ಚಿರತೆ ಭೀಕರ ದಾಳಿ: ಮಗನನ್ನು ರಕ್ಷಿಸಿ ತಾನು ಸತ್ತ ಅಪ್ಪ
ಇದಕ್ಕೆ ತಾಜಾ ನಿದರ್ಶನವೆಂಬಂತೆ ಸೋಮವಾರ ತಡರಾತ್ರಿ ಮದ್ದೂರು ತಾಲೂಕು ಗೆಜ್ಜಲಗೆರೆ ಬಳಿಯ ವಳಗೆರೆಹಳ್ಳಿ ಗ್ರಾಮದಲ್ಲಿ ಗದ್ದೆಗೆ ನೀರು ಕಟ್ಟಲು ಹೋದ 52 ವರ್ಷದ ಶಿವರಾಜು ಚಿರತೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ತಮ್ಮ ಪುತ್ರ ನವೀನ್ ಜತೆ ಗದ್ದೆಗೆ ನೀರು ಕಟ್ಟಲು ನಿನ್ನೆ ರಾತ್ರಿ 12 ಗಂಟೆ ಸುಮಾರಿನಲ್ಲಿ ಶಿವರಾಜು ನೀರು ಕಟ್ಟಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಬ್ಬಿನ ಗದ್ದೆಯಲ್ಲಿದ್ದ ಚಿರತೆ ಏಕಾಏಕಿ ಶಿವರಾಜು ಮೇಲೆ ಎರಗಿದೆ. ಆತನ ಕುತ್ತಿಗೆ ಹಿಡಿದು ರಕ್ತ ಹೀರಿದೆ. ಇದರಿಂದ ಶಿವರಾಜು ಅವರು ವಿಚಲಿತರಾದರೂ ಪುತ್ರ ನವೀನನ್ನು ಅಲ್ಲಿಂದ ಓಡಿಹೋಗುವಂತೆ ಕೂಗಿಕೊಂಡಿದ್ದಾರೆ. ಇತ್ತ ನವೀನ ಎದ್ನೋ ಬಿದ್ನೋ ಎಂದು ಊರಕಡೆ ಓಡಿ ಜನರಿಗೆ ತಿಳಿಸಿದ್ದಾನೆ. ಶಿವರಾಜುರನ್ನು ರಕ್ಷಿಸಲು ಊರವರೆಲ್ಲಾ ಓಡಿ ಹೋಗಿದ್ದಾರೆ. ಆದರೆ ಆ ವೇಳೆಗೆ ಚಿರತೆ ತನ್ನ ಕಾರ್ಯ ಮುಗಿಸಿತ್ತು.
ಕಳೆದ 6 ತಿಂಗಳಿಂದ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪದೇಪದೇ ಮನವಿ ಮಾಡಿದ್ದರೂ, ಚಿರತೆಯನ್ನು ಹಿಡಿಯುವ ಪ್ರಯತ್ನ ಮಾಡಿಲ್ಲ. ಇದರಿಂದ ವಳಗೆರೆಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ತಡರಾತ್ರಿಯಿಂದ ಪ್ರತಿಭಟನೆ ನಡೆಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮದ್ದೂರು ತಹಸೀಲ್ದಾರ್ ಮಂಚೇಗೌಡ ಗ್ರಾಮಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಆದರೆ ಇದಕ್ಕೆ ಬಗ್ಗದ ಗ್ರಾಮಸ್ಥರು ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಆಗಮಿಸಬೇಕೆಂದು ಮೃತ ಶಿವರಾಜುವಿನ ಶವವನ್ನು ಹೊರತೆಗಯಲು ಬಿಡದೆ ಪ್ರತಿಭಟನೆ ನಡೆಸಿದ್ದಾರೆ. ಈಗ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ, ಎಸ್ಪಿ ಭೂಷಣ್ ಜಿ. ಬೊರಸೆ, ಉಪವಿಭಾಗಾಧಿಕಾರಿ ಶಾಂತ ಹುಲ್ಮನಿ ಸ್ಥಳಕ್ಕೆ ಆಗಮಿಸಿದ್ದು, ಗ್ರಾಮಸ್ಥರ ಜತೆ ಮಾತುಕತೆ ನಡೆಸಿದ್ದಾರೆ.
ಮತ್ತೊಂದೆಡೆ ನೂರಾರು ರೈತರು ಗೆಜ್ಜಲಗೆರೆಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸುತ್ತಿದ್ದು, ಮೃತ ಶಿವರಾಜುವಿನ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡುವಂತೆ ಆಗ್ರಹಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಸ್ಪಿ ಭೂಷಣ್ ಜಿ. ಬೊರಸೆ ಅರಣ್ಯ ಇಲಾಖೆ ವತಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡಿಸುವುದಾಗಿ ಘೋಷಿಸಿ, ಹೆಚ್ಚಿನ ಬೇಡಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ರಸ್ತೆ ತಡೆಯನ್ನು ರೈತರು ತೆರವುಗೊಳಿಸಿದರು.
ಚಿರತೆ ದಾಳಿಯಿಂದ ರೈತರೊಬ್ಬರು ಪ್ರಾಣ ಕಳೆದುಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಡಿಸಿ ತಮ್ಮಣ್ಣ ಅವರು ಸಂತ್ರಸ್ತರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು.