ರಾಜ್ಯಸಭಾ ರೇಸ್: ಬಿಜೆಪಿಯಿಂದ ಪ್ರಕಾಶ್ ಶೆಟ್ಟಿ?
ತೆರವಾಗುವ ರಾಜ್ಯಸಭಾ ಸ್ಥಾನಕ್ಕೆ ಹೊರಗಿನವರನ್ನು ಆಯ್ಕೆ ಮಾಡದೇ ರಾಜ್ಯದವರನ್ನೇ ಆಯ್ಕೆ ಮಾಡಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ. ಆದರೇ ಈ ವಿಷಯದಲ್ಲಿ ಕೇಂದ್ರ ಸಮಿತಿ ನಿರ್ಣಯವೇ ಅಂತಿಮ ಎನ್ನಲಾಗಿದ್ದು, ಜೂ.3ರಂದು ಕೋರ್ ಕಮಿಟಿ ಸಭೆ ನಡೆಸಿ ಹೆಸರನ್ನು ಅಂತಿಮಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ ರಾತ್ರಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ ಕೋರೆ ಮತ್ತು ಪ್ರಕಾಶ್ ಶೆಟ್ಟಿ ಇಬ್ಬರಲ್ಲಿ ಯಾರನ್ನು ರಾಜ್ಯಸಭೆ ಕಳುಹಿಸಬೇಕು ಎನ್ನುವುದರ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ.[ರಾಜ್ಯಸಭೆ ಅಖಾಡಕ್ಕೆ ಸಿಎಂ ಆಪ್ತ ಇಬ್ರಾಹಿಂ]
ಪ್ರಭಾಕರ ಕೋರೆಯವರು ಉತ್ತರ ಕಾರ್ನಟಕದ ಪ್ರಭಾವಿ ಲಿಂಗಾಯತ ನಾಯಕರಾಗಿದ್ದು , ಅವರನ್ನು ಆಯ್ಕೆ ಮಾಡಿದ್ದಲ್ಲಿ ಪಕ್ಷದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆದರೆ ಕೆಲ ನಾಯಕರಲ್ಲಿ ಪ್ರಭಾಕರ ಕೋರೆಯವರನ್ನು ಮರಳಿ ರಾಜ್ಯಸಭೆಗೆ ನೇಮಕ ಮಾಡುವಲ್ಲಿ ಅಸಮಾಧಾನವಿದೆ. ಕೋರೆ ಅವರು ತಮಗೆ ಲಭಿಸಿದ ಅನುದಾನವನ್ನು ಸಮರ್ಪಕವಾಗಿ ಬಳಸಿಲ್ಲ. ಅಷ್ಟೇ ಅಲ್ಲದೇ ಬಿಜೆಪಿ ಶಾಸಕರು ಮನವಿ ಮಾಡಿದರೂ ಅವರ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ ಎಂಬ ಆರೋಪವನ್ನು ಕೆಲ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.
ಸಂಘ ಪರಿವಾರ ಪ್ರಕಾಶ್ ಶೆಟ್ಟಿ ಹೆಸರನ್ನು ಸೂಚಿಸಿದ್ದು ಕರಾವಳಿ ಬಿಜೆಪಿ ನಾಯಕರು ಒಲವು ತೋರಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ಶೆಟ್ಟಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು.