ಮುಸ್ಲಿಂ ಸಾದರ ಬಣಜಿಗ ಪಂಚಮಸಾಲಿ ನೊಣಬ...
ದಾವಣಗೆರೆಯಲ್ಲಿರುವ ಒಂದು ಲಕ್ಷದ ನಲವತ್ತು ಸಾವಿರದ ಮುಸ್ಲಿಂ ವೋಟುಗಳಲ್ಲಿ ದಾವಣಗೆರೆಯಲ್ಲಿಯೇ ಎಂಬತ್ತು ಸಾವಿರದಷ್ಟಿವೆ. ಅವೆಲ್ಲಾ ನಂದೇ ಅಂದು ಕೂತುಕೊಂಡಿರುವ ಕಾಂಗ್ರೆಸ್ಸು, ಕಳೆದ ತಿಂಗಳು ನಡೆದ ಮಹಾನಗರಪಾಲಿಕೆ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನೇ ಉಪಮೇಯರ್ ಮಾಡಿದೆ. ಸೈಯದ್ ಸೈಫುಲ್ಲಾ ಶಾಮನೂರು ಧಣಿಯ ಮನೆಮಗನಂತೇ ಇದ್ದವರು ಈಗ ಜೆಡಿಎಸ್ ಮಹಿಮಾ ಪಟೇಲನ ಟ್ರಂಪ್ ಕಾರ್ಡ್. ಅವರೆಷ್ಟು ದಾವಣಗೆರೆಯ ಮುಸ್ಲಿಂ ಓಟು ಒಡೆಯುತ್ತಾರೋ, ಅಷ್ಟು ಖುಷಿ ಬಿಜೆಪಿಯ ಪಾಲಿಗೇ ಆಗಲಿದೆ.
ದಾವಣಗೆರೆ ಬಿಟ್ಟರೆ, ಚನ್ನಗಿರಿ ಮತ್ತು ಹರಿಹರದಲ್ಲಿ ಮುಸ್ಲಿಂ ವೋಟುಗಳ ಪ್ರಾಬಲ್ಯ ಹೆಚ್ಚು. ಅಲ್ಲಿ ಜೆಡಿಎಸ್ ಇಕ್ಕಳ ಕಾಂಗ್ರೆಸ್ಸಿಗೆ ನೋವುಂಟು ಮಾಡುವುದು ಗ್ಯಾರಂಟಿ. ಮಹಿಮಾ ಪಟೇಲ್ ಕೀಳುವ ಪ್ರತಿ ಮುಸ್ಲಿಂ ವೋಟು, ಕಾಂಗ್ರೆಸ್ಸಿನ ಅಹಿಂದ ವೋಟುಗಳು ಸಿದ್ಧೇಶ್ ಪಾಳೆಯಕ್ಕೆ ಖುಶಿಯನ್ನೇ ತರುತ್ತಿದ್ದರೆ, ಮಲ್ಲಿಕಾರ್ಜುನನ ಪಾಲಿಗೆ ಕಂಟಕವೇ.
