ಚುನಾವಣೆ ಭವಿಷ್ಯ ನಿಜವಾಯ್ತು: ಕೋಡಿಮಠ ಸ್ವಾಮೀಜಿ
ಗದಗ, ಮೇ 21: ಅತ್ತ ನರೆಂದ್ರ ಮೋದಿ ಅವರನ್ನು ಮುಂದಿನ ಪ್ರಧಾನಿಯಾಗಿ ನೇಮಕ ಮಾಡಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಿನ್ನೆ ಆದೇಶದ ಪ್ರತಿಯನ್ನು ಹಸ್ತಾಂತರಿಸುತ್ತಿದ್ದಂತೆ ಇತ್ತ ಗದಗದಲ್ಲಿ ಕೋಡಿಮಠ ಶ್ರೀಗಳು 'ತಾವು ಹೇಳಿದ್ದ ಭವಿಷ್ಯ ನೂರಕ್ಕೆ ನೂರರಷ್ಟು ನಿಜವಾಗಿದೆ' ಎಂದು ಭವಿಷ್ಯದ ಸಾರವನ್ನು ಬಿಡಿಸಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎಂಬುದರ ಕುರಿತು ಮೂರು ಸಾಧ್ಯತೆಗಳ ಬಗ್ಗೆ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದರು. ಗಮನಾರ್ಹವೆಂದರೆ ಅರಸೀಕೆರೆಯ ಕೋಡಿಮಠ ಶ್ರೀಗಳಾದ ಶಿವಾನಂದ ರಾಜೇಂದ್ರ ಸ್ವಾಮೀಜಿ ಅವರು ನುಡಿದಿರುವ ಭವಿಷ್ಯದ ಸಾರವನ್ನು ಯಥಾವತ್ತಾಗಿ ತೆಗೆದುಕೊಂಡರೆ ಅವರು ಹೇಳಿದ್ದು ನಿಜವಾಗಿದೆ. (ಈ ಬಾರಿ ವಿಚಿತ್ರ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ)
ಆದರೆ ಅವರು ಚುನಾವಣೆ ಬಳಿಕ ಏನಾಗಲಿದೆ ಎಂದೂ ಭವಿಷ್ಯ ನುಡಿದಿದ್ದಾರೆ. ಅದೂ ಸಹ ನಿಜವೇ ಆದರೆ ಅದು ದೇಶಕ್ಕೆ ಕರಾಳವಾಗಲಿದೆ. ಇದನ್ನೆಲ್ಲಾ ನೋಡಿದರೆ ಕೋಡಿಮಠ ಶ್ರೀಗಳು ನುಡಿಯುವ ಭವಿಷ್ಯದ ಬಗ್ಗೆ ವಿಶ್ವಾಸ ಹೊಂದಬಹುದೇ? ಎಂದು ನೀವು ಪ್ರಶ್ನಿಸಿದರೆ ಅದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ ಅನ್ನಬಹುದು.
ಈ ಬಾರಿ ಅವರು 'ನಡೆಯುವ ಹಾದಿ ಮೂರು ಕವಲಾಯಿತು. ಮುತ್ತಿನ ಗಿಣಿ ಮುಪ್ಪಾಗದೇ ಮುತ್ತಾಯಿತೋ, ಮುದುಕನ ಕೋಲ ಮೇಲೆ ಕಾಗಿ ಕುಳಿತಿತೋ' ಎಂದು ನಿಗೂಢವಾಗಿ/ಮಾರ್ಮಿಕವಾಗಿ ಕಳೆದ ತಿಂಗಳೂ ಧಾರವಾಡದಲ್ಲಿ ಭವಿಷ್ಯ ಹೇಳಿದ್ದರು. ಆದರೆ ಈ ಭವಿಷ್ಯದೊಳಿಗಿನ ಮರ್ಮ ಅರಿಯದೆ ರಾಜ್ಯದ ಜನತೆ ಕೋಡಿಮಠ ಶ್ರೀಗಳು ಹೇಳಿದ ಭವಿಷ್ಯ ಸುಳ್ಳಾಗಿದೆ ಎಂದು ಕಿಡಿಕಾರಿದ್ದರು. ರಾಜ್ಯಾದ್ಯಂತ ಟೀಕೆಗಳ ಮಹಾಪೂರವೇ ಹರಿದುಬಂದಿತ್ತು. (ಅದೇನೂಂತ ಭವಿಷ್ಯ ಹೇಳ್ಬಿಟ್ರಿ ಕೋಡಿ ಶ್ರೀಗಳೇ)
ಆದರೆ
ಕೋಡಿಮಠ
ಶ್ರೀಗಳೇ
ನಿನ್ನೆ
ಮಾತನಾಡಿದ್ದು,
ತಮ್ಮ
ಭವಿಷ್ಯದ
ಅರ್ಥವನ್ನು
ಉದ್ಯಮಿ
ಮೃತ್ಯುಂಜಯ
ಸಂಕೇಶ್ವರ
ಅವರ
ಮನೆಯಲ್ಲಿ
ಹೀಗೆ
ಬಿಡಿಸಿ
ಹೇಳಿದ್ದಾರೆ.
