ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 20ಟ್ವೆಂಟಿ ಕ್ರಿಕೆಟ್!
ಬಿಜೆಪಿ ಸಿದ್ಧೇಶಿ 'ಬೌಲಿಂಗು'. ಕಾಂಗೈನ ಶಾಮನೂರು ಮಲ್ಲಿಯ 'ಬ್ಯಾಟಿಂಗು'. ಜೆಡಿಎಸ್ ಮಹಿಮಾ ಪಟೇಲನೇ 'ಅಂಪೈರು'! ಮಹಿಮ ಅಂಪೈರ್ ಹೇಗಾಗ್ತಾರೆ? ಅವರಿಗೆ ಗೆಲ್ಲಲು ಇಷ್ಟವಿಲ್ಲವಾ ಅಥವಾ ಸಾಧ್ಯವಿಲ್ಲವಾ? ಎಂದು ಲೆಕ್ಕಾಚಾರ ಹಾಕುತ್ತಿರುವವರ ಪ್ರಶ್ನೆಗೆ ಮುಂದೆ ಉತ್ತರ ಸಿಗಲಿದೆ. ಓದುತ್ತ ಸಾಗಿರಿ.
ಮಧ್ಯ ಕರ್ನಾಟಕದ ಸ್ಟಾರ್ ಕ್ಷೇತ್ರವಾದ ದಾವಣಗೆರೆಯಲ್ಲಿ ಭಯಂಕರ ಬಿಸಿಲು. ಜೊತೆಗೆ ಕಣ್ಣಿಗೆ ರಾಚುವ ಧೂಳು. ಇದರ ಮಧ್ಯೆ ರಾಜಕೀಯದ ಟ್ವೆಂಟಿ ಟ್ವೆಂಟಿ ಮ್ಯಾಚಿಗೆ ಭರ್ಜರಿ ತಯಾರಿ ನಡೆದಿದೆ. ಕಳೆದೆರಡು ಚುನಾವಣೆಗಳಲ್ಲಿದ್ದ ಕದನ ಕುತೂಹಲ ಈ ಬಾರಿಯೂ ಮುಂದುವರೆದಿದೆ.
2004 ಮತ್ತು 2009ರಲ್ಲಿ ಭೀಮಸಮುದ್ರದ ಅಡಿಕೆ ಮಂಡಿ ಧಣಿ ಜಿ.ಎಂ.ಸಿದ್ದೇಶ್ವರ ಈ ಕ್ಷೇತ್ರದಲ್ಲಿ ಗೆದ್ದು ಬಂದರೂ ಅಧಿಕಾರವಿಲ್ಲದೇ ಹೋದರು. ಈ ಎರಡೂ ಚುನಾವಣೆಗಳಲ್ಲಿಯೂ ಸೋತಿದ್ದು ಕಾಂಗ್ರೆಸ್ಸಿನ ಶಾಮನೂರು ಮಲ್ಲಿಕಾರ್ಜುನ. ವಿಧಾನಸಭೆಯಲ್ಲಿ ಸೋತಿಲ್ಲ, ಲೋಕಸಭೆಯಲ್ಲಿ ಗೆದ್ದಿಲ್ಲ ಅನ್ನೋ ಪರಿಸ್ಥಿತಿಯಲ್ಲಿ ಸಿದ್ದೇಶ್ ರವರ ಹ್ಯಾಟ್ರಿಕ್ ಬಾಲ್ ಫೇಸ್ ಮಾಡಲಿದ್ದಾರೆ ಮಲ್ಲಿ. ಸಿದ್ಧೇಶಗೆ ಸತತ ಮೂರನೇ ಬಾರಿ ಜಯ ದಾಖಲಿಸಿ ಹ್ಯಾಟ್ರಿಕ್ ಸಾಧಿಸುವ ಇರಾದೆ ಇದ್ದರೆ, ಶಾಮನೂರು ಧಣಿ ಮಲ್ಲಿಗೆ ಶತಾಯಗತಾಯ ಈ ಬಾರಿ ಗೆದ್ದು ಜಿಲ್ಲಾ ಕಾಂಗ್ರೆಸನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕಿದೆ. [ಜಿಎಂ ಸಿದ್ದೇಶ್ವರ ಪರಿಚಯ]
