ಮೇಲ್ಮನೆ ಚುನಾವಣೆ: ಜೆಡಿಎಸ್ನಿಂದ ಕೋಟಿ ಕೋಟಿ ಡೀಲ್?
ಬೆಂಗಳೂರು,ಜು.6: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಹಾಕಲು ಪಕ್ಷದ ಶಾಸಕರು 1 ಕೋಟಿ ಕೇಳುತ್ತಿದ್ದಾರೆ ಎಂದು ಪಕ್ಷ ನಾಯಕರ ಜೊತೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಳ್ಳುತ್ತಿರುವ ಧ್ವನಿಮುದ್ರಿತ ಸಿ.ಡಿ ಶನಿವಾರ ಬಹಿರಂಗವಾಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಜಾಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ವಿಜುಗೌಡ ಪಾಟೀಲ್ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಬೇಕೆಂದು ಅವರ ಬೆಂಬಲಿಗರು ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಲ್ಲಿದ್ದವರು ಎಚ್ಡಿಕೆ ಹೇಳಿಕೆಯನ್ನು ರಹಸ್ಯವಾಗಿ ಧ್ವನಿಮುದ್ರಿಸಿಕೊಂಡಿದ್ದರು.
'ವಿಜುಗೌಡ ಪಾಟೀಲ ಅಭಿಮಾನಿ ಬಳಗ' ಎಂಬ ಹೆಸರಿನಲ್ಲಿ ಮಾತುಕತೆಯ ವಿವರಗಳುಳ್ಳ ಸಿ.ಡಿಯನ್ನು ಮಾಧ್ಯಮ ಕಚೇರಿಗಳಿಗೆ ತಲುಪಿಸಲಾಗಿದ್ದು, ಪ್ರಸ್ತುತ ವಿಧಾನಸಭೆಯಲ್ಲಿ 40 ಜೆಡಿಎಸ್ ಶಾಸಕರಿದ್ದು, ಅಭ್ಯರ್ಥಿಗಳಿಂದ ಶಾಸಕರು ಒಂದು ಕೋಟಿ ನೀಡುವಂತೆ ನನ್ನಲ್ಲಿ ಬೇಡಿಕೆ ಇಟ್ಟಿದ್ದಾರೆ ಎಂದು ಎಚ್ಡಿಕೆ ಹೇಳುವ ಮಾತು ಸಿ.ಡಿಯಲ್ಲಿದೆ. [ಎಚ್ಡಿಕೆ 'ಟಿಕೆಟ್' ಹಗರಣದ ಬಗ್ಗೆ ಸಿದ್ದು ಗುದ್ದು]
ವಿಜಾಪುರದಲ್ಲಿ ಪಕ್ಷವನ್ನು ಸಂಘಟಿಸಲು ವಿಜುಗೌಡರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ಎಂದು ಅವರ ಬೆಂಬಲಿಗರು ಮನವಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಎಚ್ಡಿ ಕುಮಾರಸ್ವಾಮಿ ಏನು ಹೇಳಿಕೆ ನೀಡಿದ್ದರು, ಈ ಸಿ.ಡಿ ಬಹಿರಂಗಗೊಂಡ ಬಳಿಕ ಕುಮಾರಸ್ವಾಮಿಯವರು ಮಾಧ್ಯಮಗಳಿಗೆ ನೀಡಿದ ಸ್ಪಷ್ಟನೆಯನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.
1 ಕೋಟಿ ಕೊಡಿ ಎಂದು ಕೇಳುತ್ತಿದ್ದಾರೆ
ವಿಜುಗೌಡ ಪಾಟೀಲ್ ಮೇಲೆ ನನಗೆ ಪ್ರೀತಿಯಿದೆ. ಆತ ಒಳ್ಳೆಯ ಮನುಷ್ಯ. ಅವರನ್ನು ಆಯ್ಕೆ ಮಾಡಲು ಅಭ್ಯಂತರವೇನಿಲ್ಲ. ನಮ್ಮ ಶಾಸಕರು ನಡೆಸಿದ ಸಭೆಯಲ್ಲಿ ತಾವೆಲ್ಲಾ ಚುನಾವಣೆಗಾಗಿ ಸಾಲ ಮಾಡಿಕೊಂಡಿದ್ದು ಹಣ ಕೊಡಿಸಿ ಎಂದು ಹೇಳುತ್ತಿದ್ದಾರೆ. ಮತ ಹಾಕುವವರು ಶಾಸಕರು. ಅವರು ಮತ ಹಾಕದಿದ್ದರೆ ನಾನು ಏನು ಮಾಡಲಿ. ನಮ್ಮ ಶಾಸಕರು ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳಿಂದ ತಲಾ 1 ಕೋಟಿ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ನಮಗೆ ಒಂದೇ ಸ್ಥಾನ ಸಿಕ್ಕುತ್ತೆ. ವ್ಯಾಪಾರ ನಡೀತಾ ಇದೆ.
ಅವರ ಆಯ್ಕೆಗೆ ಬಿಟ್ಟಿದ್ದೇನೆ.