ನಡೆಯುವ ಹಾದಿ ಮೂರು ಕವಲಾಯಿತು
ಲೋಕಸಭೆ ಚುನಾವಣೆ ಸಂಬಂಧ ಕೋಡಿಮಠ ಶ್ರೀಗಳು ಹೇಳಿದ್ದ ಮೊದಲನೆಯ ಭವಿಷ್ಯವಿದು. ಇದರರ್ಥ ಹೀಗಿದೆ: ಈಗಾಗಲೇ ಕೇಂದ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಸಂಯುಕ್ತರಂಗ ಎಂದು ಮೂರು ಭಾಗಗಳಾಗಿ ಹೋಗಿವೆ.
ಮುದುಕನ ಕೋಲ ಮೇಲೆ ಕಾಗಿ ಕುಳಿತಿತೋ
'ಮುದುಕನ ಕೋಲ ಮೇಲೆ ಕಾಗಿ ಕುಳಿತಿತೋ' ಎಂದು ತಾವು ನುಡಿದಿದ್ದ ಭವಿಷ್ಯವನ್ನು ಬಿಡಿಸಿ ಹೇಳಿರುವ ಕೋಡಿಮಠ ಶ್ರೀಗಳು 'ನೂರಾರು ವರ್ಷಗಳ ಹಳೆಯ ಕಾಂಗ್ರೆಸ್ ಪಕ್ಷದ ಬದಲು ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಿದೆ' ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಮುತ್ತಿನ ಗಿಣಿ ಮುಪ್ಪಾಗದೇ ಮುತ್ತಾಯಿತೋ
ಮೂರನೆಯ ಭವಿಷ್ಯವೂ ಹೀಗಿದೆ: ಮುತ್ತಿನ ಗಿಣಿ ಮುಪ್ಪಾಗಿ ಮುತ್ತಾಯಿತೋ. ಇದರರ್ಥ ಸರಳ ಸುಂದರವಾಗಿದೆ. ಎಂದೂ ಕೇಂದ್ರದಲ್ಲಿ ಯಾವುದೇ ಅಧಿಕಾರ ಹೊಂದಿರದ ಮೋದಿ ಎಂಬ ಮುತ್ತಿನ ಗಿಣಿ ನೇರವಾಗಿ ದೇಶದಲ್ಲಿ ಹೊಳೆಯುವ ಮುತ್ತಾಯಿತೋ ತಮ್ಮಾ ಎಂದು ಕೋಡಿಮಠ ಶ್ರೀಗಳು ತಿಳಿಸಿದ್ದಾರೆ.
ಜೀವ ಜಂತುಗಳಿಂದ ಮಾನವರಿಗೆ ಅಪಾಯವಿದೆ
ಈ ಬಾರಿ ಚುನಾವಣೆ ಮುಗಿಯುತ್ತಿದ್ದಂತೆ ಅಚ್ಚರಿಯ ಘಟನೆಯೊಂದು ಸಂಭವಿಸಲಿದೆ. ಅಲ್ಲದೇ ಜೀವ ಜಂತುಗಳಿಂದ ಮಾನವರಿಗೆ ಅಪಾಯವಿದೆ ಎಂದು ಸ್ವಾಮೀಜಿಗಳು ಆತಂಕ ಮಿಶ್ರಿತ ಎಚ್ಚರಿಕೆಯ ಭವಿಷ್ಯ ನುಡಿದಿದ್ದಾರೆ.
ಶ್ರೀಮಂತರು- ಮಧ್ಯ ವಯಸ್ಕರು ಭಾರಿ ಸಂಖ್ಯೆಯಲ್ಲಿ ಸಾವು
ದೇಶದಲ್ಲಿ ದೊಡ್ಡ ಘಟನೆಯೊಂದು ಸಂಭವಿಸಲಿದ್ದು ಶ್ರೀಮಂತರು ಮತ್ತು ಮಧ್ಯ ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಲಿದ್ದಾರೆ. ಅಲ್ಲದೇ ಬೆಂಕಿಯ ಅವಘಡಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿವೆ. ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗಲಿದ್ದು, ರೈತರಿಗೆ ಸುಖ ಸಮೃದ್ಧಿ ಪ್ರಾಪ್ತಿಯಾಗಲಿದೆ ಎಂದು ಕೋಡಿಮಠ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.