ವಾಟಾಳ್ ನಾಗರಾಜ್ಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ
ಬೆಂಗಳೂರು, ಸೆ. 27 : 2013ನೇ ಸಾಲಿನ 'ಕ್ರಾಂತಿವೀರ' ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯು ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಬಗ್ಗೆ ಹೋರಾಡುತ್ತಿರುವ ವಾಟಾಳ್ ನಾಗರಾಜ್ ಇವರಿಗೆ ಲಭಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿ ರಾಜ್ಯ ಸರಕಾರ ಶನಿವಾರ ಪ್ರಕಟಣೆ ಹೊರಡಿಸಿದೆ.
ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಆಯ್ಕೆ ಸಮಿತಿಯು ವಾಟಾಳ್ ಅವರ ಹೆಸರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. 2013ನೇ ಸಾಲಿಗೆ ಆಯ್ಕೆ ಮಾಡಲಾಗಿರುವ ಈ ಪ್ರಶಸ್ತಿಗಳನ್ನು ಪ್ರದಾನ ಮಾಡುವ ದಿನಾಂಕವನ್ನು ಸರಕಾರ ಘೋಷಿಸಿಲ್ಲ.
ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ : ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಯನ್ನು ಸಂಶೋಧನೆ, ವಿಮರ್ಶೆ, ಸಂಪಾದನೆ ಮುಂತಾದ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಗುಲ್ಬರ್ಗಾದ ಡಾ. ಎಂ.ಜಿ. ಬಿರಾದಾರ ಇವರಿಗೆ ಲಭಿಸಿದೆ. ಡಾ ಚೆನ್ನಣ್ಣ ವಾಲಿಕಾರ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಆಯ್ಕೆ ಸಮಿತಿಯು ಶ್ರೀಯುತರ ಹೆಸರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. [ಹಲವು ಪ್ರಥಮಗಳ ಕನ್ನಡ ಅಧ್ವರ್ಯು ಕುಂದಣಗಾರ]
ಜಕಣಾಚಾರಿ ಪ್ರಶಸ್ತಿ : 'ಅಮರಶಿಲ್ಪಿ' ಜಕಣಾಚಾರಿ ಪ್ರಶಸ್ತಿಯನ್ನು ಶಿಲ್ಪಕಲಾ ಕ್ಷೇತ್ರದಲ್ಲಿನ ಸಾಧನೆ, ಕಲಾಕೃತಿ ಪ್ರದರ್ಶನ ಕುರಿತ ಸಾಧನೆಗೆ ಯಾದಗಿರಿಯ ಬಸಣ್ಣ ಮೋನಪ್ಪ ಬಡಿಗೇರ (ಕಾಷ್ಟಶಿಲ್ಪಿ) ಇವರಿಗೆ ಲಭಿಸಿದೆ. ಕನಕಾಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿಪಾತ್ರರನ್ನು ಆಯ್ಕೆ ಮಾಡಲಾಗಿದೆ.
ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ : ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿರುವ ಮಂಡ್ಯದ ಎಂ. ಸರಸ್ವತಿಗೌಡ ಇವರಿಗೆ ಲಭಿಸಿದೆ. ಡಾ: ಕೆ.ಆರ್. ಸಂಧ್ಯಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಈ ಪ್ರಶಸ್ತಿಗೆ ಸರಸ್ವತಿ ಗೌಡ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.