ಇಂದು ಟ್ವಿಟರ್, ಫೇಸ್ಬುಕ್ಗೆ ಸಿದ್ದರಾಮಯ್ಯ ಪ್ರವೇಶ
ಬೆಂಗಳೂರು, ಸೆ. 22 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತಾರೆ. ಸಿಎಂ ಫೇಸ್ಬುಕ್, ಟ್ವಿಟರ್, ವೆಬ್ಸೈಟ್ಗಳಿಗೆ ಸೋಮವಾರ ಸಂಜೆ ಚಾಲನೆ ದೊರೆಯಲಿದೆ. ಈ ಮೂಲಕ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಸಾಮಾಜಿಕ ತಾಣಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ.
ಸೋಮವಾರ ಸಂಜೆ 4.30ಕ್ಕೆ ವಿಧಾನಸೌಧದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಫೇಸ್ಬುಕ್, ಟ್ವಿಟರ್ ಮತ್ತು ವೆಬ್ಸೈಟ್ಅನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ವೆಬ್ಸೈಟ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ರೂಪುರೇಷೆ ಸಿದ್ಧಪಡಿಸಿದ್ದು, ನಿರ್ವಹಣೆಯನ್ನು ಮಾಡಲಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆದರೂ ಸಾಮಾಜಿಕ ಜಾಲ ತಾಣಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಕೆಲವು ತಿಂಗಳ ಹಿಂದೆ ಶೀಘ್ರದಲ್ಲೇ ಸಾಮಾಜಿಕ ಜಾಲ ತಾಣಕ್ಕೆ ಬರುವುದಾಗಿ ಸಿಎಂ ಹೇಳಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಾಮಾಜಿಕ ಜಾಲ ತಾಣಗಳ ಬಳಕೆ ಹೆಚ್ಚಾದ ಕಾರಣ, ಸಿಎಂ ಈಗ ಖಾತೆ ತೆರೆಯಲು ಮುಂದಾಗಿದ್ದಾರೆ. ['ಫೇಸ್ಬುಕ್, ಟ್ವಿಟ್ಟರ್ ಬಳಸಿ ಉಗ್ರರಿಂದ ಸಂಚು']
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿತ್ತು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಸಾಮಾಜಿಕ ತಾಣಗಳ ಮೂಲಕ ಪರೋಕ್ಷ ಯುದ್ಧ ನಡೆದಿತ್ತು. ಬಿಜೆಪಿಯ ನರೇಂದ್ರ ಮೋದಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸೇರಿದಂತೆ ಅನೇಕರು ಸಾಮಾಜಿಕ ತಾಣಗಳ ಮೂಲಕ ವಾಕ್ಸಮರ ನಡೆಸಿದ್ದರು. [ಆ ಸಂಜೆ ನಡೆದ ಘಟನೆ ಎಂದೂ ಮರೆಯಲಾರೆ!]
ಸದ್ಯ ಜನರನ್ನು ತಲುಪಲು ಸಾಮಾಜಿಕ ಜಾಲ ತಾಣ ಅನಿವಾರ್ಯ ಎಂದು ಮನಗಂಡಿರುವ ಸಿಎಂ ಅದಕ್ಕೆ ಪ್ರವೇಶ ಪಡೆಯುತ್ತಿದ್ದು, ಸಿಎಂ ಫೇಸ್ಬುಕ್, ಟ್ವೀಟರ್ ಮತ್ತು ವೆಬ್ಸೈಟ್ಗೆ ಚಾಲನೆ ದೊರೆಯಲಿದೆ. ಸಿಎಂ ವೆಬ್ ಸೈಟ್ನಲ್ಲಿ ಸಿದ್ದರಾಮಯ್ಯ ಅವರ ವೈಯಕ್ತಿಕ ಮಾಹಿತಿ, ಫೋಟೋಗಳು, ಅವರ ರಾಜಕೀಯದ ಹಾದಿ ಕುರಿತ ಸಮಗ್ರ ಮಾಹಿತಿ ಇರಲಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಸಂಪುಟದ ಸಚಿವರಾದ ಕೃಷ್ಣ ಭೈರೇಗೌಡ, ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್ ಸೇರಿ ಬೆರಳೆಣಿಕೆಯ ಸಚಿವರು ಮಾತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದಾರೆ, ಟ್ವೀಟರ್ನಲ್ಲಿ ಸಕ್ರಿಯರಾಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ಸಾಮಾಜಿಕ ಜಾಲ ತಾಣಗಳ ಪ್ರಯೋಜನ ಪಡೆಯುವಂತೆ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದರು.