ಕೆಪಿಎಸ್ಸಿ ನೇಮಕಾತಿ : ಸರ್ಕಾರಕ್ಕೆ ಎಚ್ಡಿಕೆ 12 ಪ್ರಶ್ನೆಗಳು
ಬೆಂಗಳೂರು, ಆ.11 : ಕರ್ನಾಟಕ ಲೋಕಸೇವಾ ಆಯೋಗದ 2011ನೇ ಸಾಲಿನ ನೇಮಕಾತಿ ರದ್ದು ಪಡಿಸಿರುವ ಸರ್ಕಾರದ ಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಡುವಿನ ವಾಕ್ಸಸಮರಕ್ಕೆ ಕಾರಣವಾಗಿದೆ. ಸಿಎಂ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕುಮಾರಸ್ವಾಮಿ, ತಮ್ಮ 12 ಪ್ರಶ್ನೆಗಳಿಗೆ ಉತ್ತರಿಸುವಂತೆ ಭಾನುವಾರ ಸವಾಲು ಹಾಕಿದ್ದಾರೆ.
ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಹಗರಣದ ಬಗ್ಗೆ ತಮ್ಮ 12 ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಸಿಎಂಗೆ ಸವಾಲು ಹಾಕಿದ್ದಾರೆ. ವಿಧಾನಸೌಧದ ಮೂರನೆ ಮಹಡಿಯಲ್ಲಿ ಸಿಎಂ ನೆರಳಿನಲ್ಲಿಯೇ ನಾನಾ ಇಲಾಖೆಗಳ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮಗಳು ನಡೆದಿದ್ದು, ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ದೂರುಗಳೂ ಇವೆ. ಇವುಗಳ ಬಗ್ಗೆ ಸಿಎಂ ಮೌನ ವಹಿಸಿರುವುದು ಏಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಕುಮಾರಸ್ವಾಮಿ ಪ್ರಶ್ನೆಗಳು ಇಲ್ಲಿವೆ
ಅಜಿ ಅಭಿಪ್ರಾಯವೇನಿತ್ತು?
ನೊಂದ ಅಭ್ಯರ್ಥಿಯೊಬ್ಬರು 2013ರ ಮೇ 28ರಂದು ಅಡ್ವೊಕೇಟ್ ಜನರಲ್ ಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಡೆ ಹಿಡಿಯುವುದಾದರೆ, ಅಡ್ವೊಕೇಟ್ ಜನರಲ್ ಸರ್ಕಾರವನ್ನು ಕೇಳದೆಯೆ ಅಭಿಪ್ರಾಯ ನೀಡಿದ್ದಾರೆಯೆ?
ದೂರು ನೀಡಿದ್ದು ಅಕ್ರಮವಲ್ಲವೇ?
ಕೆಪಿಎಸ್ಸಿ ಸಂದರ್ಶನ ಪೂರ್ಣವಾಗುವವರೆಗೂ ಸುಮ್ಮನಿದ್ದು, ನಂತರ ಅಭ್ಯರ್ಥಿಯೊಬ್ಬರು ಅಕ್ರಮ ನಡೆದಿದೆ ಎಂದು ದೂರು ನೀಡಿದ್ದೇಕೆ? ಅಕ್ರಮ ನಡೆದಿರುವುದು ಗೊತ್ತಿದ್ದರೆ ಮೊದಲೇ ದೂರು ನೀಡಬಹುದಿತ್ತು. ವೈಯಕ್ತಿಕವಾಗಿ ತೊಂದರೆ ಆದಾಗ ದೂರು ನೀಡಿರುವುದು ಅಕ್ರಮವಲ್ಲವೇ?
ಪೂರ್ವನಿಯೋಜಿತ ಅಭಿಪ್ರಾಯ
2011ರ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುವ ಮುನ್ನ ಅಡ್ವೊಕೇಟ್ ಜನರಲ್ ನೀಡಿದ್ದ ಅಭಿಪ್ರಾಯ ಪೂರ್ವ ನಿಯೋಜಿತ ಹಾಗೂ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. [ಕೆಪಿಎಸ್ಸಿ : ನೊಂದ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತ ಎಚ್ಡಿಕೆ]
ಯಾವ ಕ್ರಮ ಕೈಗೊಂಡಿದ್ದೀರಿ?
ಕೆಪಿಎಸ್ಸಿ ಸಮಿತಿಯಲ್ಲಿ ಮಂಗಳಾ ಶ್ರೀಧರ್ ಒಬ್ಬರೆ ಇದ್ದರೆ?. ಸಮಿತಿಯಲ್ಲಿ ಉಳಿದ ಸದಸ್ಯರು ಇದ್ದರೆ ಎಂದಾದರೆ, ಅವರ ವಿರುದ್ಧ ಯಾವ ಕ್ರಮ ಗಳನ್ನು ಸರ್ಕಾರ ಕೈಗೊಂಡಿದೆ?
ರದ್ದು ಮಾಡಲು ತರಾತುರಿ ಏಕೆ?
ಸಿಐಡಿ ವರದಿ ಮೇಲೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇಂತಹ ಸಮಯದಲ್ಲಿ ಆಯ್ಕೆ ಪಟ್ಟಿ ರದ್ದುಮಾಡಲು ತರಾತುರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದೇಕೆ?
