ನಂದನ್ ಸೇರಿ 7 ಕುಬೇರರು ನೆಲಕಚ್ಚಿದ್ರು
ಬೆಂಗಳೂರು, ಮೇ.18: 16ನೇ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ದೇಶದಲ್ಲೇ ಅತ್ಯಂತ ಸಿರಿವಂತ ಅಭ್ಯರ್ಥಿಎಂಬ ಟ್ಯಾಗ್ ಧರಿಸಿಕೊಂಡಿದ್ದರು. ಆದರೆ, ನಂದನ್ ಸೇರಿದಂತೆ ರಾಜ್ಯದ ಎಂಟು ಕುಬೇರರದಲ್ಲಿ ಸಂಸದರಾಗಿದ್ದು ಮಾತ್ರ ಒಬ್ಬ ಅಭ್ಯರ್ಥಿ. ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಸೋದರ ಡಿಕೆ ಸುರೇಶ್ ಅವರು ಮಾತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯಭೇರಿ ಬಾರಿಸಿದರು.
ಕರ್ನಾಟಕದ ಒಟ್ಟಾರೆ ಕಾಂಗ್ರೆಸ್ ಅಭ್ಯರ್ಥಿಗಳ ಸರಾಸರಿ ಆಸ್ತಿ ಪ್ರಮಾಣ 294 ಕೋಟಿ ರು ಇದೆ ಎಂದು ಎಡಿಆರ್ ಸಂಸ್ಥೆ ವರದಿ ಮಾಡಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ 224 ಕೋಟಿ ರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ 73 ಕೋಟಿ, ಬಿಜೆಪಿ ಬೆಳಗಾವಿ ಸಂಸದ ಸುರೇಶ್ ಅಂಗಡಿ 37 ಕೋಟಿ ಪ್ರಮುಖರಾಗಿದ್ದಾರೆ. ವಾರ್ಷಿಕ ಗಳಿಕೆಯಲ್ಲೂ ನಂದನ್ ನಿಲೇಕಣಿ ಮುಂದಿದ್ದರು. ನಂದನ್ 168 ಕೋಟಿ ರು ಗಳಿಕೆ ಹೊಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎ . ಮಂಜು ವಾರ್ಷಿಕ 14 ಕೋಟಿ ರು, ಪ್ರಭಾಕರ್ ರೆಡ್ಡಿ 3.9 ಕೋಟಿ ರು ಗಳಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಕರ್ನಾಟಕದ ಚುನಾವಣಾ ಕಣದಲ್ಲಿ ಶೂನ್ಯ ಆಸ್ತಿ ಹೊಂದಿದ್ದೇವೆ ಎಂದು ಘೋಷಿಸಿರುವ ಅಭ್ಯರ್ಥಿಗಳು : ಬೀದರ್ ನ ಮೀರ್ಜಾ ಶಾಫಿ ಬೇಗ್(ಪಕ್ಷೇತರ), ಬಿಎಸ್ ಪಿ ರಾಮುಡು(ಬಳ್ಳಾರಿ), ಹಾವೇರಿಯ ಬಿ ಹೊನ್ನಪ್ಪ (ಸರ್ವ ಜನ ಪಕ್ಷ), ಉಡುಪಿ ಚಿಕ್ಕಮಗಳೂರಿನ ಜಿ ಮಂಜುನಾಥ್(ಪಕ್ಷೇತರ). ಚುನಾವಣೆ ಫಲಿತಾಂಶ ನಂತರ ನೆಲಕಚ್ಚಿದ ಕೋಟ್ಯಧಿಪತಿಗಳ ವಿವರ ಮುಂದಿದೆ.
ಅನಂತ್ ವಿರುದ್ಧ ನಂದನ್ ಶರಣು
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2,27,000 ಮತ ಪಡೆದ ಬಿಜೆಪಿಯ ಅನಂತಕುಮಾರ್ 6ನೇ ಬಾರಿಗೆ ಸಂಸದರಾಗಿದ್ದಾರೆ. 7,700 ಕೋಟಿ ರು ಒಡೆಯ ನಂದನ್ ನಿಲೇಕಣಿ ಆರಂಭಿಕ ಮುನ್ನಡೆ ಗಳಿಸಿದ್ದು ಬಿಟ್ಟರೆ ಕೊನೆಯಲ್ಲಿ ಗಳಿಸಿದ್ದು 1,66,642 ಮತಗಳು. ಕೊನೆ ತನಕ ತೀವ್ರ ಸ್ಪರ್ಧೆ ಒಡ್ಡಿದರೂ ಅನಂತ್ ಗೆಲುವು ಕಸಿದುಕೊಳ್ಳಲು ಆಗಲಿಲ್ಲ. ಮಧ್ಯಾಹ್ನ 12 ಗಂಟೆ ನಂತರ ನಂದನ್ ಮತ ಎಣಿಕೆ ಕೇಂದ್ರದಿಂದ ಹೊರ ಬಿದ್ದಿದ್ದು ವಿಶೇಷ. [ನಂದನ್ ಆಸ್ತಿ ವಿವರ]
