ಪ್ರತ್ಯೇಕ ರಾಜ್ಯದ 'ಕತ್ತಿ'ವರಸೆಗೆ ನಾಯಕರ ವಿರೋಧ
ಬೆಂಗಳೂರು, ಸೆ. 19 : ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿರುವ ಮಾಜಿ ಸಚಿವ ಉಮೇಶ್ ಕತ್ತಿ ವಿರುದ್ಧ ಹಲವಾರು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕ ರಾಜ್ಯ ರಚನೆ ವಿಚಾರದಲ್ಲಿ ಬಿಜೆಪಿಯ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಇಬ್ಬರು ಸಚಿವರು ಒತ್ತಾಯಿಸಿದ್ದಾರೆ.
ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಚಿವರಾದ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಸುರೇಶ್ ಕುಮಾರ್ ಉಮೇಶ್ ಕತ್ತಿ ಹೇಳಿಕೆಯನ್ನು ಖಂಡಿಸಿದ್ದಾರೆ. ಪತ್ಯೇಕ ರಾಜ್ಯದ ಬೇಡಿಕೆ ಮುಂದಿಡುತ್ತಿರುವ ಉಮೇಶ್ ಕತ್ತಿಯನ್ನು ತಕ್ಷಣ ಬಂಧಿಸಿ, ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ['ಕತ್ತಿ'ವರಸೆಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ]
ಬಿಜೆಪಿ ಪಕ್ಷಕ್ಕೆ ಅಖಂಡ ಕರ್ನಾಟಕದ ಬಗ್ಗೆ ನಂಬಿಕೆಯಿದ್ದರೆ ತಕ್ಷಣವೇ ಉಮೇಶ್ ಕತ್ತಿ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಒತ್ತಾಯಿಸಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಬಿಜೆಪಿ ಪಕ್ಷದ ನಿಲುವು ಏನು? ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. 'ಕತ್ತಿ' ವರಸೆಗೆ ನಾಯಕರ ತಿರುಗೇಟು
ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾರೆ
'ಉಮೇಶ್ ಕತ್ತಿ ಬಾಯಿ ಚಪಲಕ್ಕೆ ಪ್ರತ್ಯೇಕ ರಾಜ್ಯದ ಮಾತನಾಡುತ್ತಿದ್ದಾರೆ. ಅಖಂಡ ಕರ್ನಾಟಕವನ್ನು ಉಳಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಇಂತಹ ಹೇಳಿಕೆಯಿಂದ ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಹೇಳಿದ್ದಾರೆ.
ಕತ್ತಿಯನ್ನು ಪಕ್ಷದಿಂದ ಹೊರಹಾಕಲಿ
ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು 'ಬಿಜೆಪಿಗೆ ಅಖಂಡ ಕರ್ನಾಟಕದ ಬಗ್ಗೆ ನಂಬಿಕೆಯಿದ್ದರೆ ತಕ್ಷಣವೇ ಕತ್ತಿ ಅವರನ್ನು ಪಕ್ಷದಿಂದ ಹೊರಹಾಕಬೇಕು' ಮತ್ತು 'ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕು' ಎಂದು ಒತ್ತಾಯಿಸಿದರು.
ಉಮೇಶ್ ಕತ್ತಿ ಹೇಳಿಕೆ ಹಿಂಪಡೆಯಲಿ
'ಕರ್ನಾಟಕ ವಿಧಾನಸಭೆಯ ಸದಸ್ಯರಾದ ಉಮೇಶ್ ಕತ್ತಿ ಅವರು ರಾಜ್ಯ ವಿಭಜನೆಯಂತಹ ವಿಷಬೀಜ ಬಿತ್ತುವ ಹೇಳಿಕೆಯನ್ನು ನೀಡಬಾರದು. ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು' ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. 'ಪ್ರತ್ಯೇಕ ರಾಜ್ಯದ ಹೇಳಿಕೆ ರಾಜ್ಯದ ಜನರ ರೋಷಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅವರು ಇಂತಹ ಹೇಳಿಕೆಯನ್ನು ನೀಡಬಾರದಿತ್ತು. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು' ಎಂದರು.
ಸುರೇಶಕುಮಾರ್ ಟೀಕೆ
ಮಾಜಿ ಸಚಿವ ಮತ್ತು ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಹ ಉಮೇಶ್ ಕತ್ತಿ ಮಾತನ್ನು ಖಂಡಿಸಿದ್ದಾರೆ. 'ರಾಜ್ಯ ವಿಭಜನೆಯ ವಿಷಯದಲ್ಲಿ ಉಮೇಶ ಕತ್ತಿ ಇದೇ ರೀತಿ ಮಾತು ಮುಂದುವರಿಸಿದರೆ ಏಕೀಕರಣಕ್ಕೆ ಹೋರಾಡಿದ ಮಹನೀಯರು ಅವರ ವಿರುದ್ಧ ಗುರಾಣಿ ಹಿಡಿದು ಹೋರಾಟಕ್ಕೆ ಇಳಿಯುವ ದಿನ ದೂರ ಇಲ್ಲ' ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿರುವವರು ಗಾಂಭೀರ್ಯದಿಂದ ಮಾತನಾಡುವುದನ್ನು ಕಲಿಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಸಚಿವರಾಗಿದ್ದಾಗ ಕತ್ತಿ ಏನು ಮಾಡಿದರು?
ನಾಡೋಜ ಪಾಟೀಲ್ ಪುಟ್ಟಪ್ಪ ಅವರು ಕತ್ತಿ ಹೇಳಿಕೆಯನ್ನು ಖಂಡಿಸಿದ್ದು, ಕೆಲವು ಕತ್ತೆಗಳು ರಾಜ್ಯ ಒಡೆಯುವ ಕನಸು ಕಾಣುತ್ತಿವೆ ಆದರೆ ಎಂದಿಗೂ ರಾಜ್ಯ ವಿಭಜನೆ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಉಮೇಶ್ ಕತ್ತಿ ಸಚಿವರಾಗಿದ್ದಾಗ ಆ ಭಾಗಕ್ಕೆ ಏನು ಕೊಡುಗೆ ನೀಡಿದ್ದಾರೆ? ಎಂದು ಪ್ರಶ್ನಿಸಿರುವ ಅವರು, ಇವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಲು ಪ್ರತ್ಯೇಕ ರಾಜ್ಯ ಬೇಕೆ? ಎಂದು ಕೇಳಿದ್ದಾರೆ.