ಕರ್ನಾಟಕ ರಾಜ್ಯ ಪ್ರವೇಶಿಸಿದ ಮುಂಗಾರು
ಬೆಂಗಳೂರು,ಜೂ.9: ರಾಜ್ಯಕ್ಕೆ ಮುಂಗಾರು ಮಳೆಯ ಆಗಮನವಾಗಿದೆ. ನೈರುತ್ಯ ಮುಂಗಾರು ಜೂ.9 ಸೋಮವಾರರಂದು ಕರಾವಳಿ, ದಕ್ಷಿಣ ಒಳನಾಡಿಗೆ ಪ್ರವೇಶಿಸಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಕೇರಳಕ್ಕೆ ಪ್ರವೇಶಿಸಿರುವ ಮುಂಗಾರು ಮಳೆ ಕೇರಳದ ಎಲ್ಲಾ ಪ್ರದೇಶಗಳನ್ನು ವ್ಯಾಪಿಸಿದ್ದು ಅಲ್ಲಿ ಮಳೆಯಾಗುತ್ತಿದೆ. ಇದೀಗ ರಾಜ್ಯಕ್ಕೂ ಪ್ರವೇಶಿಸಿದ್ದು ದಕ್ಷಿಣ ಕನ್ನಡ, ಉಡುಪಿ, ಕೊಡಗು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಿದೆ.
ಎರಡು ಮೂರು ದಿನದಲ್ಲಿ ಮುಂಗಾರು ರಾಜ್ಯದ ಎಲ್ಲಾ ಪ್ರದೇಶಗಳನ್ನು ಆವರಿಸುವ ಸಾಧ್ಯತೆಯಿದೆ. ಆರಂಭದಲ್ಲಿ ಮುಂಗಾರು ಮಳೆ ದುರ್ಬಲವಾಗಿದ್ದು ಹಲವೆಡೆ ಸಾಧಾರಣ ಮಳೆಯಾಗಿದೆ. ಮುಂದಿನ ಮೂರು ದಿನಗಳಲ್ಲಿ ತೀರ ಪ್ರದೇಶ, ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಉಳಿದ ಪ್ರದೇಶಗಳಲ್ಲಿ ಮಳೆಯಾಗಿದೆ.
ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಅತಿ ಹೆಚ್ಚು 7 ಸೆಂ.ಮೀ ಮಳೆಯಾಗಿದೆ. ಮಂಗಳೂರು 5 ಸೆಂ.ಮೀ, ಯೆಗಟಿ(ಚಿಕ್ಕಮಗಳೂರು) 4 ಸೆಂಮೀ, ಮೂಡಬಿದ್ರೆ(ದಕ್ಷಿಣ ಕನ್ನಡ), ಕೊಟ್ಟಿಗೆಹಾರ(ಚಿಕ್ಕಮಗಳೂರು) 3 ಸೆಂ.ಮೀ ಮಳೆಯಾಗಿದೆ.