ಬೆನ್ನಿ ಹಿನ್ ಬೆಂಗಳೂರು ಭೇಟಿ ವಿರುದ್ಧದ ಅರ್ಜಿ ವಜಾ
ಅಷ್ಟೇ ಅಲ್ಲ. ಅರ್ಜಿ ಸಲ್ಲಿಸಿರುವುದರ ವಿರುದ್ಧ ಹೈಕೋರ್ಟ್ ಕೆಂಡ ಕಾರಿದ್ದು, ವಿಷಾದವನ್ನೂ ವ್ಯಕ್ತಪಡಿಸಿದೆ. 'ಅಲ್ರೀ, ಭಗವದ್ಗೀತೆಯ ಪ್ರಚಾರಕ್ಕಾಗಿ ನಡೆಯುವ ಸಭೆಗಳಲ್ಲಿ ಸಾವಿರಾರು ಜನ ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುತ್ತಾರೆ. ಅದನ್ನು ಪ್ರಶ್ನಿಸದವರು ಕ್ರೈಸ್ತ ಧರ್ಮದ ಬೆನ್ ಹಿನ್ ನಡೆಸುವ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮ ಪ್ರಶ್ನಿಸಿ ನ್ಯಾಯಾಲಯ ಮೆಟ್ಟಿಲೇರುವುದು ಸರಿಯೇ? ಎಂದು ಅರ್ಜಿದಾರರನ್ನು ಹೈಕೋರ್ಟ್ ಪ್ರಶ್ನಿಸಿದೆ.
ಅಷ್ಟೇ ಅಲ್ಲ. ಶ್ರೀರಾಮ ಸೇನೆ ಸಂಘಟನೆ ಯಾವುದೇ ಕಾರಣಕ್ಕೂ ಈ ಸಂಬಂಧ ಪ್ರತಿಭಟನೆಗೆ ಮುಂದಾಗಬಾರದು. Toufik Benedictus Benny Hinn ಪ್ರಾರ್ಥನಾ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಭದ್ರತೆ ಒದಗಿಸಿ, ಶಾಂತಿ ಕಾಪಾಡುವಂತೆಯೂ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ( ಬೆಂಗಳೂರಿನಲ್ಲಿ ಮತ್ತೆ ಬೆನ್ನಿ ಹಿನ್ ಕಣ್ ಕಟ್ ವಿದ್ಯೆ! )
ಅಷ್ಟೇ ಅಲ್ಲ. ಭಾರತ ಒಂದು ಜ್ಯಾತ್ಯತೀತ ರಾಷ್ಟ್ರ, ಇಲ್ಲಿ ಎಲ್ಲ ಧರ್ಮಗಳು ತಮ್ಮ ತಮ್ಮ ನಂಬಿಕೆಗೆ ತಕ್ಕಂತೆ ಒಂದೆಡೆ ಸೇರುವುದು, ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶವಿದೆ. ಅಲ್ಲದೆ, ಅದು ಅವರ ಮೂಲಭೂತ ಹಕ್ಕು ಸಹ ಹೌದು. ಅದರಂತೆ ಎಲ್ಲ ಧರ್ಮಗಳು ತಮ್ಮ ನಂಬಿಕೆಗೆ ತಕ್ಕಂತೆ ಸಾಮೂಹಿಕ ಪ್ರಾರ್ಥನೆ ನಡೆಸಬಹುದು. ಇದನ್ನು ತಡೆದರೆ ಧಾರ್ಮಿಕ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಪೀಠ ವ್ಯಾಖ್ಯಾನಿಸಿದೆ.
ಅಂದಹಾಗೆ, ಶ್ರೀರಾಮಸೇನೆ ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು 'ಬೆನ್ನಿ ಹಿನ್ ಎಂಬ ಇಸ್ರೇಲಿನ ಜೆರೂಸೆಲಂ ಮೂಲದ ಆದರೆ ಪ್ರಸ್ತುತ ಅಮೆರಿಕದ ಪ್ರಜೆ ಕ್ಯಾನ್ಸರ್/ ಏಡ್ಸ್ ನಂತಹ ಅರಿಭಯಂಕರ ಕಾಯಿಲೆಗಳನ್ನು 'ಕೈ' ಸ್ಪರ್ಶ ಮಾತ್ರದಿಂದಲೇ ವಾಸಿ ಮಾಡುತ್ತೇನೆ ಎಂದು ಬೂಸಿ ಬಿಡುತ್ತಾನೆ. ಜತೆಗೆ ಸಮಯ ನೋಡಿಕೊಂಡು ಮತಾಂತರವನ್ನೂ ಮಾಡಿಬಿಡುತ್ತಾನೆ. ಹಾಗಾಗಿ ಅವನು ಬೆಂಗಳೂರಿನಲ್ಲಿ ನಡೆಸಲಿರುವ ಸಭೆಗೆ ಅವಕಾಶ ನಿಡಬಾರದು' ಎಂದು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿಎಚ್ ವೇಲಾ ಮತ್ತು ಬಿವಿ ನಾಗರತ್ನ ಅವರ ವಿಭಾಗೀಯ ಪೀಠವು ಸಾಮೂಹಿಕ ಧಾರ್ಮಿಕ ಪ್ರಾರ್ಥನೆಯನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅಷ್ಟೇ ಅಲ್ಲ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್ ಪಿ ಅಮೃತೇಶ್ ಅವರು ಬೆನ್ ಹಿನ್ 2005ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಸಮೂಹಿಕ ಪ್ರಾರ್ಥನಾ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಸುಮಾರು 100ಕ್ಕೂ ಹೆಚ್ಚು ಸರಕಾರಿ ಬಸ್ಸುಗಳು ಧ್ವಂಸಗೊಂಡಿದ್ದವು. ಈ ಸಂಬಂಧ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಅರ್ಜಿದಾರ ಪ್ರಮೋದ್ ಮುತಾಲಿಕ್ ಜ. 3ರಂದು ಪತ್ರ ಬರೆಯಲಾಗಿತ್ತಾದರೂ ಇಲ್ಲಿಯವರೆಗೂ ಉತ್ತರ ಬಂದಿಲ್ಲ, ಕನಿಷ್ಟ ದೂರವಾಣಿ ಕರೆ ಮೂಲಕ ಸಂಪರ್ಕಿಸಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಕೆಂಡಾಮಂಡಲವಾದ ನ್ಯಾಯಪೀಠವು 'ಅರ್ಜಿದಾರ ಯಾರು? ಅವರಿಗೆ ಪೊಲೀಸ್ ಆಯುಕ್ತರು ಯಾಕೆ ಕರೆ ಮಾಡಿ ಮಾತನಾಡಬೇಕು? ಪ್ರತಿದಿನ ಪೊಲೀಸ್ ಆಯುಕ್ತರಿಗೆ ನೂರಾರು ಜನ ಪತ್ರ ಬರೆಯುತ್ತಾರೆ. ಅವರೆಲ್ಲರಲ್ಲೂ ಕರೆ ಮಾಡಿ ಮಾತನಾಡುವುದು ಪೊಲೀಸ್ ಆಯುಕ್ತರ ಕರ್ತವ್ಯ ಅಲ್ಲ' ಎಂದು ನ್ಯಾಯಪೀಠ ಕಿಡಿಕಾರಿತು.