ಮದ್ವೆ ತೆರಿಗೆ: ಸಿಎಂ ಸಿದ್ದು ಸರಕಾರಕ್ಕೆ ಮತ್ತೊಂದು ಹಿನ್ನಡೆ
ಬೆಂಗಳೂರು, ಮೇ31: ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಆಲೋಚನೆ ಮಾಡದೆ ಸರಕಾರಿ ಯೋಜನೆಯೊಂದನ್ನು ಜಾರಿಗೊಳಿಸುವ ಆತುರಗೇಡಿತನ ತೋರಿದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಹೈಕಮಾಂಡ್ ಕಿವಿ ಹಿಂಡಿದೆ.
ಒಂದು ಸಾವಿರ ಮಂದಿ ಪಾಲ್ಗೊಳ್ಳುವ ಮತ್ತು 5 ಲಕ್ಷ ರೂ. ಗಿಂತ ಹೆಚ್ಚಿಗೆ ಖರ್ಚಾಗುವ ಮದುವೆ ಸಮಾರಂಭಗಳ ಮೇಲೆ ಕೆಂಗಣ್ಣು ಬೀರಿದ್ದ ರಾಜ್ಯ ಸರ್ಕಾರವು ಅದ್ಧೂರಿ ಮದುವೆಗೆ ಕಡಿವಾಣ ಹಾಕಲು ಮುಂದಾಗಿತ್ತು. ಮಿತಿ ಮೀರುವ ಅದ್ದೂರಿತನದ ಮದುವೆ ನಡೆದರೆ ಅಂತಹವರ ಮೇಲೆ ತೆರಿಗೆ ವಿಧಿಸಲು ಸರಕಾರ ಎರಡು ದಿನಗಳ ಹಿಂದೆ ಆಲೋಚನೆ ನಡೆಸಿತ್ತು. ಮುಂದಿನ ಅಧಿವೇಶನದಲ್ಲಿ ಇದನ್ನು ಕಾಯ್ದೆ ರೂಪದಲ್ಲಿ ಜಾರಿಗೊಳಿಸಲು ಸರ್ಕಾರ ಮುಂದಾಗಿತ್ತು.
ಆದರೆ ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹೈಕಮಾಂಡ್ ಸಿದ್ದು ಸರಕಾರ ಆಲೋಚನೆಗೆ ತಣ್ಣೀರೆಚಿದೆ. ಜನರ ಆಕ್ರೋಶಕ್ಕೆ ಗುರಿಯಾಗುವ ಈ ಕಾನೂನನ್ನು ಜಾರಿಗೆ ತರುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಇದನ್ನು ಅನುಷ್ಠಾನ ಮಾಡುವಂತಿಲ್ಲ ಎಂದು ಎಐಸಿಸಿ ವರಿಷ್ಠರು ತಾಕೀತು ಮಾಡಿದ್ದಾರೆ. (ಮೂಢನಂಬಿಕೆ ಪ್ರತಿಬಂಧಕ ಮಸೂದೆ ಮಂಡನೆ ಶತಸಿದ್ಧ)
ಇದನ್ನು ಜಾರಿಗೆ ತರುವುದರಿಂದ ಪಕ್ಷ/ ಸರಕಾರಕ್ಕೆ ಅನುಕೂಲಕ್ಕಿಂತ ಹೆಚ್ಚಾಗಿ ಅಡ್ಡಪರಿಣಾಮ ಬೀರುವುದೇ ಹೆಚ್ಚು. ಇದರಿಂದ ಜನರ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಂತಹ ನಿಯಮಗಳಿಂದ 'ಕಾಂಗ್ರೆಸ್ ಸಂಪ್ರದಾಯವನ್ನು ವಿರೋಧಿಸುವ ಪಕ್ಷ' ಎಂಬ ಹಣೆಪಟ್ಟಿ ಸುಖಾಸುಮ್ಮನೆ ಅಂಟಿಕೊಳ್ಳುತ್ತದೆ. ಮೊದಲು ಯೋಜನೆಯನ್ನು ಕೈಬಿಡಬೇಕೆಂದು ವರಿಷ್ಠರು ಸೂಚಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. (ಮೂಢನಂಬಿಕೆ ಕರಡು ಕಾಂಗ್ರೆಸ್ ಪಕ್ಷದ್ದಲ್ಲ: ಪರಮೇಶ್ವರ್)
ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿಬಿ ಜಯಚಂದ್ರ ಅವರೊಂದಿಗೆ ವರಿಷ್ಠರು ದೂರವಾಣಿ ಮಾತುಕತೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಇನ್ನು ನಾಲ್ಕು ವರ್ಷ ಜನತೆ ನಿಮಗೆ ಆಡಳಿತ ನಡೆಸಲು ಅವಕಾಶ ನೀಡಿರುವುದರಿಂದ ಇಂತಹ ಜನವಿರೋಧಿ ನಿಯಮಗಳನ್ನು ಏಕೆ ಜಾರಿ ಮಾಡ್ತಿದ್ದೀರಿ ಎಂದು ಮಾತುಕತೆ ವೇಳೆ ವರಿಷ್ಠರು ಹರಿಹಾಯ್ದಿರುವುದಾಗಿ ತಿಳಿದುಬಂದಿದೆ. ಇನ್ನುಮುಂದೆ, ಯಾವುದೇ ಮಸೂದೆಯನ್ನು ಜಾರಿಗೆ ತರುವ ಮುನ್ನ ಸಮನ್ವಯ ಸಮಿತಿ ಸಭೆಯಲ್ಲಿ ಆಮೂಲಾಗ್ರವಾಗಿ ಚರ್ಚಿಸಿ/ಚಿಂತಿಸಿ ನಿರ್ಣಯ ಕೈಗೊಳ್ಳಬೇಕು ಎಂದೂ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. (ಮೂಢನಂಬಿಕೆ ವಿರೋಧಿ ಸಿಎಂ ಸಿದ್ದು ನಿನ್ನೆ ಮಾಡಿದ್ದೇನು?)