ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಕೈ ಪ್ರಾಬಲ್ಯ
ಬೆಂಗಳೂರು, ಮೇ 23 : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ 9 ಸ್ಥಾನಗಳನ್ನು ಗಳಿಸಿದೆ. ಏಳು ಮೀಸಲು ಕ್ಷೇತ್ರಗಳ ಪೈಕಿ ಐದು ಸ್ಥಾನಗಳನ್ನು ಕೈವಶ ಮಾಡಿಕೊಂಡಿದ್ದು, ಎರಡು ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಬಿಜೆಪಿ ಕೈಯಲ್ಲಿದ್ದ ರಾಯಚೂರು ಮತ್ತು ಚಿತ್ರದುರ್ಗ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಕರ್ನಾಟಕದ 28 ಕ್ಷೇತ್ರಗಳ ಪೈಕಿ ಏಳು ಸ್ಥಾನಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿವೆ ಮೀಸಲಾಗಿವೆ. ಮೀಸಲು ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಹಿಡಿತ ಸಾಧಿಸಿದ್ದು ಐದು ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜಾಪುರ ಮತ್ತು ಬಳ್ಳಾರಿ ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಕಮಲ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ.[ಮೊದಲ ಬಾರಿ ಸಂಸತ್ ಪ್ರವೇಶಿಸಿದ 11 ಸಂಸದರು]
ರಾಜ್ಯದ ಬಳ್ಳಾರಿ, ಬಿಜಾಪುರ, ರಾಯಚೂರು, ಕೋಲಾರ, ಗುಲ್ಬರ್ಗ, ಚಿತ್ರದುರ್ಗ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಗಳು. ಇವರಲ್ಲಿ ರಾಯಚೂರು, ಚಿತ್ರದುರ್ಗ, ಬಳ್ಳಾರಿ ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ ಅಭ್ಯರ್ಥಿಗಳು ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡುತ್ತಿದ್ದಾರೆ. ಮೀಸಲು ಕ್ಷೇತ್ರದ ಬಗ್ಗೆ ಒಂದಷ್ಟು ವಿವರಗಳು ಇಲ್ಲಿವೆ
ಕೋಲಾರದಲ್ಲಿ ಸೋಲಿಲ್ಲದ ಸರದಾರನ ದರ್ಬಾರ್
ಕರ್ನಾಟಕದ ಮೀಸಲು ಕ್ಷೇತ್ರಗಳಲ್ಲಿ ಚಿನ್ನದ ನಾಡು ಕೋಲಾರವೂ (ಎಸ್ ಸಿ) ಒಂದು, 2014ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರು 47,850 ಮತಗಳ ಅಂತರದಿಂದ ಜಯಗಳಿಸುವ ಮೂಲಕ ಸಂಸತ್ ಪ್ರವೇಶಿಸಿದ್ದಾರೆ. ಕ್ಷೇತ್ರ ಭದ್ರವಾಗಿ ಕೈವಶದಲ್ಲಿದ್ದು, ಇದೇ ಕ್ಷೇತ್ರದಿಂದ ಆರು ಬಾರಿ ಮುನಿಯಪ್ಪ ಗೆಲುವು ಸಾಧಿಸಿದ್ದಾರೆ. ಈ ಬಾರಿ ಜೆಡಿಎಸ್ ಅಭ್ಯರ್ಥಿ ಕೇಶವ ಅವರು ಮನಿಯಪ್ಪ ಅವರಿಗೆ ಭಾರೀ ಪೈಪೋಟಿ ನೀಡಿದರೂ 3,71,076 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಮೊದಲ ಬಾರಿ ಸಂಸತ್ ಪ್ರವೇಶಿಸಿದ ಶ್ರೀರಾಮುಲು
ಬಳ್ಳಾರಿ ಮೀಸಲು (ಎಸ್ ಟಿ) ಲೋಕಸಭಾ ಕ್ಷೇತ್ರ 2014ರ ಚುನಾವಣೆಯಲ್ಲಿಯೂ ಬಿಜೆಪಿ ಪಾಲಾಗಿದೆ. 5,34,406 ಮತಗಳನ್ನು ಗಳಿಸಿದ ಬಿ.ಶ್ರೀರಾಮುಲು 85,144ಮತಗಳ ಅಂತರದಿಂದ ಜಯಗಳಿಸುವ ಮೂಲಕ ಸಂಸತ್ ಪ್ರವೇಶಿಸಿದ್ದಾರೆ. ಕಳೆದ ಬಾರಿ ಶ್ರೀರಾಮುಲು ಅವರ ಸಹೋದರಿ ಜೆ.ಶಾಂತಾ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಎನ್.ಹನುಮಂತಪ್ಪ ಬಿ.ಶ್ರೀರಾಮುಲು ಅವರಿಗೆ ಭಾರೀ ಪೈಪೋಟಿ ನೀಡಿದರೂ ಕೇವಲ 4,49,262 ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು.
