕಾಸ ಸೌಧ, ವಿಧಾನಸೌಧ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿ ಆವರಣದಲ್ಲಿ ಧೂಮಪಾನ ನಿಷೇಧಿಸಿ ಸರ್ಕಾರ ಎರಡು ದಿನದಲ್ಲಿ ಆದೇಶ ಹೊರಡಿಸಲಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಈಗಾಗಲೇ ಸರ್ಕಾರ ಆದೇಶ ನೀಡಿದೆ. ಸದ್ಯ ಸರ್ಕಾರಿ ಕಚೇರಿಯಗಳ ಆವರಣವನ್ನು ಧೂಮಪಾನ ಮುಕ್ತಗೊಳಿಸಲು ಸರ್ಕಾರ ಚಿಂತನೆ ನಡೆಸಿದ್ದು, ಎರಡು ದಿನದಲ್ಲಿ ಧೂಮಪಾನ ನಿಷೇಧ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ತಂಬಾಕು ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಂಬಾಕು ಮುಕ್ತ ಎಂದು ಘೋಷಿಸಿದ್ದು, ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಈ ನಿಯಮವನ್ನು ಜಾರಿಗೆ ತರಲಾಗುವುದ ಎಂದರು. [ಮೈಸೂರಲ್ಲಿ ಹೊರಗೆಲ್ಲೂ 'ದಮ್' ಹೊಡೆಯಂಗಿಲ್ಲ!]
ಕರ್ನಾಟಕದಲ್ಲಿ ಪ್ರತಿವರ್ಷ ತಂಬಾಕು ಬೆಳೆಯುವ ಪ್ರದೇಶಗಳು ಹೆಚ್ಚಾಗುತ್ತಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಶೇ 25ರಷ್ಟು ಬೆಳೆ ಪ್ರದೇಶ ವಿಸ್ತಾರಗೊಂಡಿದೆ. ಪ್ರತಿ ವರ್ಷ ಶೇ 5ರಿಂದ 10ರಷ್ಟು ಬೆಳೆ ಪ್ರದೇಶವನ್ನು ಕಡಿಮೆ ಮಾಡಬೇಕು ಎಂದು ತೋಟಗಾರಿಕಾ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ ಎಂದು ಯುಟಿ ಖಾದರ್ ತಿಳಿಸಿದರು.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧಿಸಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರ ವಿರುದ್ಧ ಕ್ರಮ ಕೈಗೊಂಡು ದಂಡ ವಸೂಲಿ ಮಾಡಲಾಗುತ್ತಿದೆ ಎಂದರು. 2013-14ನೇ ಸಾಲಿನಲ್ಲಿ 49 ಸಾವಿರ ಜನರ ವಿರುದ್ಧ ಕ್ರಮ ಕೈಗೊಂಡು 63 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ ಎಂದರು.