ನಮ್ಮ ಬಳಿ ಒಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಕಾಗುವ 29 ಮತಗಳಿವೆ. ಜೊತೆಗೆ ಹೆಚ್ಚುವರಿಯಾಗಿ 11 ಮತಗಳಿವೆ. ಶಾಸಕರು ನಮಗೆ ಚುನಾವಣೆಯಲ್ಲಿ ಸಾಕಷ್ಟು ಹಣ ಖರ್ಚಾಗಿದೆ ಎಂದು ಹೇಳುತ್ತಿದ್ದಾರೆ. ನೀವೇ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಿ ಎಂದು ಅವರಿಗೆ ತಿಳಿಸಿದ್ದೇನೆ.
ದುಡ್ಡು ಮಾಡಿದವರೇ ದುಡ್ಡು ಕೇಳುತ್ತಿದ್ದಾರೆ:
ನಾವು ಸಾಲ ಮಾಡಿ ಚುನಾವಣೆಯಲ್ಲಿ ಎದುರಿಸಿದ್ದೇವೆ. ನಮಗೆ ದುಡ್ಡು ಬೇಕು ಎಂದು ಕೇಳುತ್ತಿದ್ದಾರೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಅಭ್ಯರ್ಥಿಗಳಿಂದ 1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ನಾನು ನಾವು ಅಧಿಕಾರದಲ್ಲಿದ್ದಾಗ 40 ತಿಂಗಳು ದುಡ್ಡು ಮಾಡಿದವರೇ ಈಗ ತಂಡ ಕಟ್ಟಿಕೊಂಡು ದುಡ್ಡು ಕೇಳುತ್ತಿದ್ದಾರೆ.
ಕಟು ವಾಸ್ತವವನ್ನು ಚರ್ಚಿಸಿದ್ದೇನೆ
ಪ್ರಸಕ್ತ ರಾಜಕಾರಣ ಎಲ್ಲಿಗೆ ಸಾಗುತ್ತಿದೆ ಎನ್ನುವ ಕಟು ವಾಸ್ತವವನ್ನು ಚರ್ಚಿಸಿದ್ದೇನೆ. ತಾವು ಒಳಗೊಂದು ಹೊರಗೊಂದು ಮಾತನಾಡುವ ರಾಜಕಾರಣಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ರಾಜಕಾರಣದ ವಾಸ್ತವಾಂಶಗಳ ಬಗ್ಗೆ ಸಾಮಾನ್ಯ ಚರ್ಚೆ ಮಾಡಿದರೆ ತಮ್ಮನ್ನು ಖಳನಾಯಕನಂತೆ ಪ್ರತಿಬಿಂಬಿಸುವುದು ಸರಿಯಲ್ಲ. ನಾನು ಮಹಾಪರಾಧ ಮಾಡಿಲ್ಲ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದ್ದಾರೆ.
ವಿಜುಗೌಡರವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಮನವಿ ಮಾಡಲು ಬಂದಿದ್ದ ಅವರ ಬೆಂಬಲಿಗರೊಂದಿಗಿನ ಮಾತುಕತೆಯ ಸಿ.ಡಿ. ಬಹಿರಂಗದ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್.ಡಿ.ಕೆ, ಪ್ರಸಕ್ತ ರಾಜಕಾರಣ ಸಾಗುತ್ತಿರುವ ದಾರಿಯ ಬಗ್ಗೆ ಕಟು ವಾಸ್ತವಾಂಶಗಳ ಸಾಮಾನ್ಯ ಚರ್ಚೆ ಮಾಡಿದ್ದೇನೆ. ಬೇರೆ ಪಕ್ಷದವರು ಸತ್ಯ ಹರಿಶ್ಚಂದ್ರರೇ? ಜೆ.ಡಿ.ಎಸ್. ಪಕ್ಷ ಹಾಗೂ ಶಾಸಕರು ದೊಡ್ಡ ಅಪರಾಧವೆಸಗಿದ್ದಾರೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಈ ಬಗ್ಗೆ ಸದನದ ಒಳಗಾಗಲೀ, ಹೊರಗಾಗಲೀ ಸಾರ್ವಜನಿಕ ಚರ್ಚೆಗೆ ಸಿದ್ದ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಿತೂರಿ:
ಎಂಎಲ್ಸಿ ಮಾಡಬೇಕೆಂದು ಒತ್ತಾಯಿಸಿ ಬಬಲೇಶ್ವರದ ನನ್ನ ಬೆಂಬಲಿಗರು ಎಚ್.ಡಿ. ಕುಮಾರಸ್ವಾಮಿ ಬಳಿ ಹೋಗಿದ್ದು ನಿಜ. ಆದರೆ ಸಿಡಿ ಮಾಡಿದ ವಿಷಯ ನನಗೆ ಕಿಂಚಿತ್ ಗೊತ್ತಿಲ್ಲ. ಕುಮಾರಸ್ವಾಮಿ ಹಾಗೂ ತಮ್ಮನ್ನು ದೂರ ಮಾಡುವ ದುರುದ್ದೇಶದಿಂದ ಕಾಂಗ್ರೆಸ್ನವರು ಈ ಕೃತ್ಯ ಎಸಗಿದ್ದಾರೆ. ಅವರು ಯಾವತ್ತೂ ದುಡ್ಡಿನ ವ್ಯವಹಾರ ಕುರಿತು ತಮ್ಮ ಜತೆ ಮಾತನಾಡಿಲ್ಲ. ಯಾರೋ ಕಿತಾಪತಿ ಮಾಡಿದ್ದಾರೆ''
- ವಿಜುಗೌಡ ಪಾಟೀಲ್, ಬಬಲೇಶ್ವರ ಜೆಡಿಎಸ್ ಮುಖಂಡ