ವ್ಯವಸ್ಥೆ ಸುಧಾರಿಸಲು ಹುತಾತ್ಮನಾಗಲು ಸಿದ್ದ: ಕುಮಾರಸ್ವಾಮಿ
ಬೆಂಗಳೂರು, ಜು 10: ಎಂಎಲ್ಸಿ ಡೀಲ್ ವಿದ್ಯಮಾನದ ನಂತರ ಬಹಳಷ್ಟು ಕುಗ್ಗಿದಂತೆ ಕಂಡು ಬಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮತ್ತೆ ಕಣ್ಣೀರಿಟ್ಟಿದ್ದಾರೆ. ಅಲ್ಲದೇ, ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಿಸಲು ತಾನು 'ಹುತಾತ್ಮ'ನಾಗಲು ಸಿದ್ದ ಎಂದು ಹೇಳಿ ಭಾವುಕರಾಗಿದ್ದಾರೆ.
ಈ ರಾಜಕೀಯ ವ್ಯವಸ್ಥೆಗೆ ಕನ್ನಡಿ ಹಿಡಿದಂತೆ ನಾನು ಮಾತನಾಡಿದ್ದೇನೆ. ಜೆಡಿಎಸ್ ನಲ್ಲಿ ಏನೋ ಆಗಬಾರದ್ದು ಆಗಿಹೋಗಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ವಸ್ತು ಸ್ಥಿತಿಯನ್ನು ಅರಿತು ಮಾತನಾಡುವುದು ತಪ್ಪೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. (ಮೇಲ್ಮನೆ ಚುನಾವಣೆ: ಜೆಡಿಎಸ್ನಿಂದ ಕೋಟಿ ಕೋಟಿ ಡೀಲ್)
ಸತ್ಯ ಹೇಳುವುದಕ್ಕೆ ಹೆದರುವ ಜಾಯಮಾನ ನನ್ನದಲ್ಲ. ನಾನು ಯಾವುದೇ ತನಿಖೆಗೆ ಸಿದ್ದ, ನನ್ನನ್ನು ವಿಚಾರಣೆಗೊಳಪಡಿಸಿ. ಜೈಲಿಗೆ ಹೋಗಲೂ ನಾನು ಹಿಂಜರಿಯುವವನು ನಾನಲ್ಲ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದಾರೆ.
ಸದನದಲ್ಲಿ ಬುಧವಾರ (ಜು 9) ಕಂದಾಯ ಇಲಾಖೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಕಂದಾಯ ಇಲಾಖೆಯಲ್ಲಿನ ನ್ಯೂನತೆಯ ಬಗ್ಗೆ ಚರ್ಚೆ ಆದರೆ ಸಾಲದು, ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆಯೂ ಚರ್ಚೆ ನಡೆಯಲಿ ಎಂದು ಸರಕಾರಕ್ಕೆ ಸವಾಲೆಸೆದಿದ್ದಾರೆ.
ಭೂಗಳ್ಳರ ವಿರುದ್ದ ಏನಾದರೂ ತನಿಖೆಯಾಗಿದೆಯಾ?
ಭೂಗಳ್ಳರಿಗೆ ಭೂಮಿ ಯೋಜನೆ ಇರುವುದೇ ಸರಕಾರದ ಭೂಮಿಯನ್ನು ಲಪಟಾಯಿಸಲು ಎಂದು ಲೇವಡಿ ಮಾಡಿದ ಕುಮಾರಸ್ವಾಮಿ, ಕೆರೆ ಒತ್ತುವರಿ ಬಗ್ಗೆ ಲಕ್ಷಣರಾಯ್ ಸಮಿತಿ ನೀಡಿದ ವರದಿ ಅನುಷ್ಠಾನ ಎಲ್ಲಿಗೆ ಬಂತು ಎಂದು ಸರಕಾರವನ್ನು ಪ್ರಶ್ನಿಸಿದ್ದಾರೆ.
