ಕೊಪ್ಪಳದಲ್ಲಿ ಸೇಡು ತೀರಿಸಿಕೊಂಡ ಕರಡಿ ಸಂಗಣ್ಣ
ಕೊಪ್ಪಳ ಮೇ.19: ಕೊಪ್ಪಳದಲ್ಲೂ ಈ ಬಾರಿಯೂ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಬಿಜೆಪಿಯ ಕರಡಿ ಸಂಗಣ್ಣ ತನ್ನ ಸಮೀಪದ ಪ್ರತಿ ಸ್ಪರ್ಧಿ ಬಸವರಾಜ್ ಹಿಟ್ನಾಳ್ ಅವರನ್ನು 32,414 ಮತಗಳ ಅಂತರದಿಂದ ಸೋಲಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ.
ಕೊಪ್ಪಳದಲ್ಲಿ ನರೇಂದ್ರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಹೋಗಿದ್ದು ಬಿಜೆಪಿಗೆ ವರವಾಗಿದೆ. ಲೋಕಸಭೆಯಲ್ಲಿ ಗೆಲ್ಲುವ ಮೂಲಕ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಮಗ ರಾಘವೇಂದ್ರ ಹಿಟ್ನಾಳ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.
ಚುನಾವಣೆ ಕಣದಲ್ಲಿ 16 ಅಭ್ಯರ್ಥಿಗಳಿದ್ದರೂ ನೇರ ಹಣಾಹಣಿ ನಡೆದಿರುವುದು ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ. 2009ರ ಚುನಾವಣೆಯಲ್ಲಿ ಬಿಜೆಪಿಯ ಶಿವರಾಮಗೌಡ 81,789 ಮತಗಳಿಂದ ಗೆದ್ದರೆ ಈ ಬಾರಿ ಗೆಲುವಿನ ಅಂತರ ಕಡಿಮೆಯಾಗಿದೆ.ಈ ಬಾರಿ ಶೇ.65.6ರಷ್ಟು ಮತದಾನವಾಗಿದ್ದರೆ, ಕಳೆದ ಬಾರಿ ಶೇ.55.4ರಷ್ಟು ಮತದಾನವಾಗಿತ್ತು.
ಕೇವಲ 10ನೇ ತರಗತಿವರೆಗೆ ಓದಿರುವ ನೂತನ ಸಂಸದ ಕರಡಿ ಸಂಗಣ್ಣ ಇದೀಗ ಇಂಗ್ಲಿಷ್ ತಯಾರಿಯಲ್ಲಿ ತೊಡಗಿದ್ದಾರೆ.ಗ್ರಾಮ ಪಂಚಾಯಿತಿ ಮಟ್ಟದಿಂದ ಶಾಸಕ ಸ್ಥಾನದವರೆಗೂ ಅಧಿಕಾರ ಅನುಭವಿಸಿರುವ ಕರಡಿ ಸಂಗಣ್ಣ, ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಇಷ್ಟು ದಿನಗಳವರೆಗೆ ಸಂಗಣ್ಣ ಅವರಿಗೆ ಇಂಗ್ಲಿಷ್ನ ಅಗತ್ಯ ಅಷ್ಟೊಂದು ಕಂಡು ಬಂದಿರಲಿಲ್ಲ. ಈಗ ಸಂಸದರಾಗಿರುವುದರಿಂದ ದೆಹಲಿಗೆ ಹೋಗಬೇಕಾಗುತ್ತದೆ. ಹೀಗಾಗಿ ಇಂಗ್ಲಿಷ್ ಅಗತ್ಯವೆಂದು ಅರಿತು ಅಧ್ಯ ಯನ ನಡೆಸುತ್ತಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ ಅಶೋಕ ಸ್ವಾಮಿ ಕರಡಿ ಸಂಗಣ್ಣ ಅವರ ಮನೆಗೆ ತೆರಳಿ ಇಂಗ್ಲಿಷ್ ಪಾಠ ಹೇಳಿಕೊಡುತ್ತಿದ್ದಾರೆ. ಈಗಾಗಲೇ ಇಂಗ್ಲಿಷ್ ವ್ಯಾಕರಣ, ವಾಕ್ಯ ರಚನೆ, ಭೂತ, ಭವಿಷ್ಯ ಹಾಗೂ ವರ್ತಮಾನ ಕಾಲದ ವಾಕ್ಯಗಳನ್ನು ಹೇಗೆ ರಚಿಸಬೇಕು? ಸಂಭಾಷಣೆ ಹೇಗೆ ಮಾಡಬೇಕು? ಯಾವ್ಯಾವ ವಸ್ತುಗಳಿಗೆ ಇಂಗ್ಲಿಷ್ನಲ್ಲಿ ಏನೆಂದು ಕರೆಯುತ್ತಾರೆ ಎಂಬುದನ್ನು ಸಂಗಣ್ಣ ಕಲಿತಿದ್ದಾರೆ.
ಕೊಪ್ಪಳ | ಪಡೆದ ಸ್ಥಾನ | ಪಕ್ಷ | ಪಡೆದ ಮತಗಳು |
ಕರಡಿ ಸಂಗಣ್ಣ | 1 | ಬಿಜೆಪಿ | 486383 |
ಬಸವರಾಜ್ ಹಿಟ್ನಾಳ್ | 2 | ಕಾಂಗ್ರೆಸ್ | 453969 |
ಸೈಯದ್ ಆರಿಫ್ | 3 | ಬಿಎಸ್ಪಿ | 9529 |
ಸುರೇಶ್ | 4 | ಸ್ವತಂತ್ರ ಅಭ್ಯರ್ಥಿ | 8292 |