ಈ ಪ್ರಶ್ನೆಗೆ ಉತ್ತರ ಕೊಡಿ
ಮಾ.5 2014ರಂದು ತಾತ್ಕಾಲಿಕ ಪಟ್ಟಿ ಪ್ರಕಟಗೊಳ್ಳುವ ಮುನ್ನವೇ ಮುಖ್ಯ ಪರೀಕ್ಷೆಯ ಮೌಲ್ಯಮಾಪನ, ಮೌಖಿಕ ಸಂದರ್ಶನದ ಅಂಕಗಳನ್ನು ರದ್ದುಗೊಳಿಸಲು ಸರ್ಕಾರ ಅ.15,2013 ರಂದು ಆದೇಶ ನೀಡಿದ್ದೇಕೆ? ಇದು ಪೂರ್ವನಿಯೋಜಿತವಲ್ಲವೇ?
ಕಡಿಮೆ ಅಂಕ ಬಂದಿದ್ದು ಸರ್ಕಾರ ಗಮನಿಸಲಿಲ್ಲವೇ?
ರದ್ದುಪಡಿಸಿರುವ 362 ಜನ ಅಭ್ಯರ್ಥಿಗಳ ಪಟ್ಟಿಯಲ್ಲಿ ಆರು ಮಂದಿಗೆ ಮುಖ್ಯ ಪರೀಕ್ಷೆಯಲ್ಲಿ ತಲಾ 1000ಕ್ಕಿಂತ ಹೆಚ್ಚು ಅಂಕ ಬಂದಿದೆ. ಆದರೆ, ಸಂದರ್ಶನದಲ್ಲಿ 60, 70, 80 ಅಂಕವನ್ನು ನೀಡಲಾಗಿದೆ. ಇವುಗಳನ್ನು ಸರ್ಕಾರ ಸರಿಯಾಗಿ ಗಮನಿಸಲಿಲ್ಲವೇ?
362 ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿಲ್ಲವೇ?
ಒಬ್ಬ ಅಭ್ಯರ್ಥಿಯ ದೂರಿಗೆ ಪ್ರಾಶಸ್ತ್ಯ ನೀಡಿ ಸರ್ಕಾರ 362 ಜನರ ನೇಮಕಾತಿಯನ್ನು ರದ್ದುಗೊಳಿಸಿದೆ. ಇದರಿಂದ ಉಳಿದ ಅಭ್ಯರ್ಥಿಗಳಿಗೆ ಸರ್ಕಾರ ಅನ್ಯಾಯ ಮಾಡಿದ್ದು ಸರಿಯಾದ ನಿರ್ಧಾರವೇ?
ಯಾವ ಕ್ರಮ ತೆಗೆದುಕೊಳ್ಳುತ್ತೀರಿ
ಸರ್ಕಾರದ ನಿರ್ಧಾರದಂತೆ ಪುನಃ ಪರೀಕ್ಷೆ ನಡೆದು ಆಯ್ಕೆ ಪಟ್ಟಿ ಹೊರಬಿದ್ದ ನಂತರವೂ ನೇಮಕದಲ್ಲಿ ಅಕ್ರಮ ನಡೆದರೆ ಆಗ ಅಭ್ಯರ್ಥಿಗಳ ದೂರಿನ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಲಿದೆ? ಎಂದು ಸ್ಪಷ್ಟನೆ ನೀಡಬೇಕು.
ಯಾವ ನಂಬಿಕೆ ಇದೆ
ಸರ್ಕಾರದ ನಿರ್ಧಾರದಂತೆ ನಿರುದ್ಯೋಗಿ ಯುವ ಜನತೆ ಯಾವ ನಂಬಿಕೆ ಮೇಲೆ ಮತ್ತೆ ಪರೀಕ್ಷೆ ಬರೆಯಬೇಕು?.
ಮೌಖಿಕ ದೂರು ಎಂದರೇನು?
ಅಕ್ರಮದ ಕುರಿತು ತನಿಖೆ ನಡೆಸಿರುವ ಸಿಐಡಿ ತನ್ನ ವರದಿಯಲ್ಲಿ `oral documentary evidence` ಆಧಾರದ ಮೇಲೆ ಮತ್ತು interview process was an exercise to favour the undeserving "paying" candidates at the expenses of the hapless but meritorious candidates ಎಂದು ತಿಳಿಸಿರುತ್ತಾರೆ. oral documentary evidence` ಎಂದರೆ ಏನು ಎಂದು ಸರ್ಕಾರ ಬಹಿರಂ ಪಡಿಸಬೇಕು.
ಕೋರ್ಟ್ ತೀರ್ಪಿನ ನಂತರದ ಕ್ರಮವೇನು?
ನೊಂದ ಅಭ್ಯರ್ಥಿಗಳು ಕಾನೂನು ಹೋರಾಟ ನಡೆಸಿದ ಬಳಿ ತೀರ್ಪು ಆಯ್ಕೆಗೊಂಡ ಅಭ್ಯರ್ಥಿಗಳ ಪರವಾಗಿ ಬಂದಲ್ಲಿ ಈಗಿನ ಆಯ್ಕೆ ಪಟ್ಟಿ ಹಾಗೂ ಹೊಸ ಪರೀಕ್ಷೆ ಬಳಿಕ ನಡೆಸಿದ ಆಯ್ಕೆ ಪಟ್ಟಿ ಕುರಿತು ಯಾವ ರೀತಿ ಕ್ರಮ ಜರುಗಿಸುತ್ತೀರಿ?