ಸಬ್ ರಿಜಿಸ್ಟ್ರಾರ್ ಇಲಾಖೆಯಲ್ಲಿನ ಸತ್ಯ ಹರಿಶ್ಚಂದ್ರರು
ಸಬ್ ರಿಜಿಸ್ಟ್ರಾರ್ ಇಲಾಖೆಯಲ್ಲಿ 36 ಕೋಟಿ ರೂಪಾಯಿಗಳ ಲಂಚದ ವಹಿವಾಟು ನಡೆಯುತ್ತದೆ ಎನ್ನುವ ವಿಷಯ ಸದನದಲ್ಲಿ ಪ್ರಸ್ತಾಪವಾಗಿದೆ. ಇದೇನು ಮಕ್ಕಳಾಟವಾ? ನಾನು ಸತ್ಯ ಹೇಳಿದರೆ ಟಿವಿಯಲ್ಲಿ ಮಾನ ಮರ್ಯಾದೆ ಹರಾಜು ಹಾಕುತ್ತಾರೆ. ಇವರೇನು ಸತ್ಯ ಹರಿಶ್ಚಂದ್ರರ ಮಕ್ಕಳಾ - ಕುಮಾರಸ್ವಾಮಿ
ನನ್ನ ಮಾತಿಗೆ ಬದ್ದನಾಗಿದ್ದೇನೆ
ಎಂಎಲ್ಸಿ ವಿಚಾರದಲ್ಲಿ ನಾನು ಆಡಿದ ಮಾತಿಗೆ ಈಗಲೂ ಬದ್ದನಾಗಿದ್ದೇನೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆಯಾಗಿದೆ ಎಂದು ಬೊಬ್ಬೆ ಹೊಡೆಯುತ್ತಿರುವವರು ತಮ್ಮ ತಮ್ಮ ಆತ್ಮಸಾಕ್ಷಿಗೆ ವಿರುದ್ದವಾಗಿ ಮಾತನಾಡಬಾರದು - ಕುಮಾರಸ್ವಾಮಿ ಉವಾಚ.
ಹುತಾತ್ಮ ಎನ್ನುವ ಪದವನ್ನು ಬಳಸಿಕೊಂಡ ಎಚ್ಡಿಕೆ
ತಮ್ಮ ಭಾಷಣದ ಉದ್ದಕ್ಕೂ ಭಾವೋದ್ವೇಗಕ್ಕೆ ಒಳಗಾಗಿ, ಮೇಜಿ ಕುಟ್ಟಿ ಕುಟ್ಟಿ ಕುಮಾರಸ್ವಾಮಿ ಮಾತನಾಡುತ್ತಿರ ಬೇಕಾದರೆ ಎಲ್ಲಾ ಪಕ್ಷದ ಸದಸ್ಯರು ತದೇಕಚಿತ್ತದಿಂದ ಭಾಷಣವನ್ನು ಆಲಿಸುತ್ತಿದ್ದರು. ಒಂದು ಹಂತದಲ್ಲಿ ತೀವ್ರ ಭಾವೋದ್ವೇಗಕ್ಕೆ ಒಳಗಾದ ಕುಮಾರಸ್ವಾಮಿ ಹುತಾತ್ಮನಾಗಲು ಸಿದ್ದ ಎಂದರು.
ನಾನು ಯಾವ ಕಾನೂನು ಕ್ರಮಕ್ಕೂ ಸಿದ್ದ
ಎಂಎಲ್ಸಿ ವಿಚಾರದಲ್ಲಿ ನನ್ನಿಂದಾಗಿ ನನ್ನ ಪಕ್ಷದವರಿಗೆ, ರಾಜಕಾರಣಿಗಳಿಗೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದ್ದಲ್ಲಿ ನಾನು ಯಾವ ಕಾನೂನು ಕ್ರಮಕ್ಕೂ ಸಿದ್ದ. ಜೈಲಿಗೆ ಹೋಗಲು ನಾನು ಹಿಂಜರಿಯುವವನಲ್ಲ - ಕುಮಾರಸ್ವಾಮಿ