ಬಿಜೆಪಿ ಕೈ ತಪ್ಪಿದ ಚಿತ್ರದುರ್ಗ ಕ್ಷೇತ್ರ
ಬಿಜೆಪಿಯ ಜನಾರ್ದನ ಸ್ವಾಮಿ ಸಂಸದರಾಗಿದ್ದ ಚಿತ್ರದುರ್ಗ (ಎಸ್ ಸಿ) ಕ್ಷೇತ್ರ 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದೆ. ಬಿ.ಎನ್.ಚಂದ್ರಪ್ಪ ಅವರು 1,01,291 ಮತಗಳ ಅಂತರದಿಂದ ಜನಾರ್ದನ ಸ್ವಾಮಿ ಅವರಿಗೆ ಸೋಲುಣಿಸಿದ್ದಾರೆ. ಹಾಲಿ ಸಂಸದರಾಗಿದ್ದ ಜನಾರ್ದನ ಸ್ವಾಮಿ 3,66,226 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸ್ವಾಮಿ ಅವರಿಗೆ ಸೋಲುಣಿಸಿದ ಚಂದ್ರಪ್ಪ ಅವರು ಮೊದಲ ಬಾರಿಗೆ ಸಂದದರಾಗಿ ಆಯ್ಕೆಯಾಗಿದ್ದಾರೆ.
ಗುಲ್ಬರ್ಗದಲ್ಲಿ ಜಯಭೇರಿ ಬಾರಿಸಿದ ಖರ್ಗೆ
2014ರ ಚುನಾವಣೆಯಲ್ಲಿ ಹಲವು ಕೇಂದ್ರ ಸಚಿವರು ಸೋತು ಮನೆ ಸೇರಿದ್ದಾರೆ. ಆದರೆ, ಕೇಂದ್ರ ರೈಲ್ವೆ ಖಾತೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗ (ಎಸ್ ಸಿ) ಮೀಸಲು ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಎರಡನೇ ಬಾರಿ ಸಂಸತ್ ಪ್ರವೇಶಿಸಿದ್ದಾರೆ. 5,07,193 ಮತಗಳನ್ನು ಪಡೆದ ಖರ್ಗೆ ಬಿಜೆಪಿ ಅಭ್ಯರ್ಥಿ ರೇವೂನಾಯಕ ಬೆಳಮಗಿ ಅವರನ್ನು 74,733 ಮತಗಳ ಅಂತರದಿಂದ ಜಯಗಳಿಸಿದರು.
ಬಿಜಾಪುರ ಕ್ಷೇತ್ರ ಬಿಜೆಪಿ ಪಾಲಿಗೆ
ಬಿಜಾಪುರ (ಎಸ್ ಸಿ) ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಿದೆ. ರಮೇಶ್ ಜಿಗಜಿಣಗಿ 69,819 ಮತಗಳ ಅಂತರದಿಂದ ಜಯಗಳಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ರಾಥೋಡ್ ಅವರನ್ನು ಸೋಲಿಸಿದರು. 4,71,757 ಮತಗಳನ್ನು ಪಡೆದ ರಮೇಶ್ ಜಿಗಜಿಣಗಿ ಜಯಗಳಿಸಿದರೆ, 4,01,938 ಮತಗಳನ್ನು ಪಡೆದ ಪ್ರಕಾಶ್ ರಾಥೋಡ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ರಾಯಚೂರು ಕ್ಷೇತ್ರದಲ್ಲಿ ಅಳಿಯನಿಗೆ ಜಯ
ರಾಯಚೂರು (ಎಸ್ ಟಿ) ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮಾವನನ್ನು ಸೋಲಿಸಿ ಅಳಿಯ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಬಿಜೆಪಿಯಿಂದ ಮಾವ ಶಿವನಗೌಡ ನಾಯಕ ಮತ್ತು ಕಾಂಗ್ರೆಸ್ ಪಕ್ಷದಿಂದ ಅಳಿಯ ಬಿ.ವಿ.ನಾಯಕ 2014ರ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿ.ವಿ.ನಾಯಕ 1499 ಮತಗಳ ಅಂತರದಿಂದ ಶಿವನಗೌಡ ನಾಯಕರನ್ನು ಸೋಲಿಸಿದ್ದಾರೆ. ಬಿ.ವಿ.ನಾಯಕ ಅವರು 4,43,659 ಮತಗಳನ್ನು ಪಡೆದು ಜಯಗಳಿಸಿದರೆ, ಶಿವನಗೌಡ ನಾಯಕ 4,42,160 ಮತಗಳನ್ನು ಪಡೆದರು. 2009ರಲ್ಲಿ ಬಿಜೆಪಿಯ ಸಣ್ಣ ಫಕೀರಪ್ಪ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡಿರಲಿಲ್ಲ.
ಸಿಎಂ ಹುಟ್ಟೂರಿನಲ್ಲಿ ಕಾಂಗ್ರೆಸ್ ಗೆ ಗೆಲುವು
ಸಿಎಂ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಚಾಮರಾನಜಗರ (ಎಸ್ ಸಿ) ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕ್ಷೇತ್ರದಲ್ಲಿ 1,41,182 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರು ಜಯಗಳಿಸುವ ಮೂಲಕ ಎರಡನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಧ್ರುವನಾರಾಯಣ ಅವರು 5,67,782 ಮತಗಳನ್ನು ಪಡೆದರೆ, ಅವರಿಗೆ ಪ್ರಬಲ ಪೈಪೋಟಿ ನೀಡಿದ ಬಿಜೆಪಿ ಅಭ್ಯರ್ಥಿ ಕೃಷ್ಣಮೂರ್ತಿ 4,26,600 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.