ಕಾವೇರಿಗೆ ಬಾಗಿನ ಅರ್ಪಿಸಿ ಧನ್ಯೋಸ್ಮಿ ಎಂದ ಸಿಎಂ
ಮಂಡ್ಯ, ಆ.7 : ರಾಜ್ಯದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿ ಆರಂಭವಾದರೂ ಬಹುಭಾಗದಲ್ಲಿ ಉತ್ತಮ ಮಳೆಯಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾದ್ದು, ಬರದ ಛಾಯೆ ಮರೆಯಾಗಿದೆ. ಮಂಗಾರು ನಮ್ಮ ಮೇಲೆ ಮುನಿಸಿಕೊಂಡಿದೆ ಎಂದು ಅಂದು ಕೊಂಡಿದ್ದ ಜನರು ಸುರಿದ ಮಳೆಯಿಂದಾಗಿ ಸಂತಸಗೊಂಡಿದ್ದಾರೆ.
ಕರ್ನಾಟಕದ ಪ್ರಮುಖ ಜಲಾಶಯವಾಗಿರುವ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ ಭರ್ತಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ತಿಯಾದ ಕಾವೇರಿ ಜಲಾಶಯಕ್ಕೆ ಬುಧವಾರ ಬಾಗಿನ ಅರ್ಪಿಸಿ, ವರುಣ ದೇವನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜಲಾಶಯ ತುಂಬಿರುವುದರಿಂದ ಕರ್ನಾಟಕ-ತಮಿಳುನಾಡಿನ ನಡುವೆ ಯಾವುದೇ ವಿವಾದ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. [ಸಿಎಂ ಬಾಗಿನ ಸಲ್ಲಿಸಿದ ಚಿತ್ರಗಳು]
ಕಳೆದ ಬಾರಿ ತಮಿಳುನಾಡಿಗೆ 68 ಟಿಎಂಸಿ ಹೆಚ್ಚಿನ ನೀರನ್ನು ನೀಡಿದ್ದೆವು. ಈ ಬಾರಿ ಮಳೆ ಕಡಿಮೆ ಆದ್ದರಿಂದ ಆತಂಕವಿತ್ತು. ಆದರೆ, ಇದೀಗ ಆತಂಕ ನಿವಾರಣೆಯಾಗಿದೆ. ಮಳೆ ಬಿದ್ದು ಜಲಾಶಯ ತುಂಬಿದರೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ನೀರಿಗಾಗಿ ವಿವಾದ ಉಂಟಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವರುಣ ದೇವನಿಗೆ ರಾಜ್ಯದ ರೈತರ ಪರ ಕೃತಜ್ಞತೆ ಸಲ್ಲಿಸುವುದಾಗಿ ಸಿಎಂ ತಿಳಿಸಿದರು.
ಕೆಆರ್ ಎಸ್ ಭರ್ತಿ
ಶ್ರೀರಂಪಟ್ಟಣದಲ್ಲಿರುವ ಕರ್ನಾಟಕದ ಪ್ರಮುಖ ಜಲಾಶಯವಾಗಿರುವ ಕೃಷ್ಣರಾಜಸಾಗರ (ಕೆಆರ್ ಎಸ್) ಭರ್ತಿಯಾಗಿದೆ.
ತಡವಾಗಿ ತುಂಬಿದ ಜಲಾಶಯ
ಕಳೆದ ವರ್ಷದ ಉತ್ತಮ ಮಳೆಯಾದ ಕಾರಣ 124 ಅಡಿ ಎತ್ತರದ ಕೆಆರ್ ಎಸ್ ಜಲಾಶಯ ಆಗಸ್ಟ್ ಮೊದಲ ವಾರದಲ್ಲಿ ಭರ್ತಿಯಾಗಿತ್ತು. ಈ ಬಾರಿ ಮಳೆ ವಿಳಂಬವಾದರೂ ಜಲಾಶಯ ಭರ್ತಿಯಾಗಿದೆ.
ಬಾಗಿನ ಅರ್ಪಿಸಿದ ನಾಡದೊರೆ
ಬನ್ನೂರಿನಿಂದ ರಸ್ತೆ ಮಾರ್ಗವಾಗಿ ಕೆಆರ್ ಎಸ್ ಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರಾವಣ ಮಾಸ, ಶುಕ್ಲ ಪಕ್ಷ ಅಭಿಜಿನ್ ಮುಹೂರ್ತದಲ್ಲಿ ಅರಿಶಿನ ಲೇಪಿತ ಮೊರದಲ್ಲಿ ಹಾಕಲಾಗಿದ್ದ ಬಾಗಿನವನ್ನು ಶ್ರದ್ಧಾಭಕ್ತಿಯಿಂದ ಕಾವೇರಿ ಮಡಿಲಿಗೆ ಸಮರ್ಪಿಸಿದರು.
ಪೂರ್ಣಕುಂಭ ಸ್ವಾಗತ
ಕೆಆರ್ ಎಸ್ ಆಗಮಿಸಿದ ನಾಡಿಬ ದೊರೆಗೆ ಪುರೋಹಿತರು ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಿದರು. ಸಿಎಂ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ವಸತಿ ಸಚಿವ ಅಂಬರೀಶ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಪಾಲ್ಗೊಂಡಿದ್ದರು.
ಹಿಂದಿನ ಸಂಪ್ರದಾಯ
ಕೆಆರ್ ಎಸ್ ಮೈದುಂಬಿದಾಗ ಬಾಗಿನ ಸಮರ್ಪಿಸುವ ಪದ್ಧತಿ ರಾಜ ಮಹಾರಾಜರ ಕಾಲದಿಂದಲೂ ಚಾಲ್ತಿಯಲ್ಲಿತ್ತು. ನಂತರ ನಿಂತು ಹೋಗಿತ್ತು. ಗುಂಡೂರಾವ್ ಅವರು ಮುಖ್ಯಮಂತ್ರಿಯಾದ ಬಳಿಕ ಮತ್ತೆ ಸಂಪ್ರದಾಯ ಆರಂಭವಾಗಿದೆ.
ತಮಿಳುನಾಡಿಗೆ ಹರಿದ ಕಾವೇರಿ
ಜೂ.1ರಿಂದ ಜು.31ರವರೆಗೆ ಎರಡು ತಿಂಗಳಲ್ಲಿ 40.357 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಬಿಳಿಗುಂಡ್ಲುವಿನಲ್ಲಿರುವ ಕೇಂದ್ರ ಜಲ ಕೇಂದ್ರ ಮಾಪನ ದಾಖಲೆ ಅನ್ವಯ 40.357 ಟಿಎಂಸಿ ನೀರು ಹರಿದಿದೆ.
ನೀರಾವರಿ ಯೋಜನೆ ಪೂರ್ಣ
ಕೆಆರ್ ಎಸ್ ಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಸಿಎಂ ತಮ್ಮ ಸರ್ಕಾರದ ಅವಧಿ ಮುಗಿಯುವ ಹೊತ್ತಿಗೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.