ಆಮ್ ಆದ್ಮಿ ಪಕ್ಷದ ಬಾಲಕೃಷ್ಣನ್
ಇನ್ಫೋಸಿಸ್ ನ ಮಾಜಿ ಸಿಎಫ್ ಒ ವಿ.ಬಾಲಕೃಷ್ಣನ್ ಅವರು ಒಲ್ಲದ ಮನಸ್ಸಿನಿಂದಲೆ ಕಣಕ್ಕಿಳಿದರೂ ಭರ್ಜರಿ ಪ್ರಚಾರ ಮಾಡಿದ್ದರು. ಆದರೆ, ಫಲಿತಾಂಶದ ದಿನ ಪೈಪೋಟಿ ನಡೆದಿದ್ದು ಮಾತ್ರ ಬಿಜೆಪಿಯ ಪಿಸಿ ಮೋಹನ್ ಹಾಗೂ ಕಾಂಗ್ರೆಸ್ಸಿನ ರಿಜ್ವಾನ್ ಅರ್ಷದ್ ನಡುವೆ, ಅಂತಿಮವಾಗಿ ಗೆದ್ದಿದ್ದು ಪಿಸಿ ಮೋಹನ್. 190 ಕೋಟಿ ರು ಒಡೆಯ ಬಾಲಕೃಷ್ಣನ್ ಗೆ ಸಿಕ್ಕಿದ್ದು 39,869 ಮತಗಳು ಮಾತ್ರ. ಪಿಸಿ ಮೋಹನ್ 5,57,130 ಮತಗಳು, ರಿಜ್ವಾನ್ 4.19.630 ಮತಗಳನ್ನು ಪಡೆದುಕೊಂಡರು. [ಬಾಲಕೃಷ್ಣನ್ ಆಸ್ತಿ ವಿವರ]
ಜೆಡಿಎಸ್ ನ ಉದ್ಯಮಿ ಆರ್ ಪ್ರಭಾಕರ್ ರೆಡ್ಡಿ
ರಿಯಲ್ ಎಸ್ಟೇಟ್, ದೇಗುಲಗಳ ನಿರ್ಮಾಣಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಆರ್ ಪ್ರಭಾಕರ್ ರೆಡ್ಡಿಯನ್ನು ಬೆಂಗಳೂರು ಗ್ರಾಮಾಂತರ ಜನತೆ ಒಪ್ಪಿಕೊಳ್ಳಲೆ ಇಲ್ಲ. 220 ಕೋಟಿ ರು ಆಸ್ತಿ, 221ಕೋಟಿ ರು.ಗೂ ಅಧಿಕ ಸಾಲ ಹೊಂದಿರುವ ಪ್ರಭಾಕರ್ ರೆಡ್ಡಿ ಗಳಿಸಿದ್ದು 3,17,870 ಮತಗಳು. ವಿಜೇತ ಅಭ್ಯರ್ಥಿ ಮತ್ತೊಬ್ಬ ಭಾರಿ ಕುಳ ಡಿಕೆ ಸುರೇಶ್ ಪಡೆದಿದ್ದು 6,52,723 ಮತಗಳು, ಬಿಜೆಪಿಯ ಮುನಿರಾಜು 421243 ಮತಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿ ಹೊಂದಬೇಕಾಯಿತು.[ಪ್ರಭಾಕರ್ ರೆಡ್ಡಿ ವಿವರ]
ಕಳಪೆ ಸಾಧನೆ ತೋರಿದ ಮಾಜಿ ಸಿಎಂ ಎಚ್ಡಿಕೆ
ಎಂ. ವೀರಪ್ಪ ಮೊಯ್ಲಿ ವಿರೋಧಿ ಅಲೆ ಇದ್ದ ಕ್ಷೇತ್ರ ಎಂದೇ ಪರಿಗಣಿಸಿದ್ದ ಚಿಕ್ಕಬಳ್ಳಾಪುರದಲ್ಲಿ 4,24,800 ಮತಗಳಿಸಿ ಮೊಯ್ಲಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಬಚ್ಚೇಗೌಡ 4,15,280 ಗಳಿಸಿ ಒಳ್ಳೆ ಫೈಟ್ ನೀಡಿದರು. ಅದರೆ, ಭಾರಿ ನಿರೀಕ್ಷೆ ಟುಸ್ ಮಾಡಿದ ಎಚ್ ಡಿ ಕುಮಾರಸ್ವಾಮಿ 3,46,339 ಮತ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದರು. 149 ಕೋಟಿ ರು ಘೋಷಿತ ಆಸ್ತಿ ಹೊಂದಿರುವ ಕುಮಾರಸ್ವಾಮಿಗೆ ಇದು ಹೀನಾಯ ಸೋಲೆನಿಸಿದೆ.
ಇನ್ನುಳಿದ ಕುಬೇರರ ಪಾಡು
ಮೊದಲೇ ಹೇಳಿದಂತೆ ಬೆಂಗಳೂರು ಸೆಂಟ್ರಲ್ ನ ಜೆಡಿಸ್ ಅಭ್ಯರ್ಥಿಯಾಗಿದ್ದ ನಂದಿನಿ ಆಳ್ವ, ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ ಅಭ್ಯರ್ಥಿ ಆರ್ ವಿ ದೇಶಪಾಂಡೆ ಅವರ ಮಗ ಪ್ರಶಾಂತ್ ದೇಶಪಾಂಡೆ, ದಾವಣಗೆರೆಯ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ ಮೂವರ ಆಸ್ತಿ ನೂರರ ಗಡಿ ಹತ್ತಿರದಲ್ಲೇ ಇತ್ತು.