ಸೋಮವಾರ ಪ್ರಚಾರದಲ್ಲಿ ಕೇಳಿಬಂದ ಹೇಳಿಕೆಗಳು
ಬೆಂಗಳೂರು, ಏ.15 : ಕರ್ನಾಟಕದಲ್ಲಿನ ಅಬ್ಬರದ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬೀಳಲಿದೆ. ಕಳೆದ 15 ದಿನಗಳಿಂದ ಕೇಳಿಬರುತ್ತಿದ್ದ ನಾಯಕರ ಆರೋಪ ಪ್ರತ್ಯಾರೋಪಗಳು ಕೊನೆಯಾಗಲಿದ್ದು, ಇನ್ನೇನಿದ್ದರೂ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ನಡೆಸಬಹುದಾಗಿದೆ.
ಸೋಮವಾರ ಸಹ ಕರ್ನಾಟಕದಲ್ಲಿ ಪ್ರಚಾರದ ಕಾವು ಹೆಚ್ಚಾಗಿತ್ತು, ನಾಯಕರು ಕಟು ಶಬ್ದಗಳಿಂದ ಪ್ರತಿಪಕ್ಷದವರನ್ನು ತಿವಿದರು, ಟೀಕಿಸಿದರು, ವ್ಯಂಗ್ಯವಾಡಿದರು. ಸೋಮವಾರ ಪ್ರಚಾರದ ಅಬ್ಬರದ ನಡುವೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ನೀಡಿದ ಕೆಲವು ಹೇಳಿಕೆಗಳು ಇಲ್ಲಿವೆ ನೋಡಿ. [ಅಬ್ಬರದ ಪ್ರಚಾರಕ್ಕೆ ಇಂದು ತೆರೆ]
ದೇವೇಗೌಡರ ನಿವೃತ್ತಿ ಬೇಡ
ಮಾತಿನಲ್ಲೇ ಎಟು ಕೊಡುವುದರಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ನಿಸ್ಸೀಮರು ಸೋಮವಾರ ಮಂಡ್ಯದಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅವರು "ದೇವೇಗೌಡರು ನಿವೃತ್ತಿ ತೆಗೆದುಕೊಳ್ಳಬೇಕಿಲ್ಲ, ಸೂರ್ಯ ಚಂದ್ರರು ಎಷ್ಟು ಸತ್ಯವೂ ಮೋದಿ ಪ್ರಧಾನಿಯಾಗುವುದು ಅಷ್ಟೇ ಸತ್ಯ" ಎಂದು ಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ
ಜೆಡಿಎಸ್ ಪಕ್ಷವನ್ನು ಸದಾ ಟೀಕಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ " ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬತಹ ಪಕ್ಷ" ಅದಕ್ಕೆ ಮತ ಕೊಟ್ಟರೆ ನೀವು ಬಿಜೆಪಿಗೆ ಮತ ಕೊಟ್ಟಂತೆ ಆಗುತ್ತದೆ ಎಂದು ಜನರಿಗೆ ಸಲಹೆ ನೀಡಿದ್ದಾರೆ.
ಗುಜರಾತ್ ನವರು ಏಕೆ ಪಾನಿಪೂರಿ ಮಾರುತ್ತಾರೆ
ಪಂಚಿಂಗ್ ಡೈಲಾಗ್ ಹೊಡೆಯುವ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಚಾಮರಾಜನಗರದಲ್ಲಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಎಲ್ಲರೂ ಗುಜರಾತ್ ಅಭಿವೃದ್ಧಿ ಹೊಂದಿದ ರಾಜ್ಯ ಎಂದು ಹೇಳುತ್ತಾರೆ. ಆದರೆ, ಗುಜರಾತ್ ನವರು ಇಲ್ಲಿಗೆ ಬಂದು ಪಾನಿಪೂರಿ ಮಾರುತ್ತಾರೆ. ರಾಜ್ಯ ಅಷ್ಟು ಅಭಿವೃದ್ಧಿ ಹೊಂದಿದ್ದರೆ ಅವರೇಕೆ ಪಾನಿಪೂರಿ ಮಾರಬೇಕು" ಎಂದು ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಥರ್ಡ್ ರೇಟ್ ಗೂಂಡಾ
"ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಥರ್ಡ್ ರೇಟ್ ಗೂಂಡಾ, ನಂಬಿದವರ ಬೆನ್ನಿಗೆ ಚೂರಿ ಹಾಕುವವರು" ಎಂದು ಮಾಜಿ ಸಚಿರ ಉಮೇಶ್ ಕತ್ತಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, "ಉಮೇಶ್ ಕತ್ತಿ ದ್ರೋಹಿ, ಸಮಯ ಸಾಧಕ" ಎಂದು ಪ್ರತ್ಯುತ್ತರ ನೀಡಿದ್ದಾರೆ.
ಸಿದ್ದರಾಮಯ್ಯ ಮೈಸೂರಿಗೆ ಮಾತ್ರ ಸಿಎಂ
"ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಗೆ ಮಾತ್ರ ಸಿಎಂ ಎಂಬಬಂತೆ ವರ್ತಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ" ಎಂದು ಮಾಜಿ ಸಚಿವ ಗೋವಿಂದ ಎಂ.ಕಾರಜೋಳ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ.
ಮೋದಿ ಪಿತ್ತ ನೇತ್ತಿಗೇರಿದೆ
"ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪಿತ್ತ ನೆತ್ತಿಗೇರಿದೆ. ಇದರಿಂದಾಗಿಯೇ ಅವರು ದೇವೇಗೌಡರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ" ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಧನಂಜಯ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಇಟಲಿಯಿಂದ ಬಂದವರು ಪ್ರಧಾನಿಯಾಗಬಾರದು
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಗುಡುಗಿದ್ದಾರೆ. "ಇಟಲಿ ಬಂದವರು ಪ್ರಧಾನಿಯಾಗಬಾರದು, ಆದರೆ, ನಮ್ಮ ದೇಶದಲ್ಲೇ ಕಸ-ಮುಸುರೆ ತೊಳೆದ ತಾಯಿಯ ಮಗ ಮೋದಿ ಪ್ರಧಾನಿಯಾಗಬಹುದು" ಎಂದು ಅವರು ಹೇಳಿದ್ದಾರೆ.