ಇನ್ನು ದಾವಣಗೆರೆಯ ಬಹುಸಂಖ್ಯಾತ ಲಿಂಗಾಯತ ವೋಟುಗಳು: ರಾಜ್ಯದಾದ್ಯಂತ ಜಾತಿಗಳ ಲೆಕ್ಕಾಚಾರದ ರಾಜಕಾರಣವಾದರೆ, ದಾವಣಗೆರೆಯಲ್ಲಿ ಲಿಂಗಾಯತ ಜಾತಿಯೊಳಗಿನ ಪಂಗಡಗಳ ಲೆಕ್ಕಾಚಾರವೇ ಹೆಚ್ಚು. ಸಾದರು, ಬಣಜಿಗರು, ಪಂಚಮಸಾಲಿ, ನೊಣಬ, ಜಂಗಮ, ಜವಳಿ, ಜಾಡ ಮುಂತಾದ ಪಂಗಡಗಳಲ್ಲಿ ಕಿರುಗುಟ್ಟುವ ಇಲ್ಲಿಯ ಲಿಂಗವಂತರನ್ನ, ಖುದ್ದು ಬಸವಣ್ಣನೂ ಸಹಿಸಿಕೊಳ್ಳಲಾರ. ಬಿಜೆಪಿ ಮತ್ತು ಕಾಂಗ್ರೆಸ್ಸುಗಳು, ಕಳೆದ ಇಪ್ಪತ್ತು ವರ್ಷಗಳಿಂದಲೂ ಸಾದರು ಲಿಂಗಾಯತರ ಕಡೆಯೇ ಒಲವು ತೋರಿದ್ದರ ಪರಿಣಾಮವೋ ಏನೋ, ಉಳಿದ ಪಂಗಡಗಳಲ್ಲಿ ಈ ಬಾರಿಯ ಚುನಾವಣೆ ಹುರುಪು ತಂದುಬಿಟ್ಟಿದೆ. [ದಾವಣಗೆರೆ ಕ್ಷೇತ್ರದ ಕಿರುಪರಿಚಯ]
ಮಹಿಮಾ ಪಟೇಲ್ ಮುಖಾಂತರ ಜಾತಿ ಪಂಗಡ ಆಟ ಆಡಲು ಬಯಸುವ ಅನೇಕರು ದಾವಣಗೆರೆಯಲ್ಲಿದ್ದಾರಾದರೂ, ಯಾರಿಗೂ ಎದುರಾಎದುರು ನಿಂತು ಹೋರಾಡುವ ಹುಕಿಯಿಲ್ಲ. ಅದಕ್ಕಿಂತ ಹೆಚ್ಚಾಗಿ ಮಹಿಮಾ ಪಟೇಲ್ ಕೂಡಾ ಈ ರೀತಿಯ ರಾಜಕೀಯಕ್ಕೆ ಸಿದ್ಧರಿಲ್ಲ. ಅವರಪ್ಪ ಜೆ.ಎಚ್ ಪಟೇಲರಂತೂ ಎಲ್ಲ ಜಾತಿಯವರನ್ನೂ ತಮ್ಮ ಬೀಗರು ಎಂದೇ ನಗೆಚಾಟಿ ಹಾರಿಸಿಕೊಂಡು ರಾಜಕಾರಣ ಮಾಡುತ್ತಿದ್ದವರು.
ತನ್ನ ಮನೆಯಲ್ಲಿ ಎಲ್ಲಾ ಜಾತಿಯ ಎಲ್ಲ ಪಂಗಡದ ಜನರೊಂದಿಗೆ ಮದುವೆ ಆಗಿದೇರಿ, ನನಗ್ಯಾವ ಜಾತಿ? ನನಗ್ಯಾವ ಪಂಗಡ ಅನ್ನುವ ಮಹಿಮಾ, ಮತ್ತೆ ವೇದಾಂತಿಯಂತೆ, ಪ್ರೀತಿ ಮಾಡಿ, ದ್ವೇಷ ಬಿಡಿ, ಧ್ಯಾನ ಮಾಡಿ, ಸಿಟ್ಟು ಬೇಡ ಅಂತ ಶುರುಹಚ್ಚಿಕೊಂಡು ಬಿಡುತ್ತಾರೆ. ಆದರೂ ಈ ಪಂಗಡಗಳ ರಾಜಕೀಯ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸೋದು ನಿಶ್ಚಿತ. ಉದಾಹರಣೆಗೆ, ಹೊನ್ನಾಳಿಯಂತಹ ಕ್ಷೇತ್ರದಲ್ಲಿ, ಜೆಡಿಎಸ್ ನಲ್ಲಿ ಬಾವುಟ ಹಿಡಿಯೋಕೂ ಜನರಿಲ್ಲ ಆದರೂ ಮಹಿಮನಿಗೆ ಸಾವಿರಗಳ ಲೆಕ್ಕದಲ್ಲಿ ಅಲ್ಲಿ ವೋಟು ಸಿಗೋದು ಗ್ಯಾರಂಟಿ. ಬಹುಶಃ ಅದನ್ನೇ ಮಹಿಮಾ ಪಟೇಲ್ ಗುಪ್ತಗಾಮಿನಿಯಂತಹ ಅಲೆ ಅನ್ನುತ್ತಾರೋ ಏನೋ!