10 ದಿನಗಳಲ್ಲಿ ಪಿಯುಸಿ ಪಠ್ಯ ಪುಸ್ತಕ ವಿತರಣೆ
ಬೆಂಗಳೂರು, ಜೂ.25: ಮುಂದಿನ 10 ದಿನಗಳಲ್ಲಿ ಪಿಯುಸಿ ಪಠ್ಯ ಪುಸ್ತಕಗಳನ್ನು ಪೂರೈಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಿಧಾನಪರಿಷತ್ಗೆ ತಿಳಿಸಿದ್ದಾರೆ.
ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಕ್ಯಾ.ಗಣೇಶ್ ಕಾರ್ನಿಕ್ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು ಕಳೆದ ಎರಡು ವರ್ಷಗಳಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದಲೇ ಪುಸ್ತಕ ವಿತರಣೆ ಮಾಡಲಾಗುತ್ತಿತ್ತು. ಈ ಬಾರಿ ಟೆಂಡರ್ ಪ್ರಕ್ರಿಯೆ ವಿಳಂಬವಾದ ಹಿನ್ನಲೆಯಲ್ಲಿ ಪುಸ್ತಕ ವಿತರಣೆ ವಿಳಂಬವಾಗಿದೆ. ಮುಂದಿನ 10 ದಿನಗಳಲ್ಲಿ ಪಠ್ಯ ಪುಸ್ತಕಗಳನ್ನು ಸಮರ್ಪಕ ವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಲಾಗುವುದು ಎಂದರು.
ಕಳೆದ ಬಾರಿ ಪ್ರಕಟಣೆಯ ಜವಾಬ್ದಾರಿ ಪಡೆದ ಪುಸ್ತಕ ಪ್ರಕಾಶನವು ಈ ಬಾರಿಯೂ ನಮಗೆ ಟೆಂಡರ್ ಸಿಗಲಿದೆ ಎಂದು ಭಾವಿಸಿ ಹೆಚ್ಚು ಪುಸ್ತಕಗಳನ್ನು ಮುದ್ರಣ ಮಾಡಿತ್ತು. ಹೀಗಾಗಿ ಈ ಬಾರಿ ಟೆಂಡರ್ ಪಡೆದ ಪುಸ್ತಕ ಪ್ರಕಾಶನವು ಈ ಹಿಂದಿನ ಪ್ರಕಾಶನ ವಿರುದ್ದ ನ್ಯಾಯಾಲಯದ ಮೊರೆ ಹೋಗಿತ್ತು. ಈ ಕಾರಣದಿಂದಾಗಿ ಬಾರಿ ಪುಸ್ತಕ ವಿತರಣೆಯಲ್ಲಿ ವಿಳಂಬವಾಗಿದೆ. ಈ ಗೊಂದಲಗಳನ್ನು ಬಗೆಹರಿಸಿ ಕೆಲವೇ ದಿನಗಳಲ್ಲಿ ಪುಸ್ತಕ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.[ಹೈಟೆಕ್ ಆಗಿದೆ ವಿಧಾನ ಪರಿಷತ್ ಸಭಾಂಗಣ]
ಮುಂದಿನ ಶೈಕ್ಷಣಿಕ ವರ್ಷದಿಂದ ಪುಸ್ತಕ ವಿತರಣೆಯಲ್ಲಿ ವಿಳಂಬವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಪ್ರಾಥಮಿಕ ತರಗತಿಗಳ ಪುಸ್ತಕ ವಿತರಣೆ ವ್ಯವಸ್ಥೆಯ ಮಾದರಿಯಲ್ಲಿಯೇ ಟೆಂಡರ್ ಕರೆದು ಮುಂಚಿತವಾಗಿಯೇ ಪಿಯು ಪುಸ್ತಕಗಳು ಮಾರುಕಟ್ಟೆಯಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಪರಿಷತ್ಗೆ ಕಿಮ್ಮನೆ ರತ್ನಾಕರ್ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 9.36 ಲಕ್ಷ ಪಿಯುಸಿ ವಿದ್ಯಾರ್ಥಿಗಳಿದ್ದು 45 ಲಕ್ಷ ಪಠ್ಯಪುಸ್ತಕ ಮಾರುಕಟ್ಟೆಗೆ ವಿತರಣೆಯಾಗಬೇಕಿತ್ತು. ಆದರೆ ಇದುವರೆಗೆ ಏಳು ಲಕ್ಷ ಪಠ್ಯಪುಸ್ತಕಗಳು ಮಾತ್ರ ಮಾರುಕಟ್ಟೆಗೆ ವಿತರಣೆಯಾಗಿದೆ. ಇಂಗ್ಲಿಷ್, ಕನ್ನಡ, ಭೌತಶಾಸ್ತ್ರ ಸ್ವಲ್ಪ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪೂರ್ಣ ಪ್ರಮಾಣದಲ್ಲಿ ಯಾವ ವಿಷಯದ ಪುಸ್ತಕಗಳು ಮಾರುಕಟ್ಟೆಗೆ ವಿತರಣೆಯಾಗಿಲ್ಲ.