ಲೋಕಸಭಾ ಚುನಾವಣೆ: ಮತ್ತೆ ಮಹಿಳೆಯರ ಮೇಲೆ ಅವಕೃಪೆ
ಬೆಂಗಳೂರು, ಏ. 1: ಮಹಿಳಾ ಸಬಲೀಕರಣ ಎಂದು ಕಾಂಗ್ರೆಸ್ಸಿನ ಯುವರಾಜ ಏನೇ ಗಿಳಿಪಾಠ ಒಪ್ಪಿಸಿದರೂ ಚುನಾವಣಾ ಟಿಕೆಟ್ ನೀಡುವ ವಿಷಯದಲ್ಲಿ ಮಹಿಳೆಯರ ಮೇಲೆ ಅವಕೃಪೆ ತೋರುವುದು ಅಬಾಧಿತವಾಗಿ ಮುಂದುವರಿದಿದೆ. ಇದು ಕಾಂಗ್ರೆಸ್ಸಿಗಷ್ಟೇ ಸೀಮಿತವಾಗಿಲ್ಲ. ಅಧಿಕಾರದ ಗದ್ದುಗೆ ಹಿಡಿಯಲು ಹರಸಾಹಸ ಪಡುತ್ತಿರುವ ಬಿಜೆಪಿಗೂ ಇದು ಅನ್ವಯಿಸುತ್ತದೆ.
ಗಮನಾರ್ಹವೆಂದರೆ ಜೆಡಿಎಸ್ಸಿನಲ್ಲಿ ಮಹಿಳೆಯರಿಗೆ ತುಸು ಹೆಚ್ಚಿಗೆ ಮಣೆ ಹಾಕಲಾಗಿದೆ. ಇನ್ನು, ನೂತನ ಆಮ್ ಆದ್ಮಿ ಪಕ್ಷವೂ ಮೂವರು ಮಹಿಳಾ ಅಭ್ಯರ್ಥಿಗಳ ಬಲವನ್ನು ನೆಚ್ಚಿಕೊಂಡಿದೆ. ವಿವಿಧ ರಾಜಕೀಯ ಪಕ್ಷಗಳಿಂದ ಕಳೆದ ಬಾರಿ 19 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಈ ಬಾರಿ ಒಟ್ಟಾರೆ 23 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇದನ್ನೆಲ್ಲಾ ನೋಡಿದಾಗ ಅದೇನೋ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಬೇಕೆಂಬ ಆಸೆ ಮುಂದಿನ ಲೋಕಸಭೇಯಲ್ಲೂ ಕೈಗೂಡುವುದು ಸಾಧ್ಯವಿಲ್ಲ ಅನ್ನಿಸುತ್ತದೆ. ಅದರಂತೆ ತೋಳ್ಬಲ, ಹಣ ಬಲ ಮತ್ತು ಜನ ಬೆಂಬಲವಿಲ್ಲದೆ ಮಹಿಳಾ ಅಭ್ಯರ್ಥಿಗಳು ಸೊರಗುವುದರಿಂದ ಸ್ಥಾಪಿತ ರೂಢಿಯಂತೆ ಪುರುಷರನ್ನೇ ಗೆಲ್ಲುವ ಕುದುರೆಗಳನ್ನಾಗಿ ಪರಿಗಣಿಸುವುದು ಮುಂದುವರಿದಿದೆ.
ಪಕ್ಷಗಳ ಹಂಗೇಕೆ?: ಆಶ್ಚರ್ಯ ಅಂದರೆ ಈ ಸೋ ಸ್ಥಾಪಿತ ಕಾಲ್ಡ್ ಪಕ್ಷಗಳ ಹಂಗು ಬೇಡವೆಂದು ಪಕ್ಷೇತರರಾಗಿಯಾದರೂ ಈ ಮಹಿಳೆಯರು ಕಣಕ್ಕಿಳಿದು ತಮ್ಮ ಶಕ್ತಿ ಸಾಮರ್ಥ್ಯ ತೋರುತ್ತಾರಾ ಅಂದರೆ ಅದೂ ಇಲ್ಲ!
ಬಿಜೆಪಿ ಒಬ್ಬರಿಗೆ (ಶೋಭಾ ಕರಂದ್ಲಾಜೆ- ಉಡುಪಿ ಚಿಕ್ಕಮಗಳೂರು), ಕಾಂಗ್ರೆಸ್ ಇಬ್ಬರಿಗೆ (ರಮ್ಯಾ -ಮಂಡ್ಯ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್- ಬೆಳಗಾವಿ)ಗೆ ಮಾತ್ರ ಮಣೆ ಹಾಕಲಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಜೆಡಿಎಸ್ಸಿನಿಂದ ಗೀತಾ ಶಿವರಾಜ್ ಕುಮಾರ್ (ಶಿವಮೊಗ್ಗ) ನಂದಿನಿ ಆಳ್ವಾ (ಬೆಂಗಳೂರು ಸೆಂಟ್ರಲ್) ಮತ್ತು ರೂತ್ ಮನೋರಮಾ (ಬೆಂಗಳೂರು ದಕ್ಷಿಣ) ಕಣದಲ್ಲಿರುವ ಮಹಿಳಾ ಅಭ್ಯರ್ಥಿಗಳು. ಇನ್ನು, ನೂತನ ಆಮ್ ಆದ್ಮಿ ಪಕ್ಷದಿಂದ ಬೆಂಗಳೂರು ದಕ್ಷಿಣದಿಂದ ನೀನಾ ಪಿ ನಾಯ್ಕ್, ಗುಲ್ಬರ್ಗಾದಿಂದ ಬಿಟಿ ಲಲಿತಾ ನಾಯ್ಕ್ ಹಾಗೂ ಮೈಸೂರಿನಿಂದ ಪದ್ಮಮ್ಮ ಎಂವಿ ಕಣಕ್ಕಿಳಿದಿದ್ದಾರೆ.