ಇ.ಶ್ರೀಧರನ್ ನೇತೃತ್ವದಲ್ಲಿ ರೈಲ್ವೆ ಸಮಿತಿ: ಡಿವಿಎಸ್
ಬೆಂಗಳೂರು, ಜೂನ್.2: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದ ಮೆಟ್ರೋ ಮನುಷ್ಯ ಇ.ಶ್ರೀಧರನ್ ಅವರು ಮೋದಿ ಸರ್ಕಾರದ ಸಮಿತಿಯೊಂದರ ಸದಸ್ಯರಾಗಿ ನೇಮಕವಾಗುವ ಸಾಧ್ಯತೆಯಿದೆ.
ರೈಲು ಯೋಜನೆಗಳು ಹಾಗೂ ರೈಲ್ವೆ ಇಲಾಖೆಯಲ್ಲಿನ ಆವಿಷ್ಕಾರಗಳಿಗಾಗಿ ದೆಹಲಿ ಮೆಟ್ರೋ, ಕೊಂಕಣ ರೈಲ್ವೆ ಯೋಜನೆಗಳ ರೂವಾರಿ ಇ. ಶ್ರೀಧರನ್ ಅಂತಹವರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.[ಹೈಸ್ಪೀಡ್ ರೈಲು ಮೋದಿ ಅವರ ಕನಸು: ಡಿವಿಎಸ್]
ರೈಲ್ವೆ ಇಲಾಖೆಯಲ್ಲಿನ ಆವಿಷ್ಕಾರಗಳಿಗಾಗಿ ತಜ್ಞರ ಸಮಿತಿ ನೇಮಕ ಪ್ರಕ್ರಿಯೆ ಇನ್ನು ಪ್ರಾಥಮಿಕ ಹಂತದಲ್ಲಿದೆ. ಸಮಿತಿ ಕುರಿತಂತೆ ಶ್ರೀಧರನ್ ಜತೆಗೆ ಇನ್ನು ಮಾತುಕತೆ ನಡೆಸಿಲ್ಲ. ಪ್ರಧಾನಿಯವರ ಒಪ್ಪಿಗೆ ಬಳಿಕ ಈ ಸಮಿತಿ ನೇಮಕವಾಗಲಿದೆ ಎಂದು ತಿಳಿಸಿದರು.
ಭಾರತದ ಪ್ರಖ್ಯಾತ ರೈಲ್ವೆ ಯೋಜನೆಗಳ ರೂವಾರಿಯಾಗಿರುವ 81 ವರ್ಷ ವಯಸ್ಸಿನ ಇ. ಶ್ರೀಧರನ್ ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದಾರೆ. 17 ವರ್ಷಗಳ ಕಾಲ ದೆಹಲಿ ಮೆಟ್ರೋದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿವೃತ್ತರಾಗಿರುವ ಇ. ಶ್ರೀಧರನ್ ಅವರು ಮೋದಿ ಕ್ಯಾಬಿನೆಟ್ನಲ್ಲಿ ಸೇರಲಿದ್ದಾರೆ ಎನ್ನುವ ವದಂತಿ ಈ ಹಿಂದೆ ಹರಡಿತ್ತು.
ಗುಜರಾತಿನ ವಡೋದರಾ ಜಿಲ್ಲೆಯಲ್ಲಿ ಮೆಟ್ರೋ ಟ್ರೈನುಗಳ ಉತ್ಪಾದನಾ ಘಟಕವನ್ನು ಕೇವಲ 18 ತಿಂಗಳಲ್ಲಿ ಸ್ಥಾಪಿಸಲಾಯಿತು. ಅದು ನಿಜಕ್ಕೂ ದಾಖಲೆಯೇ ಸರಿ ಎಂದು ಮೋದಿಯವರನ್ನುಈ ಶ್ರೀಧರನ್ ಮಾರ್ಚ್ ತಿಂಗಳಿನಲ್ಲಿ ಹೊಗಳಿದ್ದರು.[ಮೋದಿಗೆ ನಮೋ ಎಂದ 'ಮೆಟ್ರೋ ಪುರುಷ' ಶ್ರೀಧರನ್]