ಕರವೇಯಿಂದ ಮತ್ತೆ ಯಳ್ಳೂರು ಚಲೋ ಚಳವಳಿ
ಬೆಂಗಳೂರು,ಆ.6:ಬೆಳಗಾವಿ ಗಡಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡಾಟ ಖಂಡಿಸಿ ಕರ್ನಾಟಕ ರಕ್ಷಣ ವೇದಿಕೆ ಮತ್ತೊಮ್ಮೆ "ಯಳ್ಳೂರು ಚಲೋ" ಚಳವಳಿಗೆ ಕರೆ ನೀಡಿದೆ.
ನಗರದ ಸಿಟಿಡೆಲ್ ಹೊಟೇಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ " ಆ.10 ರಂದು ಬೆಳಗಾವಿಯಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲಿದ್ದೇವೆ. ಈ ಸಭೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕರವೇ ಕಾರ್ಯಕರ್ತರು ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.[ಹುಬ್ಬಳ್ಳಿಯಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಬಂಧನ]
ಗಡಿ ಭಾಗದಲ್ಲಿ ಎಂಇಎಸ್ ಮತ್ತು ಶಿವಸೇನೆ ಪದೇ ಪದೇ ಖ್ಯಾತೆ ತೆಗೆದು ಕನ್ನಡಿಗರಿಗೆ ಹಿಂಸೆ ನೀಡುತ್ತಿದೆ. ಇನ್ನು ಮುಂದೆ ಕನ್ನಡಿಗರ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ಟಿ.ನಾರಾಯಣಗೌಡ ಎಂಇಎಸ್ ಮತ್ತು ಶಿವಸೇನೆಗೆ ಎಚ್ಚರಿಕೆ ನೀಡಿದರು.[ಬೆಳಗಾವಿ: ಸಿದ್ದು ಸರ್ಕಾರ ವಿರುದ್ಧ ಕನ್ನಡಿಗರ ಆಕ್ರೋಶ]
ಕನ್ನಡ ಮತ್ತು ಕರ್ನಾಟಕವನ್ನು ಸುಟ್ಟು ಹಾಕುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಉದ್ದಟತನದ ಮಾತನಾಡಿದ್ದಾರೆ. ಬೆಳಗಾವಿ ಯಾವತ್ತೂ ಕರ್ನಾಟಕದ ಭಾಗ. ಅದನ್ನು ಕಿತ್ತುಕೊಳ್ಳಲು ಯಾರಿಗೂ ಬಿಡುವುದಿಲ್ಲ ಎಂದು ಅವರು ಹೇಳಿದರು.[ಬೆಂಗಳೂರು ಬಂದ್ನಲ್ಲಿ ಕರವೇ ನಾರಾಯಣ ಗೌಡ ಏಕಿಲ್ಲ?]
ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನೆ ಮತ್ತು ಎಂಇಎಸ್ ಪುಂಡಾಟ ಹೆಚ್ಚಾಗುತ್ತಿದೆ. ಇವುಗಳಿಗೆ ಮೂಗುದಾರ ಹಾಕಬೇಕು. ಪದೇ ಪದೇ ಖ್ಯಾತೆ ತೆಗೆಯುತ್ತಿರುವ ಇವುಗಳನ್ನು ನಿಷೇಧಿಸುವಂತೆ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.