ಹಳೆಯ ದ್ವೇಷ: ಕಾರವಾರದಲ್ಲಿ ಕುಟುಂಬಸ್ಥರ ಬರ್ಬರ ಹತ್ಯೆ
ಒಂದು ಕಾಲು ಇಲ್ಲದೆ ವಿಲಚೇತನನಾಗಿದ್ದ ವೇಲು (40) ಪತ್ನಿ ಮತ್ತು ಮಕ್ಕಳೊಂದಿಗೆ ನಿರ್ಜನ ಪ್ರದೇಶದಲ್ಲಿ ಜೀವಿಸುತ್ತಿದ್ದ. ಆದರೆ ನಿನ್ನೆ ರಾತ್ರಿ ಯಾವುದೋ ದ್ವೇಷ ಸಾಧನೆಗಾಗಿ ದುಷ್ಕರ್ಮಿಗಳು ಅವರಕುಟುಂಬದ ಮೇಲೆ ಬರಸಿಡಿಲಿನಂತೆ ಎರಗಿ ವೇಲು, ಆತನ ಇಬ್ಬರು ಮಕ್ಕಳಾದ ಸತ್ಯನಾರಾಯಣ (10) ಮತ್ತು ಅಶ್ವಿನಿ (7) ಎಂಬಿಬ್ಬರು ಕಂದಮ್ಮಗಳನ್ನು ಸಹ ಬಿಡದೆ ಕೊಚ್ಚಿಹೋಗಿದ್ದಾರೆ.
ಇದೇ ಸಂದರ್ಭದಲ್ಲಿ ವೇಲು ಪತ್ನಿ ಜಾನಕಿ (35) ಮೇಲೂ ಮಾರಣಾಂತಿಕ ಹಲ್ಲೆಯಾಗಿದ್ದು, ಆಕೆಯ ಕೈ ಕತ್ತರಿಸಿಲಾಗಿದೆ. ಗಾಯಾಳು ಜಾನಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಗೋವಾದ ಬಾಂಬೋಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ 11 ಗಂಟೆಯಲ್ಲಿ ಈ ಮಾರಣ ಹೋಮ ನಡೆದಿದೆ. ಬಾಲಕಿ ಅಶ್ವಿನಿಯನ್ನು ಮನೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಉಳಿದಿಬ್ಬರ ಶವಗಳು ಮನೆಯ ಎದುರಿಗೆ 50 ಮೀಟರ್ ದೂರದಲ್ಲಿರುವ ತೋಪಿನಲ್ಲಿ ಸಿಕ್ಕಿವೆ. ತುಂಡಾದ ಜಾನಕಿಯ ಕೈ ಮೆನೆಯೆದುರೇ ಬಿದ್ದಿತ್ತು ಎಂದು ಕಾರವಾರ ಪೊಲೀಸರು ಶನಿವಾರ ಬೆಳಗ್ಗೆ ತಿಳಿಸಿದ್ದಾರೆ.
ಜಿಲ್ಲಾ ಎಸ್ಪಿ ದಿಲೀಪ್, ಕದ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸಿದ್ದಾರೆ. ವೇಲು ಪತ್ನಿ ಜಾನಕಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚೇತರಿಸಿಕೊಂಡು ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.