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಗೆಲುವಿಗೆ ಬೇಕಾದ ರಣತಂತ್ರಗಳೊಂದಿಗೆ, ಮ್ಯಾಚ್ ಫಿಕ್ಸಿಂಗ್ ಗೆ ಕೂಡ ಕೈ ಹಾಕಿವೆ. ಪಕ್ಷಾಂತರಿಗಳಿಗಂತೂ, ದಾವಣಗೆರೆಯಲ್ಲಿ ಇನ್ನೂ ದುರುಗಮ್ಮನ ಹಬ್ಬ ಮುಗಿದೇ ಇಲ್ಲ! ಕಳೆದಬಾರಿಯಂತೆ, ಈ ಬಾರಿಯೂ ಕ್ಲೋಸ್ ಫೈಟು ಎಂದುಕೊಂಡರೆ, ಅದೆಲ್ಲಿ ಧ್ಯಾನಕ್ಕೆ ಕೂತಿದ್ದರೋ, ಜೆ.ಎಚ್. ಪಟೇಲರ ಕುಲಪುತ್ರ, ಮಹಿಮಾ ಪಟೇಲ್! ದೇವೇಗೌಡರ ತೆನೆ ಹೊತ್ತ ಮಹಿಳೆಯನ್ನು ಕಡ ಇಸಿದುಕೊಂಡು ಓಡೋಡಿ ಬಂದು ಅಂಪೈರು ಆಗಿ ದಾವಣಗೆರೆ ಕ್ಷೇತ್ರವೆಂಬ ಪಿಚ್ ಮಧ್ಯ ವಿರಾಜಮಾನನಾಗಿಬಿಟ್ಟಿದ್ದಾನೆ.
ನಾಡು ಕಂಡ ವರ್ಣರಂಜಿತ ಮುಖ್ಯಮಂತ್ರಿ ಜೆ.ಹೆಚ್ ಪಟೇಲರ ಕೊಡುಗೆ ದಾವಣಗೆರೆ ಜಿಲ್ಲೆ. ಈ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಜಗಳೂರು, ಹರಿಹರ, ಹರಪನಹಳ್ಳಿ, ಹೊನ್ನಾಳಿ, ಚನ್ನಗಿರಿ ಹೀಗೆ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಹರಿಹರವನ್ನ ಹೊರತುಪಡಿಸಿ, ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ಸಿನ ಎಂ.ಎಲ್.ಎ ಗಳಿದ್ದಾರೆ. ಹರಿಹರದಲ್ಲಿ ಮಾಜಿ ಮಂತ್ರಿ ಶಿವಪ್ಪನವರ ಮಗ ಶಿವಶಂಕರ್ ಜೆಡಿಎಸ್ ನಿಂದ ಗೆದ್ದಿದ್ದರೂ ಕ್ಷೇತ್ರದಲ್ಲಿ ಪಕ್ಷಕ್ಕಿಂತಲೂ, ಆತನ ಪರ್ಸನಲ್ ಮತ್ತು ಫ್ಯಾಮಿಲಿ ಚರಿಷ್ಮಾಗೆ ಹೆಚ್ಚು ಬೆಲೆ. ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ಏಳು ಕ್ಷೇತ್ರಗಳಲ್ಲಿ ಹಿಡಿತ ಹೊಂದಿದ್ದ ಬಿಜೆಪಿ, ಗೆಲುವಿಗಾಗಿ ಎದುಸಿರುಬಿಟ್ಟಿತ್ತು. ಕೇವಲ 2024 ವೋಟುಗಳ ಅಂತರದಲ್ಲಿ ಜಯಗಳಿಸಿತ್ತು.