ಬೆಂಗಳೂರಿನ ಹೊಸ ಆಕರ್ಷಣೆ ಈ ಗಾಂಧಿ ಪ್ರತಿಮೆ
ಬೆಂಗಳೂರು, ಅ.2 : ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ನಿರ್ಮಿಸಿರುವ ಧ್ಯಾನಾಸಕ್ತ ಮಹಾತ್ಮ ಗಾಂಧಿ ಪ್ರತಿಮೆಯ ಲೋಕಾರ್ಪಣೆ ಗುರುವಾರ ಬೆಳಗ್ಗೆ ನೆರವೇರಿತು. ಗಾಂಧಿ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಮೆ ಲೋಕಾರ್ಪಣೆ ಮಾಡಿದರು.
11 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಗಾಂಧಿ ಪ್ರತಿಮೆ ಉದ್ಘಾಟನಾ ಸಮಾರಂಭಕ್ಕೆ ನೂರಾರು ಸಾರ್ವಜನಿಕರು ಸಾಕ್ಷಿಯಾದರು. ಸಮಾರಂಭದಲ್ಲಿ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸ್ಪೀಕರ್ ಕಾಗೋಡು ತಿಮ್ಮಪ್ಪ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಉಪ ಸಭಾಪತಿ ಪುಟ್ಟಣ್ಣ ಪಾಲ್ಗೊಂಡಿದ್ದರು.[ವಿಧಾನಸೌಧ ಬಳಿ ಗಾಂಧಿ ಪ್ರತಿಮೆ ಗುರುವಾರ ಲೋಕಾರ್ಪಣೆ]
ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ವಿಧಾನಸೌಧದ ಸುತ್ತ ಮುತ್ತ ಎಲ್ಲ ನಾಯಕರ ಪುತ್ಥಳಿಗಳಿವೆ. ಮಹಾತ್ಮ ಗಾಂಧೀಜಿ ಪ್ರತಿಮೆ ಸ್ಥಾಪನೆಗೆ ಎಲ್ಲರಿಂದ ಒತ್ತಾಯ ಕೇಳಿಬಂದಿತ್ತು. ಈಗ ಅದು ಈಡೇರಿದೆ ಎಂದು ಹೇಳಿದರು.
ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ನಿರ್ಮಿಸಿರುವ ಧ್ಯಾನಾಸಕ್ತ ಮಹಾತ್ಮ ಗಾಂಧೀಜಿ ಪ್ರತಿಮೆ ಬೆಂಗಳೂರು ಮತ್ತು ಶಕ್ತಿಕೇಂದ್ರದ ವಿಶೇಷ ಆಕರ್ಷಣೆಯಾಗುವುದರಲ್ಲಿ ಅನುಮಾನವಿಲ್ಲ.