ಬಿಜೆಪಿಗೆ ಮರಳುವೆ: ಬೇಳೂರು ಗೋಪಾಲಕೃಷ್ಣ
ಯಡಿಯೂರಪ್ಪ ಸಚಿವ ಸ್ಥಾನ ಕಿತ್ಕೊಂಡಿದ್ದರು ಎಂದು ಗೋಳಾಡಿದ್ದ ಬೇಳೂರು ಇದೀಗ ರಾಷ್ಟ್ರದ ಹಿತದೃಷ್ಟಿಯಿಂದ ಬಿಜೆಪಿಗೆ ಮರಳಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಗಮನಾರ್ಹವೆಂದರೆ ಯಾವುದೇ ಫಲಾಪೇಕ್ಷಯಿಲ್ಲದೆ ಅಂದರೆ ಲೋಕಸಭಾ ಚುನಾವಣೆಗೆ ಟಿಕಟ್ ಬೇಕೆಂದು ವರಾತ ತೆಗೆಯದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುವ ಸಲುವಾಗಿ ಬೇಳೂರು ಪಕ್ಷಕ್ಕೆ ಮರುಸೇರ್ಪಡೆಯಾಗುತ್ತಿದ್ದಾರೆ. ( ಬೇಳೂರನ್ನು ಸಿಗಂದೂರು ಚೌಡೇಶ್ವರಿಯೇ ಕಾಪಾಡಬೇಕು )
ಬಿಜೆಪಿಯ ನರೇಂದ್ರ ಮೋದಿ ಅವರು ಪ್ರಧಾನಿ ಯಾಗುವುದು ರಾಷ್ಟ್ರದ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ ಎನ್ನುವ ಮೂಲಕ ತಾವು ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಜೆಡಿಎಸ್ ಪಕ್ಷಕ್ಕೆ ಫೆ. 15ರಂದು ರಾಜೀನಾಮೆ ಸಲ್ಲಿಸುವೆ. ಎರಡು ದಿನಗಳ ಬಳಿಕ ಮುಂದಿನ ಸೋಮವಾರ ಬಿಜೆಪಿಗೆ ಮರಳುವೆ ಎಂದು ತಿಳಿಸಿದ್ದಾರೆ.
ನಾನು ಜ್ಯೋತಿಷ್ಯಶಾಸ್ತ್ರ, ಕಾಲ ಎಲ್ಲವನ್ನೂ ನಂಬಿದವನು. ನನಗೆ ದೇವರ ಮೇಲೆ ನಂಬಿಕೆಯಿದೆ; ಭಯ, ಭಕ್ತಿ, ಶ್ರದ್ಧೆಯಿದೆ. ಶಾಸ್ತ್ರ ಕೇಳಿ, ಸಮಯ ನೋಡಿಯೇ ರಾಷ್ಟ್ರೀಯ ಪಕ್ಷ ಸೇರುವೆ. ಯಾರು ಏನು ಬೆಕಾದರೂ ಹೇಳಲಿ. ಫೆ. 17ರಂದು ರಾಷ್ಟ್ರೀಯ ಪಕ್ಷವನ್ನು ಸೇರುವುದು ನಿಶ್ಚಿತ ಎಂದು ಬಿಜೆಪಿಯ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಘೋಷಿಸಿದ್ದಾರೆ.