ಮಂಡ್ಯ ಸೊಸೆ ರಕ್ಷಿತಾಗೆ ಕೆಜೆಪಿ ಟಿಕೆಟ್ ಆಫರ್!
ಮಂಡ್ಯ, ಮಾ.3: 'ಕೆಜೆಪಿ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಿಲ್ಲ, ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಮಾತ್ರ ಪಕ್ಷ ತೊರೆದಿದ್ದಾರೆ' ಎಂದು ಬಾಂಬ್ ಸಿಡಿಸುತ್ತಿರುವ ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಅವರು ಮತ್ತೊಂದು ಹೇಳಿಕೆ ನೀಡಿ ಎಲ್ಲರ ಕಣ್ಣು ತಮ್ಮತ್ತ ತಿರುಗುವಂತೆ ಮಾಡಿದ್ದಾರೆ. ನಟಿ, ಜೆಡಿಎಸ್ ನಾಯಕಿ ರಕ್ಷಿತಾ ಪ್ರೇಮ್ ಅವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ಕೆಜೆಪಿ ಟಿಕೆಟ್ ನೀಡಲು ಸಿದ್ಧ ಎಂದು ಘೋಷಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಗೆದ್ದರೆ ತಲೆ ಬೊಳಿಸಿಕೊಳ್ಳುವುದಾಗಿ ಘೋಷಿಸಿರುವ ಪದ್ಮನಾಭ ಪ್ರಸನ್ನ ಅವರು ಈಗ ಮಂಡ್ಯದ ಸೊಸೆ ರಕ್ಷಿತಾ ಪ್ರೇಮ್ ಅವರಿಗೆ ಮಂಡ್ಯದಿಂದ ಸ್ಪರ್ಧಿಸಲು ಜೆಡಿಎಸ್ ಟಿಕೆಟ್ ನೀಡದಿದ್ದರೆ ಕರ್ನಾಟಕ ಜನತಾ ಪಕ್ಷ ನಿಮ್ಮ ಜತೆಗಿರುತ್ತದೆ ಡೋಂಟ್ ವರಿ ಎಂದಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ನಿಂದ ರಕ್ಷಿತಾ ಅವರಿಗೆ ಟಿಕೆಟ್ ಸಿಗುವುದು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಟಿಕೆಟ್ ಪಡೆಯಲು ಸಿ.ಎಸ್ ಪುಟ್ಟರಾಜು, ಭವಾನಿ ರೇವಣ್ಣ ಅವರ ಜತೆ ರಕ್ಷಿತಾ ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ. [ದೇವೇಗೌಡ್ರು ಹಾಸನ, ರಕ್ಷಿತಾಗೆ ಮಂಡ್ಯ ಟಿಕೆಟ್?]
ನಟ, ನಿರ್ದೇಶಕ ಪ್ರೇಮ್ ತಮ್ಮೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ರಕ್ಷಿತಾ ಅವರಿಗೆ ಮಂಡ್ಯದಿಂದ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದಾರೆ. ಹೀಗಾಗಿ ಹೆಚ್ಚು ಕಡಿಮೆ ರಕ್ಷಿತಾ, ಕೆಜೆಪಿ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಕಣಕ್ಕೆ ಇಳಿಯುವುದು ಖಚಿತವಾಗಿದೆ ಎಂದು ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕೆಜೆಪಿಯಿಂದ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇವೆ. 2ನೇ ಪಟ್ಟಿಯನ್ನು ಮಾ. 10ರೊಳಗೆ ಬಿಡುಗಡೆ ಮಾಡಲು ಪಕ್ಷ ನಿರ್ಧರಿಸಿದೆ. ಈ ಬಾರಿ ಚುನಾವಣೆಯಲ್ಲಿ ಕೆಜೆಪಿ ಕನಿಷ್ಠ ಎರಡು ಸ್ಥಾನಗಳನ್ನು ಗೆಲ್ಲಲಿದೆ. ನಾನಂತೂ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸೋಲಿಸುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ನನಗೆ ಬಿಜೆಪಿಗಿಂತ ಯಡಿಯೂರಪ್ಪ ಅವರೇ ಟಾರ್ಗೆಟ್. ಯಾಕೆಂದರೆ ನಮ್ಮ ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಮೋಸ ಮಾಡಿ ಬಿಜೆಪಿಗೆ ಹೋಗಿದ್ದಾರೆ ಎಂದರು.
ನಾನು ಕೂಡಾ ಮಂಡ್ಯದ ಸೊಸೆ ನಾನು ಮಂಡ್ಯದ ಸೊಸೆ, ನನಗೂ ಸ್ಪರ್ಧಿಸಬೇಕೆನ್ನುವ ಆಸೆಯಿದೆ. ನಾನು ಚುನಾವಣೆಗೆ ನಿಂತರೆ ಅದು ಮಂಡ್ಯದಿಂದ ಮಾತ್ರ ಎಂದು 'ಮಂಡ್ಯದ ಗಂಡು' ಪ್ರೇಮ್ ಪತ್ನಿ ರಕ್ಷಿತಾ ಹೇಳಿದ್ದಾರೆ. ಆದರೆ, ಸದ್ಯ ಕುಮಾರಸ್ವಾಮಿ ರಕ್ಷಿತಾಗೆ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಎಸ್ ಪುಟ್ಟರಾಜು ಅಲ್ಲದೆ ಶಾಸಕ ಡಿ.ಸಿ ತಮ್ಮಣ್ಣ ಅವರ ಪುತ್ರ ಡಿ.ಟಿ ಸಂತೋಷ್ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.