ಜಂಬೂ ಸವಾರಿಯ ಆನೆ 'ಕಾಂತಿ' ಇನ್ನು ನೆನಪು ಮಾತ್ರ
ಚಾಮರಾಜನಗರ, ಸೆ. 25 : ಮೈಸೂರು ದಸರಾದಲ್ಲಿ ಪಾಲ್ಗೊಂಡು ಗಂಭೀರವಾದ ಹೆಜ್ಜೆಗಳನ್ನಿಡುತ್ತಿದ್ದ ಕಾಂತಿ ಆನೆ ಮೃತಪಟ್ಟಿದೆ. ದಸರಾದಲ್ಲಿ ಕುಮ್ಕಿ ಆನೆಯಾಗಿ 1975ರಿಂದ ಭಾಗವಹಿಸುತ್ತಿದ್ದ ಕಾಂತಿ, ಕಳೆದ ಎರಡು ವರ್ಷಗಳಿಂದ ಪಾಲ್ಗೊಂಡಿರಲಿಲ್ಲ. ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಂತಿಯ ಮೃತದೇಹ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
75 ವರ್ಷದ ಕಾಂತಿ ಬಂಡೀಪುರ ಅಭಯಾರಣ್ಯದ ರಾಂಪುರ ಶಿಬಿರದಲ್ಲಿತ್ತು. 20 ದಿನಗಳ ಹಿಂದೆ ಕಾಡಿಗೆ ತೆರಳಿದ್ದ ಅದು ಶಿಬಿರಕ್ಕೆ ವಾಪಸ್ ಆಗಿರಲಿಲ್ಲ. ಆನೆಗಳು ವಾರಗಟ್ಟಲೇ ಕಾಡಿನಲ್ಲಿರುವುದು ಸಾಮಾನ್ಯವಾದ್ದರಿಂದ ಶಿಬಿರದ ಸಿಬ್ಬಂದಿಯೂ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. [2014ರ ಮೈಸೂರು ದಸರಾಕ್ಕೆ ಚಾಲನೆ]
ಮಂಗಳವಾರ ರಾಂಪುರ ಟೈಗರ್ ರೋಡ್ ಪ್ರದೇಶದ ಬಳಿ ಆನೆಯ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಕೊಳೆತು ಹೋಗಿದ್ದರಿಂದ ಅದನ್ನು ಗುರುತಿಸಲು ಜನರಿಗೆ ಸಾಧ್ಯವಾಗಿರಲಿಲ್ಲ, ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮತ್ತು ರಾಂಪುರ ಶಿಬಿರದ ಅಧಿಕಾರಿಗಳು ಮೃತಪಟ್ಟಿರುವ ಆನೆ ಕಾಂತಿ ಎಂದು ದೃಡಪಡಿಸಿದ್ದಾರೆ. [ಮೈಸೂರು ದಸರಾ ಚಿತ್ರಗಳು]
1975ರಿಂದ ದಸರಾದಲ್ಲಿ ಪಾಲ್ಗೊಂಡಿದ್ದ ಕಾಂತಿ 2012ರಲ್ಲಿ ಕೊನೆಯ ಬಾರಿ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿತ್ತು. ಕೆ.ಗುಡಿ ಶಿಬಿರದಲ್ಲಿದ್ದ ಕಾಂತಿಯನ್ನು ನಂತರ ರಾಂಪುರ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. 2008ರಲ್ಲಿ ಕಾಡಾನೆಗಳೊಂದಿಗಿನ ಘರ್ಷಣೆಯಲ್ಲಿ ಕಾಂತಿ ಗಂಭೀರವಾಗಿ ಗಾಯಗೊಂಡಿತ್ತು. ಆದ್ದರಿಂದ 2008 ಮತ್ತು 2009ರ ಜಂಬೂ ಸವಾರಿಯಲ್ಲಿ ಭಾಗವಹಿಸಿರಲಿಲ್ಲ. [ಜಂಬೂ ಸವಾರಿ ಆನೆಗಳ ಬಯೋಡೇಟಾ]
ಕಾಕನಕೋಟೆಯಲ್ಲಿ ಸೆರೆ ಸಿಕ್ಕಿತ್ತು : 1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಕಾಂತಿ ಆನೆಯನ್ನು ಸೆರೆ ಹಿಡಿಯಲಾಗಿತ್ತು. ನಂತರ ಅದು ಕೆ.ಗುಡಿ ಶಿಬಿರದಲ್ಲಿತ್ತು. 1975ರಲ್ಲಿ ದಸರಾದಲ್ಲಿ ಮೊದಲಬಾರಿ ಪಾಲ್ಗೊಂಡಿದ್ದ ಆನೆ ನಂತರ, 2008 ಮತ್ತು 2009ರಲ್ಲಿ ದಸರಾದಿಂದ ದೂರ ಉಳಿದಿತ್ತು. ಉಳಿದಂತೆ ಎಲ್ಲಾ ದಸರಾದಲ್ಲೂ ಕಾಂತಿ ಪಾಲ್ಗೊಂಡಿತ್ತು.
ರಾಂಪುರ ಶಿಬಿರದ ಸಿಬ್ಬಂದಿ ಕಾಂತಿ ಸಾವಿಗೆ ಕಂಬನಿ ಮಿಡಿದಿದ್ದಾರೆ. ಕಾಂತಿ ಮೃತದೇಹದ ಶವ ಪರೀಕ್ಷೆಯನ್ನು ಮುಗಿಸಿ ಕಾಡಿನಲ್ಲಿಯೇ ಅದರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಕಾಂತಿ ಆನೆ ಇನ್ನು ನೆನಪು ಮಾತ್ರ.