ಸರದೇಶಪಾಂಡೆ ವಿರಚಿತ 'ಅನಂತ ತಾನನಂತವಾಗಿ' ಬಿಡುಗಡೆ
ಬೆಂಗಳೂರು, ಮಾರ್ಚ್25: ಖ್ಯಾತ ಕಲಾವಿದ ಯಶವಂತ ಸರದೇಶಪಾಂಡೆ ವಿರಚಿತ ಸಂಸದ ಅನಂತ್ ಕುಮಾರ್ ಸಾಧನೆ ಹಾದಿಯ ಝಲಕ್ ಬಿಂಬಿಸುವ ಪುಸ್ತಕ ಇಂದು ಸಂಜೆ ಬಿಡುಗಡೆಯಾಗಲಿದೆ. 'ಅನಂತ ತಾನನಂತವಾಗಿ' ಹೆಸರಿನ ಈ ಕೃತಿಯನ್ನು ಇಂದು ಸಂಜೆ 4.10ಕ್ಕೆ ಜಯನಗರದಲ್ಲಿರುವ ಸಪ್ನ ಬುಕ್ ಹೌಸ್ ಮಳಿಗೆಯಲ್ಲಿ ನಾಡಿನ ಹಿರಿಯ ಚೇತನ ಪ್ರೊ. ಜಿ. ವೆಂಕಟಸುಬ್ಬಯ್ಯ ಮತ್ತು ಪ್ರೊ. ದೊಡ್ಡರಂಗೇಗೌಡ ಅವರು ಬಿಡುಗಡೆ ಮಾಡಲಿದ್ದಾರೆ.
ಹುಬ್ಬಳ್ಳಿ ಸಾಹಿತ್ಯ ಪ್ರಕಾಶನ ಸಂಸ್ಥೆಯು ಬೆಂಗಳೂರಿನ ಸಪ್ನ ಬುಕ್ ಹೌಸ್ ಸಂಸ್ಥೆಯ ಜಂಟಿ ಸಹಯೋಗದಲ್ಲಿ 'ಅನಂತ ತಾನನಂತವಾಗಿ' ಪುಸ್ತಕವನ್ನು ಹೊರತಂದಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಜಯನಗರದ ಸಪ್ನ ಬುಕ್ ಹೌಸ್ ಮಳಿಗೆಯಲ್ಲಿ ಇಂದು ಸಂಜೆ ನಡೆಯುವ 'ಅನಂತ ತಾನನಂತವಾಗಿ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಎಚ್ ಅನಂತ್ ಕುಮಾರ್, ತೇಜಸ್ವಿನಿ ಅನಂತ್ ಕುಮಾರ್ ಮತ್ತು ಕಲಾವಿದ, ಲೇಖಕ, ಅಂಕಣಕಾರ ಮತ್ತು ನಿರ್ದೇಶಕ ಯಶವಂತ ಸರದೇಶಪಾಂಡೆ ಅವರು ಭಾಗವಹಿಸಲಿದ್ದಾರೆ ಎಂದು ಹುಬ್ಬಳ್ಳಿ ಸಾಹಿತ್ಯ ಪ್ರಕಾಶನ ಸಂಸ್ಥೆಯ ಎಂ.ಎ. ಸುಬ್ರಮಣ್ಯ ಅವರು ತಿಳಿಸಿದ್ದಾರೆ.