ಸರ್ಕಾರಕ್ಕೆ ಒಂದು ವರ್ಷ, ಪ್ರತಿಪಕ್ಷಗಳು ಹೇಳಿದ್ದೇನು?
ಬೆಂಗಳೂರು, ಮೇ 13 : ಸಿಎಂ ಸಿದ್ದರಾಮಯ್ಯ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದೆ. ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಏನು ನಡೆದಿವೆ ಎಂದು ಹೇಳಿ ಎಂದು ಪ್ರತಿಪಕ್ಷಗಳು ಕುಟುಕಿವೆ.
ಸರ್ಕಾರ ಒಂದುವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಯಾವುದೇ ಸಂಭ್ರಮಾಚರಣೆ ಮಾಡುವುದಿಲ್ಲ. ಮೇ 19ರಂದು ರಾಜ್ಯ ಸರ್ಕಾರದ ಸಾಧನಾ ಹೊತ್ತಿಗೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. [ಸಿದ್ದರಾಮಯ್ಯ ಸರ್ಕಾರದ 10 ವಿವಾದಗಳು]
ಪ್ರತಿಪಕ್ಷ ಜೆಡಿಎಸ್ ಮತ್ತು ಬಿಜೆಪಿ ಸಿದ್ದರಾಮಯ್ಯ ಸರ್ಕಾರ ಜನರಿಗೆ ಅಕ್ಕಿ ಕೊಟ್ಟಿದ್ದು ಮಾತ್ರ ಸಾಧನೆ. ರಾಜ್ಯದ ರಸ್ತೆಗಳ ಗುಂಡಿಯನ್ನು ಮುಚ್ಚಿಲ್ಲ, ಆಡಳಿತ ಯಂತ್ರ ಚುರುಕಾಗಿಲ್ಲ. ಒಂದು ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ಸಿಎಂ ಮಾತ್ರ ಜನರಿಗೆ ಉತ್ತರಿಸಬೇಕು ಎಂದು ಪ್ರತಿಪಕ್ಷಗಳು ಟೀಕಿಸಿವೆ. ವಿಪಕ್ಷ ನಾಯಕರು ಏನು ಹೇಳಿದರು ಎಂದು ನೋಡಿ
ಅಹಿಂದ ವರ್ಗದ ಅಭಿವೃದ್ಧಿಯನ್ನು ಮಾಡಿಲ್ಲ
ಸಿಎಂ ಸಿದ್ದರಾಮಯ್ಯ ಸರ್ಕಾರ ತಮಗೆ ಮತ ನೀಡಿದ ಅಹಿಂದ ವರ್ಗದ ಅಭಿವೃದ್ಧಿಯನ್ನು ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದರೂ ಇಡೀ ರಾಜ್ಯದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆಯೇ ತಯಾರಾಗಿಲ್ಲ ಎಂದು ದೂರಿದ್ದಾರೆ. ಹೊಸ ಸರ್ಕಾರ ಬಂದಾಗ ಅಭಿವೃದ್ಧಿಯ ನಿರೀಕ್ಷೆ ಸಹಜ. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದೊಂದು ವರ್ಷದಲ್ಲಿ ಯಾವುದೇ ಹೇಳಿಕೊಳ್ಳುವಂತಹ ಜನಪರ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದರು.
ಉತ್ತಮ ಆಡಳಿತ ಮರೀಚಿಕೆಯಾಗಿದೆ
ಕಾಂಗ್ರೆಸ್ ಸರ್ಕಾರದ ಒಂದು ವರ್ಷದಲ್ಲಿ ಉತ್ತಮ ಆಡಳಿತ ಎಂಬುದು ಮರೀಚಿಕೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ದೂರಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಮೊದಲು ಜನತೆಗೆ ವಿವಿಧ 'ಭಾಗ್ಯ'ಗಳನ್ನು ನೀಡಿತು. ಅವುಗಳು ಇಂದು ರಾಜ್ಯದ ಜನತೆ ಪಾಲಿಗೆ 'ದೌರ್ಭಾಗ್ಯ' ಗಳಾಗಿವೆ ಎಂದು ಶೆಟ್ಟರ್ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕೊಟ್ಟ ಭರವಸೆಗಳು ನೂರಾರು. ಆದರೆ, ಅವುಗಳನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ.
ಅಕ್ಕಿ ಕೊಟ್ಟಿದ್ದೇ ಸಾಧನೆ ಎಂದು ಹೇಳಬಹುದು
ಜನರಿಗೆ ಅಕ್ಕಿ ಕೊಟ್ಟಿದ್ದು ಮಾತ್ರ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಎಂದು ಹೇಳಬಹದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸೋತಿದೆ. ರಸ್ತೆಗಳ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ, ಆಡಳಿತ ಯಂತ್ರವೂ ನಿಧಾನಗತಿಯಲ್ಲಿ ಸಾಗಿದೆ ಎಂದು ಜೋಶಿ ಸರ್ಕಾರದ ಒಂದು ವರ್ಷವನ್ನು ವಿಶ್ಲೇಷಿಸಿದ್ದಾರೆ.
ಸಿದ್ದರಾಮಯ್ಯ ದುರಂತ ನಾಯಕ
ಸಿದ್ದರಾಮಯ್ಯ ಅವರು ದುರಂತ ನಾಯಕ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಡಿವಿ ಸದಾನಂದ ಗೌಡ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಒಂದು ವರ್ಷದ ಮುಖ್ಯಮಂತ್ರಿಯ ಅವಧಿ ತೀರಾ ನಿರಾಶಾದಾಯಕ ಮತ್ತು ರಾಜ್ಯದ ಆಡಳಿತವನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿದೆ ಎಂದು ಸದಾನಂದ ಗೌಡರು ವಿಶ್ಲೇಷಿಸಿದ್ದಾರೆ. 7 ಬಜೆಟ್ ಮಂಡನೆ ಮಾಡಿ, ಪ್ರತಿಪಕ್ಷದ ನಾಯಕರಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಯಾವುದೇ ಛಾಯೆ ಮುಖ್ಯಮಂತ್ರಿಯ ಜವಾಬ್ದಾರಿ ನಿರ್ವಹಣೆಯಲ್ಲಿ ಕಂಡಿಲ್ಲ ಎಂದು ಗೌಡರು ತಿಳಿಸಿದ್ದಾರೆ.